ಗುಜರಾತ್ನಲ್ಲಿ ಮತ್ತೆ ಕೋಮು ಘರ್ಷಣೆ: ಪೆಟ್ರೋಲ್ ಬಾಂಬ್ ಬಳಕೆ
ಅಹಮದಾಬಾದ್, ಏಪ್ರಿಲ್ 12: ಗುಜರಾತ್ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್ ನಗರದಲ್ಲಿ ಸೋಮವಾರ ತಡರಾತ್ರಿ ಮತ್ತೆ ಕೋಮು ಘರ್ಷಣೆ ನಡೆದಿದೆ. ಹಿಂದೂಗಳ ಹಬ್ಬವಾದ ರಾಮ ನವಮಿಯ ಸಂದರ್ಭದಲ್ಲಿ ಭಾನುವಾರ ಈ ಪ್ರದೇಶದಲ್ಲಿ ಇದೇ ರೀತಿಯ ಕೋಮು ಘರ್ಷಣೆ ನಡೆದಿದ್ದು, ಒಂದು ದಿನದ ನಂತರ ಮತ್ತೆ ಘರ್ಷಣೆ ಉಂಟಾಗಿದೆ.
ಭಾನುವಾರದ ಘಟನೆಯ ನಂತರ ಹಿಮ್ಮತ್ನಗರದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೂ ಸೋಮವಾರ ಘರ್ಷಣೆ ಆರಂಭವಾಗಿದೆ. ಸೋಮವಾರ ರಾತ್ರಿ ಎರಡು ಕೋಮುಗಳ ನಡುವೆ ನಡೆದ ಘರ್ಷಣೆ ವೇಳೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.
ಗುಜರಾತ್: ರಾಮನವಮಿ ಮೆರವಣಿಗೆ ವೇಳೆ ಕೋಮು ಘರ್ಷಣೆ: ಓರ್ವ ಸಾವು
ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿ 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು. ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಮಂಗಳವಾರ ಈ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಇಫ್ತಾರ್ ವೇಳೆ ಕಲ್ಲು ತೂರಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತನಿಖೆ ನಡೆಯುತ್ತಿದೆ ಎಂದ ಪೊಲೀಸರು
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ವಘೇಲಾ, "ಇಫ್ತಾರ್ ವೇಳೆ ಕಲ್ಲು ತೂರಾಟ ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದೆವು. 10 ಮಂದಿಯನ್ನು ಬಂಧನ ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ," ಎಂದು ತಿಳಿಸಿದ್ದಾರೆ.
"ನಾವು ಘಟನಾ ಸ್ಥಳಕ್ಕೆ ತಲುಪಿದಾಗ ಕಲ್ಲು ತೂರಾಟ ನಡೆಯುತ್ತಿತ್ತು. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಿದೆವು. ಆರ್ಎಎಫ್ ಮತ್ತು ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ," ಎಂದು ಕೂಡಾ ವಿವರಣೆ ನೀಡಿದ್ದಾರೆ.
ಕೋಮು ಷರ್ಘಣೆಗೆ ಓರ್ವ ಬಲಿ
ರಾಮ ನವಮಿಯಂದು ಭಾನುವಾರ ನಡೆದ ಮೆರವಣಿಗೆಯಲ್ಲಿ ಗುಜರಾತ್ನ ಖಂಭತ್ ನಗರದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಓರ್ವ ಬಲಿಯಾಗಿದ್ದಾನೆ. ಘರ್ಷಣೆ ವೇಳೆ ಎರಡೂ ಕೋಮಿನ ಗುಂಪುಗಳು ಎರಡೂ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಿದೆ ಮತ್ತು ಬೆಂಕಿ ಹಚ್ಚಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಪ್ರಯೋಗ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾನುವಾರ ಹಲವಾರು ಅಂಗಡಿಗಳು, ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಭಾರೀ ಕಲ್ಲು ತೂರಾಟ ನಡೆದಿದೆ. ಪೊಲೀಸರು ಮೂರು ಎಫ್ಐಆರ್ಗಳನ್ನು ದಾಖಲಿಸಿ 50 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಖಂಭತ್ ನಗರವು ಆನಂದ್ ಜಿಲ್ಲೆಯಲ್ಲಿದ್ದರೆ, ಹಿಮ್ಮತ್ನಗರವು ಸಬರ್ಕಾಂತ ಜಿಲ್ಲೆಯಲ್ಲಿದೆ. "ರಾಮನವಮಿ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ ಖಂಭಾತ್ನಲ್ಲಿ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ," ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಾಜ್ಯನ್ ತಿಳಿಸಿದ್ದಾರೆ.