ಉತ್ಕಟ ಕೋಮು ದ್ವೇಷ ಸಾಮರಸ್ಯವಾಗಿ ಬದಲಾದ ಸುಂದರ ಘಳಿಗೆ
ಅಹಮದಾಬಾದ್, ಸೆಪ್ಟೆಂಬರ್ 07: ಗುಜರಾತ್ ಕೋಮು ದಂಗೆ ನೆನಪು ಭಾರತದ ಇತಿಹಾಸದಿಂದ ಸುಲಭಕ್ಕೆ ಅಳಿಯುವುದಲ್ಲ. ಆ ಕೋಮು ಗಲಭೆಯ ಭೀಕರತೆಯನ್ನು ಜಗತ್ತಿಗೆ ತೋರಿಸಿದ್ದು ಒಂದು ಚಿತ್ರ.
ಕಬ್ಬಿಣದ ಸರಳು ಹಿಡಿದು, ಹಣೆಗೆ ಕೇಸರಿ ಪಟ್ಟಿ ಕಟ್ಟಿಕೊಂಡು ಎರಡೂ ಕೈ ಮೇಲೆತ್ತಿ ಭೀಷಣವಾಗಿ ಗುಟುರು ಹಾಕುತ್ತಿದ್ದ ವ್ಯಕ್ತಿಯೊಬ್ಬನ ಚಿತ್ರ, ದಿನ ಕಳೆಯುವಷ್ಟರಲ್ಲಿ ಜಗತ್ತಿನಾದ್ಯಂತ ಪಸರಿಸಿತ್ತು. ಕೋಮು ಹಿಂಸೆಯ ಪರಿಚಯವನ್ನು ಜಗತ್ತಿಗೆ ಮಾಡಿಸಿತ್ತು.
ಅದೇ ಮತ್ತೊಂದೆಡೆ ವ್ಯಕ್ತಿಯೊಬ್ಬ ಕೈಮುಗಿದು ದೀನವಾಗಿ ಜೀವಕ್ಕಾಗಿ ಅಂಗಲಾಚುತ್ತಿದ್ದ ಚಿತ್ರ, ಕೋಮು ಗಲಭೆಯ ಸಂತ್ರಸ್ತರ ಸ್ಥಿತಿಯನ್ನು ಸಾರಿ ಜಗತ್ತು ಮರುಗುವಂತೆ ಮಾಡಿತ್ತು. ಈ ಎರಡೂ ಚಿತ್ರಗಳೂ ಕೋಮು ಗಲಭೆಯ ಚಿತ್ರಣವನ್ನು ಕಟ್ಟಿಕೊಟ್ಟಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ.
ಆ ಎರಡೂ ಚಿತ್ರಗಳಲ್ಲಿ ಪರಸ್ಪರ ವೈರುದ್ಯ ಭಾವ ಪ್ರದರ್ಶಿಸಿದ್ದ ವ್ಯಕ್ತಿಗಳು ಇಂದು ಒಂದಾಗಿದ್ದಾರೆ. ಸುಂದರ ಭವಿಷ್ಯಕ್ಕೆ ನಾಂದಿ ಹಾಡುವ ವಿಶ್ವಾಸದಲ್ಲಿ ಪರಸ್ಪರ ಆಲಂಗಿಸಿಕೊಂಡಿದ್ದಾರೆ.
ಶಾಂತಿ ಸಂದೇಶ ಹೊತ್ತು ಬಂದಿದ್ದಾರೆ
ಕತ್ತಿ ಹಿಡಿದು ಕೋಮು ಗಲಭೆಯಲ್ಲಿ ಭಾಗವಹಿಸಿದ್ದ ಅಶೋಕ್ ಪರ್ಮಾರ್, ಕೈ ಮುಗಿದು ದೀನವಾಗಿ ಜೀವಕ್ಕಾಗಿ ಅಂಗಲಾಚಿದ್ದ ಕುತುಬುದ್ದೀನ್ ಅನ್ಸಾರಿ ಒಟ್ಟಾಗಿ ಏಕತೆಯ ಸಂದೇಶ ಹೊತ್ತು ಜನರ ಮುಂದೆ ಬಂದಿದ್ದಾರೆ.
