ಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ, ಅಕ್ರಮ ಬಂಧನದ ದೂರು
ಅಹ್ಮದಾಬಾದ್, ನವೆಂಬರ್ 19: ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಮತ್ತೊಂದು ಆರೋಪ ಬಂದಿದ್ದು, ತಮ್ಮ ನಾಲ್ವರು ಪುತ್ರಿಯರನ್ನು ನಿತ್ಯಾನಂದ ಅಕ್ರಮ ಬಂಧನದಲ್ಲಿರಿಸಿದಿದ್ದಾರೆ ಎಂದು ದಂಪತಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿರುವ ಗುಜರಾತ್ ದಂಪತಿ, ತಮ್ಮ ನಾಲ್ವರು ಹೆಣ್ಣು ಮಕ್ಕಳನ್ನು ನಿತ್ಯಾನಂದ ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ದೂರಿ, ನ್ಯಾಯಾಲಯದ ಸಹಾಯ ಕೇಳಿದ್ದಾರೆ.
ಗುಜರಾತ್ನ ಜನಾರ್ದನ ಶರ್ಮಾ ದಂಪತಿ 2013 ರಲ್ಲಿ ಬಿಡದಿ ಆಶ್ರಮಕ್ಕೆ ತಮ್ಮ ನಾಲ್ವರು ಹೆಣ್ಣು ಮಕ್ಕಳನ್ನು ಶಿಕ್ಷಣಕ್ಕೆ ಕಳುಹಿಸಿಕೊಟ್ಟಿದ್ದರು. ಇತ್ತೀಚೆಗಷ್ಟೆ ಅವರನ್ನು ಅಹ್ಮದಾಬಾದ್ನ ನಿತ್ಯಾನಂದ ಅವರ ಮತ್ತೊಂದು ಆಶ್ರಮಕ್ಕೆ ಅವರನ್ನು ಸ್ಥಳಾಂತರಿಸಲಾಗಿದೆ ಎಂಬ ವಿಷಯ ಪೋಷಕರಿಗೆ ತಿಳಿದು ಅವರನ್ನು ಭೇಟಿ ಆಗಲು ಯತ್ನಿಸಿದಾಗ ಆಶ್ರಮದ ಸಿಬ್ಬಂದಿ ಭೇಟಿ ನಿರಾಕರಿಸಲಾಗಿದೆ.
ಇದರಿಂದಾಗಿ ದಂಪತಿ ಗುಜರಾತ್ ಹೈಕೋರ್ಟ್ ಮೊರೆಹೋಗಿದ್ದು, ತಮ್ಮ ಮಕ್ಕಳನ್ನು ವಾಪಸ್ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಪೊಲೀಸರ ಸಹಾಯದೊಂದಿಗೆ ಆಶ್ರಮಕ್ಕೆ ಹೋದ ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನಷ್ಟೆ ವಾಪಸ್ ಕರೆತಂದಿದ್ದಾರೆ. ಆದರೆ ಹಿರಿಯ ಪುತ್ರಿಯರಾದ ಲೋಪಮುದ್ರ ಜನಾರ್ದನ ಶರ್ಮಾ (21) ಮತ್ತು ನಂದಿತಾ (18) ಆಶ್ರಮ ಬಿಟ್ಟು ಬರಲು ನಿರಾಕರಿಸಿದ್ದಾರೆ.
ದಂಪತಿ ಸಲ್ಲಿಸಿರುವ ದೂರಿನಲ್ಲಿ ತಮ್ಮ ಮಕ್ಕಳನ್ನು ಅಕ್ರಮ ಬಂಧನದಲ್ಲಿ ಎರಡು ವಾರಗಳ ಇರಿಸಲಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಮಕ್ಕಳಿಗೆ ನಿದ್ದೆ ಸಹ ಮಾಡಲು ಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಮಕ್ಕಳನ್ನು ಮಾತ್ರವಲ್ಲದೆ ಆಶ್ರಮದಲ್ಲಿರುವ ಇತರ ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ರಕ್ಷಿಸಬೇಕು ಎಂದು ದಂಪತಿ ಮನವಿ ಮಾಡಿದ್ದಾರೆ.