"ಬಿಜೆಪಿಯವರಿಗೆ ಕೊರೊನಾ ಬರಲ್ಲ, ಅವರೆಲ್ಲ ಕಷ್ಟಪಟ್ಟು ದುಡಿಯುತ್ತಾರೆ"
ಅಹಮದಾಬಾದ್, ಮಾರ್ಚ್ 22: ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ. ಈ ನಡುವೆ ಗುಜರಾತ್ ಬಿಜೆಪಿ ಶಾಸಕರೊಬ್ಬರು ಕೊರೊನಾ ಸೋಂಕಿನ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಬಿಜೆಪಿ ಪಕ್ಷದವರಿಗೆ ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ಸಮಾವೇಶ ಸಂದರ್ಭ ರಾಜಕಾರಣಿಗಳು ಹಾಗೂ ಪಕ್ಷದ ಕಾರ್ಯಕರ್ತರಿಂದ ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯಿಂದಾಗಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಆರೋಪದ ಕುರಿತು ವರದಿಗಾರರು ಗುಜರಾತ್ ರಾಜಾಕೋಟ್ ಶಾಸಕ ಗೋವಿಂದ್ ಪಟೇಲ್ ಅವರಿಗೆ ಪ್ರಶ್ನಿಸಿದ್ದಾರೆ. ಈ ಸಂದರ್ಭ ಉತ್ತರಿಸಿದ ಅವರು, ಕಷ್ಟಪಟ್ಟು ದುಡಿಯುವವರಿಗೆ ಕೊರೊನಾ ಸೋಂಕು ಬರುವುದಿಲ್ಲ. ನಮ್ಮ ಬಿಜೆಪಿ ಕಾರ್ಯಕರ್ತರೂ ಶ್ರಮಪಡುತ್ತಿದ್ದಾರೆ. ಹೀಗಾಗೇ ಬಿಜೆಪಿಯ ನಮ್ಮ ಯಾವ ಕಾರ್ಯಕರ್ತನಿಗೂ ಸೋಂಕು ಬಂದಿಲ್ಲ ಎಂದು ಹೇಳಿದ್ದಾರೆ.
1 ಕ್ವಿಂಟಾಲ್ ರೇಷನ್ ಬೇಕಿದ್ದರೆ, 20 ಮಕ್ಕಳನ್ನು ಹೊಂದಬೇಕು; ಸಿಎಂ ಬಾಯಲ್ಲಿ ಇದೆಂಥಾ ಮಾತು?
ಸ್ಥಳೀಯ ಚುನಾವಣೆಗಳು ಹಾಗೂ ಕ್ರಿಕೆಟ್ ಮ್ಯಾಚ್ಗಳು ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗಲು ಕಾರಣವಾಗಿವೆ ಎಂಬ ಆರೋಪವನ್ನು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ತಳ್ಳಿ ಹಾಕಿದ್ದು, ಈ ವಿಷಯದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಸದ್ಯಕ್ಕೆ ಗುಜರಾತ್ನಲ್ಲಿ ಪ್ರಸ್ತುತ 7321 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 275079 ಮಂದಿ ಗುಣಮುಖರಾಗಿದ್ದಾರೆ. ಗುಜರಾತ್ನಲ್ಲಿಯೂ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದೆ.