ಗುಜರಾತ್ನಲ್ಲಿ ಎಎಪಿಗೆ ಗೆಲುವು, ಬಿಜೆಪಿ,ಕಾಂಗ್ರೆಸ್ಗೆ ನಡುಕ ಎಂದ ಕೇಜ್ರಿವಾಲ್
ಸೂರತ್,ಫೆಬ್ರವರಿ 26: ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಭಯ ಹುಟ್ಟಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಕಾರ್ಪೋರೇಟರ್ ಗಳು ಮತ್ತು ಸ್ವಯಂ ಸೇವಕರನ್ನು ಭೇಟಿಯಾದ ಕೇಜ್ರಿವಾಲ್, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿಯೇ ಆಡಳಿತ ನಡೆಸಲು ಕಾರಣವೇನು ಎಂದು ಪ್ರಶ್ನಿಸಿದರು.
ಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿ
ನೂತನವಾಗಿ ಆಯ್ಕೆಯಾದ ಕಾರ್ಪೋರೇಟರ್ ಗಳನ್ನು ಕುರಿತು ಭಾಷಣ ಮಾಡಿದ ಕೇಜ್ರಿವಾಲ್ , ಚುನಾವಣಾ ಫಲಿತಾಂಶದ ಕೆಲವು ದಿನಗಳ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹೇಳಿಕೆಗಳನ್ನು ಕೇಳಿದ್ದೇನೆ. ಅವರು ಸ್ವಲ್ಪ ಭೀತಿಗೊಂಡಿದ್ದಾರೆ ಎಂದರು.
ಎಎಪಿಗೆ ಎಷ್ಟು ಸ್ಥಾನ
120 ಸ್ಥಾನಗಳಿಗೆ ನಡೆದ ಸೂರತ್ ನಗರಸಭಾ ಚುನಾವಣೆಯಲ್ಲಿ 27 ಸ್ಥಾನಗಳಲ್ಲಿ ಎಎಪಿ ಗೆಲುವು ಸಾಧಿಸಿದರೆ, ಬಿಜೆಪಿ 93 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕಾಂಗ್ರೆಸ್ ಮತ್ತಿತರ ಪಕ್ಷಗಳು ಯಾವುದೇ ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ.
ಜನರಿಂದ ಬಿಜೆಪಿ,ಕಾಂಗ್ರೆಸ್ಗೆ ಭಯ ಶುರುವಾಗಿದೆ
ಬಿಜೆಪಿ, ಕಾಂಗ್ರೆಸ್ ಎಎಪಿ ಅಥವಾ ನೂತನವಾಗಿ ಚುನಾಯಿತಗೊಂಡವರಿಂದ ಭಯಭೀತಿಗೊಂಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ, ಎಎಪಿಗೆ ಮತ ಹಾಕುವ ಜನರಿಂದಾಗಿ ಭಯಭೀತಿಗೊಂಡಿದ್ದಾರೆ ಎಂದರು.
ಬಿಜೆಪಿ ಏನೂ ಮಾಡಿಲ್ಲ
ಕಳೆದ 25 ವರ್ಷಗಳಿಂದಲೂ ಬಿಜೆಪಿಯೇ ಏಕೆ ಆಡಳಿತ ನಡೆಸುತ್ತಿದೆ?ಅವರು ದೊಡ್ಡದಾಗಿ ಏನು ಮಾಡಿಲ್ಲ.ಆದರೆ, ಅಲ್ಲಿ ಪ್ರತಿಪಕ್ಷವಿಲ್ಲ, ರಾಜ್ಯದ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಬಿಜೆಪಿ ವಿರುದ್ಧ ಎಎಪಿಯೇ ಸೂಕ್ತ ಎಂಬುದಾಗಿ ತೀರ್ಮಾನಿಸಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಶೂನ್ಯ ಸಾಧನೆ
ಗುಜರಾತ್ನ ಆರು ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಿತು. ಎಲ್ಲ ಆರೂ ಪಾಲಿಕೆಗಳಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಕಂಡು ಮತ್ತೆ ಅಧಿಕಾರಕ್ಕೆ ಬಂದಿದೆ. ಇದೇ ಮೊದಲ ಬಾರಿ ಖಾತೆ ತೆರೆದಿರುವ ಎಎಪಿ 27 ಸೀಟುಗಳನ್ನು ಗೆದ್ದಿದೆ. ಈ ಎಲ್ಲ ಗೆಲುವೂ ಸೂರತ್ ಪಾಲಿಕೆಯಲ್ಲಿಯೇ ದೊರೆತಿದೆ. ಈ ಮೂಲಕ ಸೂರತ್ನಲ್ಲಿ ಮುಖ್ಯ ವಿರೋಧಪಕ್ಷದ ಸ್ಥಾನವನ್ನೂ ಪಡೆದುಕೊಂಡಿದೆ. ಇಲ್ಲಿ ಬಿಜೆಪಿ 93 ಸೀಟುಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.