ರೋಗಿ ಸತ್ತು ವಾರದ ಮೇಲೆ ಬಂತು ಸಂದೇಶ: 'ರೋಗಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲಾಗಿದೆ'
ಅಹಮದಾಬಾದ್, ಜೂನ್ 2: ಗುಜರಾತ್ನಲ್ಲಿ ಆಸ್ಪತ್ರೆಯೊಂದು ಭಾರೀ ಎಡವಟ್ಟು ಮಾಡಿ ಟೀಕೆಗೆ ಗುರಿಯಾಗಿದೆ. ಗುಜರಾತಿನ ಸಾಗರ್ ಶಾ ಎಂಬವರಿಗೆ ಆಸ್ಪತ್ರೆಯಿಂದ ಸಂದೇಶ ಬಂದಿದ್ದು, 'ಕಿಶೋರ್ಭಾಯ್ ಹೀರಾಲಾಲ್ ಶಾ ಅವರನ್ನು ಮೇ.30, 6.38ಕ್ಕೆ ಅಸರ್ವಾದಲ್ಲಿರುವ ಜಿಸಿಆರ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂಬ ಸಂದೇಶ ಬಂದಿದೆ. ಆದರೆ ಸಾಗರ್ ಶಾ ಅವರ ತಂದೆ ಕಿಶೋರ್ಭಾಯ್ ಹೀರಾಲಾಲ್ ಶಾ ಮೇ 16ರಂದೇ ಮೃತಪಟ್ಟಿದ್ದಾರೆ.
ಆಸ್ಪತ್ರೆಯವರ ಸಂದೇಶ ನೋಡಿ ಗಾಬರಿಗೊಂಡ ಸಾಗರ್ ಶಾ, ಬೇಜವಾಬ್ದಾರಿತನವನ್ನು ಟೀಕಿಸಿದ್ದಾರೆ. ಮೇ 16ರಂದು ನಾನೇ ನನ್ನ ಅಪ್ಪನ ಅಂತ್ಯ ಸಂಸ್ಕಾರ ಮಾಡಿದ್ದೆ ಅದರ ಪೋಟೋ ಕೂಡ ಇದೆ ಎಂದು ಸಾಗರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 2,361 ಕೇಸ್, ಒಟ್ಟು ಸೋಂಕು 70 ಸಾವಿರ
ಇನ್ನು ಆಸ್ಪತ್ರೆಯಿಂದ ಅಪ್ಪನ ಮೃತದೇಹ ಪಡೆಯಲು ಸಾಗರ್ ಶಾ ತುಂಬಾ ಕಷ್ಟಪಟ್ಟಿದ್ದರಂತೆ. ಜೊತೆಗೆ ತಂದೆಯ ದೇಹದ ಮೇಲಿದ್ದ ಚಿನ್ನಾಭರಣ ಹಾಗೂ ಜೇಬಲ್ಲಿದ್ದ 10,000 ರುಪಾಯಿ ಕೂಡ ಕಳುವಾಗಿದೆ ಎಂದಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಲು ಹರಸಾಹಸ ಪಟ್ಟಿದ್ದಾರೆ.
ಜೊತೆಗೆ ಕಾಂಗ್ರೆಸ್ ಶಾಸಕ ಇಮ್ರಾನ್ ಖಡೇವಾಲಾ ಅವರ ನೆರವಿನಿಂದ ನನ್ನ ಅಪ್ಪ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಸುಮಾರು ಗಂಟೆ ಕಾದ ಬಳಿಕ ಮೃತದೇಹ ಸಿಕ್ಕಿದೆ ಎಂದಿದ್ದಾರೆ.
ದರೀಯಾಪುರದಲ್ಲಿ ಟ್ಯೂಷನ್ ಟೀಚರ್ ಆಗಿರುವ ಸಾಗರ್ ಶಾ, ತಮ್ಮ ದುಸ್ಥಿತಿಯನ್ನು ವಿವರಿಸಿ ಒಂದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ. ಗುಜರಾತಿನ ಸಿಜಿಆರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಗಳನ್ನು ಹೇಗೆ ಸತಾಯಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದಿದ್ದಾರೆ.
ಇನ್ನು ಈ ಕುರಿತು ಆಸ್ಪತ್ರೆಯ ಆರ್ಎಂಒ ಡಾ. ಸಂಜಯ್ ಕಪಾಡಿಯಾ ಮಾತನಾಡಿದ್ದು 'ಆಸ್ಪತ್ರೆಯಲ್ಲಿ ಒಂದೇ ಹೆಸರಿನ ಇಬ್ಬರು ರೋಗಿಗಳಿದ್ದರು. ಹಾಗಾಗಿ ಗೊಂದಲ ಉಂಟಾಗಿದೆ ಎಂದಿದ್ದಾರೆ.