ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಪ್ರಿಯಾಂಕಾ ಗಾಂಧಿ ಮೇಲೆ ಕಣ್ಣು
ಅಹ್ಮದಾಬಾದ್, ಮಾರ್ಚ್ 12: ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಗುಜರಾತ್ನಲ್ಲಿ ಇಂದು ಆರಂಭವಾಗಿದ್ದು, ಇತ್ತೀಚೆಗಷ್ಟೆ ಅಧಿಕೃತವಾಗಿ ಪಕ್ಷ ಸೇರಿದ ಪ್ರಿಯಾಂಕಾ ಗಾಂಧಿ ಮೇಲೆ ಎಲ್ಲ ಕುತೂಹಲದ ಕಣ್ಣು ನೆಟ್ಟಿದೆ.
ಪ್ರಿಯಾಂಕಾ ಗಾಂಧಿ ಅವರಿಗೆ ಇದು ಮೊದಲ ಕಾರ್ಯಕಾರಿಣಿ ಸಭೆ ಆಗಿದ್ದು, ಪ್ರಿಯಾಂಕಾ ಅವರು ಮೊದಲ ಬಾರಿಗೆ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಲೋಕಸಭಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರಿಲ್ಲ
ಇದಕ್ಕೂ ಮುನ್ನಾ ಕಾಂಗ್ರೆಸ್ನ ಎಲ್ಲ ಅತ್ಯಂತ ಪ್ರಮುಖ ಮುಖಂಡು ಸಾಬರಮತಿಗೆ ತೆರಳಿ ದಂಡಿ ಯಾತ್ರೆಯ ವಾರ್ಷಿಕೋತ್ಸವದ ಪ್ರಯುಕ್ತ ಗೌರವ ಸೂಚಿಸಿದರು. ಆ ನಂತರ ಕಾಂಗ್ರೆಸ್ನ ಹಿರಿಯರಿಗೆ ಗೌರವ ಸೂಚಿಸಲಾಯಿತು. ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸೂಚಿಸಿದರು.
ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೆ.ಸಿ.ವೇಣುಗೋಪಾಲ್, ಚಿದಂಬರಂ, ಶಶಿ ತರೂರ್, ಅಹ್ಮದ್ ಪಟೇಲ್ ಹಲವು ರಾಜ್ಯಗಳ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷರು, ಎಐಸಿಸಿಯ ಕಾರ್ಯದರ್ಶಿಗಳು ಹಲವರು ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದಾರೆ.
1961ರಲ್ಲಿ ಗುಜರಾತ್ನಲ್ಲಿ ಕಡೆಯ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆದಿತ್ತು. 58 ವರ್ಷಗಳ ನಂತರ ಈಗ ಮತ್ತೆ ಗುಜರಾತ್ನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಕಾರ್ಯಕಾರಿಣಿ ಸಭೆಗೆ ಅತ್ಯಂತ ಮಹತ್ವವಿದ್ದು, ಪಕ್ಷದ ಧ್ಯೇಯ, ಉದ್ದೇಶ, ಗುರಿ, ಸವಾಲುಗಳ ಬಗ್ಗೆ ಚರ್ಚಿಸುವ ಅತ್ಯಂತ ಮಹತ್ವದ ಸಭೆ ಇದಾಗಿರುತ್ತದೆ.