ಚೀನಾದಂಥ ಶಿಸ್ತುಪಾಲನೆ ಭಾರತದಲ್ಲಿ ಸಾಧ್ಯವೇ ಇಲ್ಲ ಬಿಡಿ; ಗುಜರಾತ್ ಹೈಕೋರ್ಟ್
ಅಹಮದಾಬಾದ್, ಮೇ 27: ಭಾರತದಲ್ಲಿ ಚೀನಾದಂತೆ ಶಿಸ್ತನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಉಲ್ಲೇಖಿಸಿರುವ ಗುಜರಾತ್ ಹೈಕೋರ್ಟ್, ಕೊರೊನಾ ನಿಯಮಗಳನ್ನು ಅನುಸರಿಸುವಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿರುವುದರ ಕುರಿತು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಕೊರೊನಾ ಮೂರನೇ ಹಾಗೂ ನಾಲ್ಕನೇ ಅಲೆ ಸಾಧ್ಯತೆಗಳಿಗೆ ತಕ್ಕಂತೆ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಸೂಚಿಸಿದೆ.
ಚೀನಾದಂತೆ ಭಾರತದಲ್ಲಿ ಶಿಸ್ತನ್ನು ಕಾಣಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬೇಲಾ ತ್ರಿವೇದಿ ಹಾಗೂ ಭಾರ್ಗವ್ ಡಿ ಕಾರಿಯಾ ಒಳಗೊಂಡ ವಿಭಾಗೀಯ ಪೀಠ ಉಲ್ಲೇಖಿಸಿದ್ದು, ಮುಂದಿನ ಕೊರೊನಾ ಅಲೆಗಳ ಕುರಿತು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದೆ. ಜನರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆ ಆಗುವ ಅಪಾಯಗಳಿಗೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೋವಿಡ್ ಲಸಿಕೆಯ 2ನೇ ಡೋಸ್ ನೀಡಲು ತರ್ಕಬದ್ಧ ನೀತಿ ಜಾರಿಗೊಳಿಸಿ: ಹೈಕೋರ್ಟ್
ಜನರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸ್ಯಾನಿಟೈಸ್ ಮಾಡಿಕೊಳ್ಳುವುದಿಲ್ಲ. ಹೀಗಿದ್ದಾಗ ಕೊರೊನಾ ಸೋಂಕು ಮುಂದುವರೆಯುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಪ್ರತಿ ಆರು ತಿಂಗಳಿಗೆ ಒಂದು ಅಲೆ ಇದ್ದೇ ಇರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಗುಜರಾತ್ನಲ್ಲಿ ಕೊರೊನಾ ಪರಿಸ್ಥಿತಿ ಕುರಿತು ನ್ಯಾಯಾಲಯ ದಾಖಲಿಸಿಕೊಂಡಿದ್ದ ಸುಮೊಟೊ ಅರ್ಜಿ ಕುರಿತು ಮಾತನಾಡುವಾಗ ಹೀಗೆ ಹೇಳಿದೆ.
ಚೀನಾದೊಂದಿಗೆ ಮಾತ್ರ ಭಾರತ ಹೋಲಿಕೆ ಮಾಡಿಕೊಳ್ಳಲು ಸಾಧ್ಯ. ಆದರೆ ಅದು ಕೂಡ ಹೋಲಿಕೆಗೆ ನಿಲುಕದ್ದಾಗಿದೆ. ಚೀನಾದಲ್ಲಿ ಜಾರಿಗೆ ತಂದಿರುವ ಶಿಸ್ತನ್ನು ಭಾರತದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿ ಎಂದು ನ್ಯಾಯಾಲಯ ಸಲಹೆ ನೀಡಿದೆ.