ಹದಗೆಟ್ಟಿರೋ ಸರ್ಕಾರಿ ಆಸ್ಪತ್ರೆ ಸ್ಥಿತಿ: ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಕ್ಲಾಸ್
ಅಹಮದಾಬಾದ್, ಮೇ 25: ಗುಜರಾತ್ ಸರ್ಕಾರದ ಕೊರೊನಾ ನಿಯಂತ್ರಣವನ್ನು ಸರಿಯಾದ ರೀತಿ ಮಾಡುತ್ತಿಲ್ಲ ಎಂದು ಗುಜರಾತ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅದರಲ್ಲಿಯೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿವಿಲ್ ಆಸ್ಪತ್ರೆಗಳು ಕತ್ತಲಕೋಣೆಗಿಂತಲೂ ಕೆಟ್ಟದಾಗಿವೆ ಎಂದಿದೆ.
''ಸಿವಿಲ್ ಆಸ್ಪತ್ರೆಯಲ್ಲಿರುವ ಸ್ಥಿತಿ ದುಃಖಕರ ಮತ್ತು ನೋವಿನ ಸಂಗತಿಯಾಗಿದೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಸಿವಿಲ್ ಆಸ್ಪತ್ರೆ ಕತ್ತಲಕೋಣೆಗಿಂತಲೂ ಕೆಟ್ಟದಾಗಿರಬಹುದು. ಇಲ್ಲಿಯವರೆಗೆ, ಸಿವಿಲ್ ಆಸ್ಪತ್ರೆಯಲ್ಲಿ 377 ಕೋವಿಡ್ ಸಾವುಗಳು ಸಂಭವಿಸಿವೆ, ಇದು ರಾಜ್ಯದ ಒಟ್ಟು ಸಾವುಗಳಲ್ಲಿ 45% ನಷ್ಟಿದೆ.'' ಎಂದು ಹೈಕೋರ್ಟ್ ತಿಳಿಸಿದೆ.
''ವೆಂಟಿಲೇಟರ್ಗಳ ಕೊರತೆಯಿಂದಾಗಿ ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿದ್ದಾರೆ ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿದಿದೆಯೇ? ವೆಂಟಿಲೇಟರ್ಗಳ ಈ ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಹೇಗೆ ಪ್ರಸ್ತಾಪಿಸುತ್ತದೆ?'' ಎಂದು ಪ್ರಶ್ನೆ ಮಾಡಿದೆ.
ಸಿವಿಲ್ ಆಸ್ಪತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್, ಕಾರ್ಯದರ್ಶಿ ಮಿಲಿಂದ್ ಟೊರ್ವಾನೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಅವರನ್ನು ಕೋರ್ಟ್ಗೆ ಕರೆತರಲಾಗಿತ್ತು.
ಪರೀಕ್ಷಾ ಕಿಟ್ಗಳನ್ನು ತಕ್ಷಣ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ಅಹಮದಾಬಾದ್ ನಗರ ಮತ್ತು ಹೊರವಲಯದಲ್ಲಿರುವ ಎಲ್ಲಾ ಮಲ್ಟಿ ಸ್ಪೆಷಾಲಿಟಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಕೋವಿಡ್ಗಾಗಿ ತನ್ನ ಶೇಕಡಾ 50 ಹಾಸಿಗೆಗಳನ್ನು ಕಾಯ್ದಿರಿಸುವುದು ಕಡ್ಡಾಯಗೊಳಿಸುವಂತೆ ಅಧಿಸೂಚನೆ ಹೊರಡಿಸುವಂತೆ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ಡಿವಾಲಾ ಮತ್ತು ಇಲೇಶ್ ವೊರಾ ಅವರ ನ್ಯಾಯಪೀಠವು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಸುಧಾರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಹಲವಾರು ನಿರ್ದೇಶನಗಳನ್ನು ನೀಡಿದರು.