ಚಪ್ಪಲಿ ಅಂಗಡಿ ತೆರೆದಿರುವ ಅಶೋಕ್ ಪರ್ಮಾರ್
ಅಂದು ಗಲಭೆಕೋರರ ಸಂಗಡ ಇದ್ದ ಅಶೋಕ್ ಪರ್ಮಾರ್ ಅವರು ತೆರೆದಿರುವ 'ಏಕತಾ ಮೋಚಿ ಘರ್' ಚಪ್ಪಲಿ ಅಂಗಡಿಯನ್ನು ಗಲಭೆ ಸಂತ್ರಸ್ತ ಕುತುಬುದ್ದೀನ್ ಅನ್ಸಾರಿ ನಿನ್ನೆ ಉದ್ಘಾಟನೆ ಮಾಡಿದ್ದಾರೆ. 'ಅಶೋಕ್ ಅಣ್ಣನ ಬಾಳು ಹಸನಾಗಲಿ' ಎಂದು ಅನ್ಸಾರಿ ಶುಭ ಹಾರೈಸಿದ್ದಾರೆ.
ಗಲಭೆ ನಡೆದು 17 ವರ್ಷಗಳಾಗಿವೆ
ಆ ಕೋಮು ಗಲಭೆ ನಡೆದು 17 ವರ್ಷಗಳು ಗತಿಸಿ ಹೋಗಿವೆ. ಆದರೆ ಹಳೆಯ ಕಹಿ ನೆನಪುಗಳನ್ನು ಮರೆತು ಅನ್ಸಾರಿ ಮತ್ತು ಅಶೋಕ್ ಗೆಳೆಯರಾಗಿದ್ದಾರೆ. 2014 ರಿಂದಲೂ ಇಬ್ಬರ ನಡುವೆ ಗಾಢ ಗೆಳೆತನ ಏರ್ಪಟ್ಟಿದೆ.
ಅಂಗಡಿ ತೆರೆಯಲು ಕೇರಳ ಸಿಪಿಎಂ ನೆರವು ನೀಡಿದೆ
ಅಶೋಕ್ ಅವರು ಸಿಪಿಎಂ ಜೊತೆಗೆ ಗುರುತಿಸಿಕೊಂಡಿದ್ದಾರೆ. ಅವರು ಕೇರಳಕ್ಕೆ ಹೋಗಿ ಚುನಾವಣೆ ಪ್ರಚಾರವನ್ನೂ ಮಾಡಿದ್ದರು. ಸಿಪಿಎಂ ಪಕ್ಷದ ಮುಖಂಡರೇ ಅಶೋಕ್ ಅವರಿಗೆ ಹಣ ನೀಡಿ ಚಪ್ಪಲಿ ವ್ಯವಹಾರ ಪ್ರಾರಂಭಿಸಲು ಸೂಚಿಸಿದ್ದು.
ಟೈಲರಿಂಗ್ ವೃತ್ತಿಯಲ್ಲಿರುವ ಅನ್ಸಾರಿ
ಅನ್ಸಾರಿ ಸಹ ಕೊಲ್ಕತ್ತಾದ ಸಿಪಿಎಂ ಮುಖಂಡರ ಮನವಿಯಂತೆ ಕೊಲ್ಕತ್ತಾಕ್ಕೆ ಹೋಗಿ ಕೆಲವು ದಿನ ಇದ್ದರು ಅಲ್ಲಿಯೇ ಜೀವನ ಶುರುವಿಟ್ಟಿದ್ದರು. ಆದರೆ ಅಲ್ಲಿ ಹೊಂದಿಕೊಳ್ಳಲಾಗದೆ, ಮತ್ತೆ ಅಲಹಾಬಾದ್ಗೆ ವಾಪಸ್ ಬಂದು ಟೈಲರಿಂಗ್ ವೃತ್ತಿ ಪ್ರಾರಂಭಿಸಿದ್ದಾರೆ.