ಟಿ-ಶರ್ಟ್ ಧರಿಸಿ ಸದನಕ್ಕೆ ಬಂದಿದ್ದ ಕಾಂಗ್ರೆಸ್ ಶಾಸಕನನ್ನು ಹೊರಹಾಕಿದ ಸ್ಪೀಕರ್
ಗಾಂಧಿನಗರ, ಮಾರ್ಚ್ 15: ವಿಧಾನಸಭೆ ಅಧಿವೇಶನಕ್ಕೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕಾಗಿ ಕಾಂಗ್ರೆಸ್ ಶಾಸಕನನ್ನು ಸದನದಿಂದ ಹೊರಹಾಕಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಕಾಂಗ್ರೆಸ್ ಶಾಸಕ ವಿಮಲ್ ಚೂಡಾಸಮ ಅವರು ಸೋಮವಾರ ವಿಧಾನಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದರು. ಇದನ್ನು ಕಂಡ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಸದನದಿಂದ ಹೊರಹೋಗುವಂತೆ ಆದೇಶಿಸಿದರು.
ಸದನದಲ್ಲಿ ಶಿಸ್ತು ಮತ್ತು ಶಿಷ್ಟಾಚಾರ ಮೆರೆಯಬೇಕು. ಟಿ-ಶರ್ಟ್ಗಳಂತಹ ಉಡುಪುಗಳನ್ನು ಧರಿಸಿ ಬರುವುದರಿಂದ ಶಾಸಕರು ದೂರ ಇರಬೇಕು ಎಂದು ಸ್ಪೀಕರ್ ಹೇಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಕಲಾಪ ನಡೆಯುವಾಗ ಶಾಸಕರು ಇಂತಹದ್ದೇ ಬಗೆಯ ಉಡುಪುಗಳನ್ನು ಧರಿಸಿ ಬರಬೇಕು ಎಂದು ಸದಸ್ಯರನ್ನು ನಿರ್ಬಂಧಿಸುವ ಯಾವ ನಿಯಮವೂ ಇಲ್ಲ ಎಂದು ವಾದಿಸಿದರು.
ಎಲೆಮರೆಯ ಕಾಯಿಯಂತಹ ನಾಯಕರ ಇತಿಹಾಸದ ರಕ್ಷಣೆಗೆ ನಿರಂತರ ಪ್ರಯತ್ನ: ಪ್ರಧಾನಮಂತ್ರಿ
ಒಂದು ವಾರದ ಹಿಂದೆಯೂ ಕಲಾಪಕ್ಕೆ ಚೂಡಾಸಮ ಅವರು ಟಿ-ಶರ್ಟ್ ಧರಿಸಿ ಹಾಜರಾಗಿದ್ದರು. ಆಗ ಸ್ಪೀಕರ್ ತ್ರಿವೇದಿ, ಟಿ ಶರ್ಟ್ ಧರಿಸಿ ಸದನಕ್ಕೆ ಬರಬಾರದು. ಮುಂದಿನ ಸಲ ಎಚ್ಚರಿಕೆಯಿಂದ ಇರಿ ಎಂದು ಸೂಚನೆ ನೀಡಿದ್ದರು.
ಸೋಮನಾಥ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಚೂಡಾಸಮ, ಸೋಮವಾರ ಮತ್ತೆ ಟಿ ಶರ್ಟ್ ಧರಿಸಿ ಸದನಕ್ಕೆ ಹಾಜರಾಗಿದ್ದರು. ತಮ್ಮ ಹಿಂದಿನ ಸೂಚನೆ ನೆನಪಿಸಿದ ತ್ರಿವೇದಿ, ಶರ್ಟ್, ಕುರ್ತಾ ಅಥವಾ ಬ್ಲೇಜರ್ ಧರಿಸಿ ಬರುವಂತೆ ಸೂಚಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಚೂಡಾಸಮ, ಟಿಶರ್ಟ್ ಧರಿಸುವುದರಿಂದ ಯಾವ ತಪ್ಪೂ ಇಲ್ಲ. ತಾವು ಇದೇ ಉಡುಪಿನಲ್ಲಿ ಪ್ರಚಾರ ನಡೆಸಿ ಚುನಾವಣೆಯಲ್ಲಿ ಗೆದ್ದಿದ್ದಾಗಿ ಹೇಳಿದರು.
'ನಾನು ಟಿ ಶರ್ಟ್ ಧರಿಸಿ ಮತ ಯಾಚಿಸಿದ್ದೆ. ನನ್ನ ಮತದಾರರು ನನಗೆ ನೀಡಿದ ಪ್ರಮಾಣಪತ್ರ ಈ ಟಿ-ಶರ್ಟ್. ನನ್ನ ಮತದಾರರನ್ನು ನೀವು ಅಗೌರವಿಸುತ್ತಿದ್ದೀರಿ' ಎಂದು ಚೂಡಾಸಮ ಹೇಳಿದರು.
ಇದರಿಂದ ಅಸಮಾಧಾನಗೊಂಡ ಸ್ಪೀಕರ್, ಶಾಸಕರಿಗೆ ಸೂಕ್ತ ವಸ್ತ್ರಸಂಹಿತೆ ಇರಬೇಕು. ಟಿ-ಶರ್ಟ್ ಬದಲಿಸಿ ಯಾವುದಾದರೂ ಫಾರ್ಮಲ್ ಉಡುಗೆ ತೊಟ್ಟ ಬಳಿಕವೇ ಸದನಕ್ಕೆ ಬನ್ನಿ. ನೀವು ಶಾಸಕರಾಗಿರುವ ಕಾರಣಕ್ಕೆ ಮನಸಿಗೆ ಬಂದ ಉಡುಪು ಧರಿಸಿ ಸದನಕ್ಕೆ ಬರುವಂತಿಲ್ಲ. ಇದು ಆಟದ ಮೈದಾನವಲ್ಲ. ನೀವು ಮತದಾರರನ್ನು ಹೇಗೆ ಸಂಪರ್ಕಿಸಿದ್ದೀರೋ ನನಗೆ ಗೊತ್ತಿಲ್ಲ. ಆದರೆ ಸ್ಪೀಕರ್ ಆದೇಶವನ್ನು ಅಗೌರವಿಸುತ್ತಿದ್ದೀರಿ. ಇಲ್ಲಿ ಕೆಲವು ಶಿಷ್ಟಾಚಾರಗಳಿರುತ್ತವೆ ಎಂದು ಹೇಳಿದರು.
ಬಳಿಕ ತ್ರಿವೇದಿ ಅವರ ಸೂಚನೆಯಂತೆ ಸದನದ ಮಾರ್ಷಲ್ಗಳು ಒತ್ತಡ ಹೇರಿ ಚೂಡಾಸಮ ಅವರನ್ನು ಸದನದಿಂದ ಹೊರಗೆ ಕಳುಹಿಸಿದರು.