ನೆಲಕಪ್ಪಳಿಸಿದ ಬಳಿಕ ಗುಜರಾತ್ನಲ್ಲಿ ದುರ್ಬಲಗೊಂಡ ತೌಕ್ತೆ, ಮುಂದುವರಿದ ಭಾರೀ ಮಳೆ
ಅಹಮದಾಬಾದ್, ಮೇ 18: ಸಾಕಷ್ಟು ಅನಾಹುತ, ಆತಂಕವನ್ನು ಸೃಷ್ಟಿಸಿದ್ದ ತೌಕ್ತೆ(ತೌ'ತೆ) ಚಂಡಮಾರುತ ಸೋಮವಾರ ರಾತ್ರಿ ಗುಜರಾತ್ ಕರಾವಳಿ ಭಾಗದಲ್ಲಿ ಭೂಮಿಗೆ ಅಪ್ಪಳಿಸಿದ್ದು ಅದಾದ ಬಳಿಕ ದುರ್ಬಲಗೊಳ್ಳುತ್ತಾ ಸಾಗಿದೆ. ಗುಜರಾತ್ನ ಸೌರಾಷ್ಟ್ರ ಭಾಗದ ದಿಯು ಹಾಗೂ ಉನಾ ಮಧ್ಯೆ ಸೋಮವಾರ ರಾತ್ರಿ 9 ಗಂಟೆಯ ಬಳಿಕ ಭೂಮಿಗೆ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ರಾತ್ರಿ 12ರವರೆಗೂ ಇದು ಮುಂದುವರಿದಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈವರೆಗೆ ಯಾವುದೇ ದುರ್ಘಟನೆಗಳು ಈ ಭಾಗದಲ್ಲಿ ಸಂಭವಿಸಿಲ್ಲ. ಚಂಡಮಾರುತದ ಮುನ್ನೆಚ್ಚರಿಕಾ ಕ್ರಮವಾಗಿ 2 ಲಕ್ಷ ಜನರನ್ನು ಗುಜರಾತ್ ರಾಜ್ಯ ಸರ್ಕಾರ ಸ್ಥಳಾಂತರಿಸಿತ್ತು. ಚಂಡಮಾರುತ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದೆ.
"ಗುಜರಾತ್ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಭೂಮಿಗೆ ಅಪ್ಪಳಿಸಿದ ನಂತರ ಇಂದು ಮುಂಜಾನೆ 'ಅತ್ಯಂತ ತೀವ್ರ ಚಂಡಮಾರುತ'ದಿಂದ 'ತೀವ್ರ ಚಂಡಮಾರುತ'ಕ್ಕೆ ದುರ್ಬಲಗೊಂಡಿದೆ" ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ನಲ್ಲಿ ತಿಳಿಸಿದೆ. ಮುಂದಿನ ಕೆಲ ಗಂಟೆಗಳಲ್ಲಿ ಇದು ಮತ್ತಷ್ಟು ದುರ್ಬಲಗೊಳ್ಳುವುದಾಗಿ ಹಾಗೂ ಭಾರೀ ಮಳೆಯಾಗುವ ಬಗ್ಗೆಯೂ ಮುನ್ನೆಚ್ಚರಿಕೆ ನೀಡಿದೆ.
When #CycloneTauktae made landfall in Diu a short while ago. (Via @gopimaniar/@IndiaToday) pic.twitter.com/WTemFl8LsK
— Shiv Aroor (@ShivAroor) May 17, 2021
ಮಂಗಳವಾರ ಸಂಜೆಯವರೆಗೂ ತೌಕ್ತೆ ಚಂಡಮಾರುತದ ಪ್ರಭಾವ ಮುಂದುವರಿಯಲಿದೆ. ನಂತರ ದಕ್ಷಿಣ ರಾಜಸ್ಥಾನದಲ್ಲಿ ಕ್ರಮೇಣ ದುರ್ಬಲಗೊಳ್ಳಲಿದೆ. ಇದರ ಪರಿಣಾಮವಾಗಿ ಗುಜರಾತ್ ಹಾಗೂ ರಾಜಸ್ಥಾನದ ಕೆಲ ಒಳ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಲಿದೆ.