ರಾಜೀವ್ ಗಾಂಧಿ ಸಾವಿಗೆ ಬಿಜೆಪಿ ಕಾರಣ ಎಂದ ಅಹ್ಮದ್ ಪಟೇಲ್
ಅಹ್ಮದಾಬಾದ್, ಮೇ 09: ರಾಜೀವ್ ಗಾಂಧಿ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, "ರಾಜೀವ್ ಗಾಂಧಿ ಅವರ ಸಾವಿಗೆ ಬಿಜೆಪಿಯೇ ಕಾರಣ" ಎಂದಿದ್ದಾರೆ.
ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, 'ರಾಜೀವ್ ಗಾಂಧಿ ಅವರು ನಿಧನರಾಗುವ ಸಂದರ್ಭದಲ್ಲಿ ಭ್ರಷ್ಟಾಚಾರಿ ನಂ.1 ಆಗಿದ್ದರು' ಎಂದಿದ್ದರು.
ರಾಜೀವ್ ಗಾಂಧಿ ಬಗ್ಗೆ ಮೋದಿ ಹಾಗೆ ಹೇಳಬಾರದಿತ್ತು: ಶ್ರೀನಿವಾಸ್ ಪ್ರಸಾದ್ ವಿರೋಧ
ಈ ಹೇಳಿಕೆಯನ್ನು ಟೀಕಿಸಿ, ಟ್ವೀಟ್ ಮಾಡಿರುವ ಪಟೇಲ್, "ಒಬ್ಬ ಹುತಾತ್ಮ ಪ್ರಧಾನಿಗೆ ಅವಮಾನ ಮಾಡುವುದು ಬಿಜೆಪಿಯ ಹೇಡಿತನಕ್ಕೆ ಸಾಕ್ಷಿ. ಆದರೆ ಅವರ ಹತ್ಯೆಗೆ ಕಾರಣ ಯಾರು? ಅವರ ಹತ್ಯೆಯ ಸಂಚಿನ ಗುಪ್ತಚರ ಮಾಹಿತಿ ಇದ್ದರೂ ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರ ರಾಜೀವ್ ಗಾಂಧಿ ಅವರಿಗೆ ಹೆಚ್ಚಿನ ಭದ್ರತೆ ನೀಡದಿರುವುದೇ ಅವರ ಹತ್ಯೆಗೆ ಕಾರಣ" ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ.
"ರಾಜೀವ್ ಅವರು ಬಿಜೆಪಿಯ ದ್ವೇಷದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡರು. ಅವರ ಆಧಾರರಹಿತ ಆರೋಪಗಳಿಗೆ ಉತ್ತರಿಸಲು ಅವರೀಗ ನಮ್ಮೊಂದಿಗಿಲ್ಲ" ಎಂದು ಅಹ್ಮದ್ ಪಟೇಲ್ ಹೇಳಿದ್ದಾರೆ.
ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದ ವ್ಯಕ್ತಿ
ರಾಜೀವ್ ಗಾಂಧಿ ಅವರು ತಮ್ಮ 47ನೇ ವಯಸ್ಸಿನಲ್ಲಿ(20 ಆಗಸ್ಟ್ 1944- 21 ಮೇ 1991) ತಮಿಳುನಾಡಿನ ಚೆನ್ನೈ ಬಳಿಯ ಶ್ರೀಪೆರುಂಬುದುರ್ ಎಂಬಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಅವರನ್ನು ಬಾಂಬ್ ಸ್ಫೋಟಿಸಿ ಕೊಲ್ಲಲಾಗಿತ್ತು. ಭಾರತದ ಆರನೇ ಪ್ರಧಾನಿಯಾಗಿದ್ದ ಅವರು ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.