ಮೋದಿ ಟೀಕಾಕಾರ, ಮಾಜಿ ಕಾಪ್ ಸಂಜೀವ್ ಭಟ್ ಗೆ ಜೀವಾವಧಿ ಶಿಕ್ಷೆ
ಜಾಮ್ ನಗರ್ (ಗುಜರಾತ್), ಜೂನ್ 20: ನರೇಂದ್ರ ಮೋದಿ ಮತ್ತು ಬಿಜೆಪಿಯ ಕಟು ಟೀಕಾಕಾರರಾದ ಗುಜರಾತ್ನ ವಿವಾದಾತ್ಮಕ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಇಲ್ಲಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ಈಗಾಗಲೇ ವಕೀಲರ ವಿರುದ್ಧ ಮಾದಕ ವಸ್ತು ಸಾಗಾಣಿಕೆಯ ಸುಳ್ಳು ಆರೋಪ ದಾಖಲಿಸಿದ್ದ 1996ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ್ ಭಟ್ ಅವರಲ್ಲದೆ, ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನೂ ಏಳು ಮಂದಿಯನ್ನು ಬಂಧಿಸಲಾಗಿದೆ.
ಸುಳ್ಳು ಕೇಸ್ ದಾಖಲು ಆರೋಪ: ಮೋದಿ ಟೀಕಾಕಾರ ಸಂಜೀವ್ ಭಟ್ ಬಂಧನ
ಈಗ 1989ರ ಕಸ್ಟಡಿಯಲ್ಲಿ ಸಾವು ಪ್ರಕರಣದಲ್ಲಿ ಭಟ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜಾಮ್ ನಗರ್ ನ್ಯಾಯಾಲಯವು ಆದೇಶ ನೀಡಿದೆ. ಜಾಮ್ ನಗರದಲ್ಲಿ ಹೆಚ್ಚುವರಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಗಲಭೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.ಈ ಪೈಕಿ ಪ್ರಭುದಾಸ್ ವೈಷ್ನಾನಿ ಎಂಬಾತ ಬಿಡುಗಡೆಯಾದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ವಕೀಲರ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿದ ಆರೋಪ
ವಕೀಲರ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿದ ಆರೋಪ ಎದುರಿಸುತ್ತಿರುವ ಸಂಜೀವ್ ಭಟ್ ಅವರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಜುಲೈನಲ್ಲಿ ಸಿಐಡಿಗೆ ಸೂಚಿಸಿತ್ತು. ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಗುಜರಾತ್ ಹೈಕೋರ್ಟ್ನ ನಿರ್ದೇಶನದಂತೆ ಕೇಂದ್ರ ತನಿಖಾ ಇಲಾಖೆ (ಅಪರಾಧ) ಭಟ್ ಅವರನ್ನು ಬಂಧಿಸಿದೆ. ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಸಿಐಡಿ, ವಿಚಾರಣೆಗೆ ಒಳಪಡಿಸಿದೆ. ಈ ಪ್ರಕರಣ ವಿಚಾರಣೆ ಜಾರಿಯಲ್ಲಿರುವಾಗಲೇ ಹಳೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೀಡಾಗಿದ್ದಾರೆ.
ಭಟ್ ಅವರ ಮೇಲೆ ಇನ್ನು ಅನೇಕ ಪ್ರಕರಣ
ಪ್ರಭುದಾಸ್ ಅವರ ಸೋದರ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಜೀವ್ ಭಟ್ ಹಾಗೂ 6 ಮಂದಿ ವಿರುದ್ಧ ಹಿಂಸೆ ನೀಡಿ ಕಸ್ಟಡಿಯಲ್ಲಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಹೊರೆಸಿದ್ದರು. ಜಾಮ್ ನಗರ ನ್ಯಾಯಾಲಯದಲ್ಲಿನ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚಿಸಿತ್ತು. ಇದಲ್ಲದೆ, ಭಟ್ ಅವರ ಮೇಲೆ ಡ್ರಗ್ಸ್ ಪೂರೈಕೆಗೆ ನೆರವು, ಅಕ್ರಮ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಆರೋಪಗಳಿವೆ.
2015ರಲ್ಲಿ ಭಾರತೀಯ ಪೊಲೀಸ್ ಸೇವೆಯಿಂದ ವಜಾ
ಬಳಿಕ ಸಂಜೀವ್ ಭಟ್ ಅವರನ್ನು 2015ರಲ್ಲಿ ಭಾರತೀಯ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು. ಬಳಿಕವೂ ಸಂಜೀವ್ ಭಟ್, ಮೋದಿ ವಿರುದ್ಧದ ಆರೋಪ ಮತ್ತು ವಾಗ್ದಾಳಿಗಳನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ, ಅವರು ಮೋದಿ ಅವರನ್ನು 'ಫೇಕು' ಎಂದು ಲೇವಡಿ ಮಾಡಿ ಟ್ವೀಟ್ ಮಾಡಿದ್ದರು.
ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಭಟ್
ಆದರೆ, ಅದನ್ನು 'ಪನ್ ಸ್ಟಾರ್' ಎಂಬ ಅಶ್ಲೀಲ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಪೇಚಿಗೆ ಸಿಲುಕಿದ್ದರು. 2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.