ಗುಜರಾತ್ ನಲ್ಲಿ ಪೊಲೀಸರ ಜೀಪ್ ಶೇಕ್, 3 ಸಾವಿರ ಮಂದಿ ವಿರುದ್ಧ ಎಫ್ಐಆರ್
ಅಹ್ಮದಾಬಾದ್, ಡಿಸೆಂಬರ್.20: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಕೇಂದ್ರ ಸರ್ಕಾರದ ವಿರುದ್ಧ ಕೆರಳಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧವೇ ಮುಗಿಬಿದ್ದ ಘಟನೆಗಳು ಸಾಕಷ್ಟು ಕಡೆಗಳಲ್ಲಿ ವರದಿಯಾಗಿವೆ.
ಗುಜರಾತ್ ನ ಬನಸ್ಕಾಂತ್ ದಲ್ಲಿ ಡಿಸೆಂಬರ್.19ರ ಗುರುವಾರ ನಡೆದ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿತು. ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದರು. ಪೊಲೀಸ್ ಜೀಪ್ ಮೇಲೆ ಮುಗಿಬಿದ್ದ ಉದ್ರಿಕ್ತರ ಗುಂಪು ಪೊಲೀಸರಿದ್ದ ವಾಹನವನ್ನೇ ಕೆಡವಲು ಪ್ರಯತ್ನಿಸಿದ ಘಟನೆಯೂ ನಡೆಯಿತು.
ಗುಜರಾತ್ ನಲ್ಲಿ ಖಾಕಿ ಮೇಲೆ ಕಲ್ಲು ತೂರಿದವರ ಬಂಧನ
ಉದ್ರಿಕ್ತರ ಆಕ್ರೋಶಕ್ಕೆ ಪೊಲೀಸ್ ವಾಹನವೇ ಜಖಂಗೊಂಡಿತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿದರು.
3 ಸಾವಿರ ಮಂದಿ ವಿರುದ್ಧ ಎಫ್ಐಆರ್:
ಗುಜರಾತ್ ನಲ್ಲಿ ಶಾಂತಿ ಕದಡಲು ಯತ್ನಿಸಿದ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಸರಿಯಾಗಿ ಕೇಸ್ ಜಡಿದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನೆಪದಲ್ಲಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಒಂದೇ ದಿನ 3,022 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 3 ಸಾವಿರದ 22 ಮಂದಿ ಪೈಕಿ 22 ಮಂದಿಯನ್ನು ಪತ್ತೆ ಹಚ್ಚಲಾಗಿದೆ.
#WATCH Gujarat: Shots from different angles of Banaskantha protest yesterday, where protesters attacked a Police jeep. FIR has been registered against 3022 people, of which 22 people have been identified. #CitizenshipAmendmentAct pic.twitter.com/k5jmLYOz26
— ANI (@ANI) December 20, 2019
ಇನ್ನು, ಅಹ್ಮದಾಬಾದ್ ನಲ್ಲೂ ಕೂಡಾ ಪೊಲೀಸರ ಮೇಲೆ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಯೂ ಲಾಠಿಪ್ರಹಾರ ನಡೆಸಿದದ್ದ ಪೊಲೀಸರು 49 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು.