ಒಂದಾದ ಬಿಜೆಪಿ-ಶಿವಸೇನೆ: ವಿಪಕ್ಷಗಳಿಗೆ ಉದ್ಧವ್ ಠಾಕ್ರೆ ಚಾಲೆಂಜ್
ಅಹ್ಮದಾಬಾದ್, ಮಾರ್ಚ್ 30: "ತಾಕತ್ತಿದ್ದರೆ ನೀವೂ ಒಂದು ಸಮಾವೇಶ ಮಾಡಿ, ನಿಮ್ಮ ನಾಯಕರ ಯಾರದಾದರೂ ಒಬ್ಬರ ಹೆಸರನ್ನು ಜನರು ಜಪಮಾಡುವಂತೆ ಮಾಡಿ ನೋಡೋಣ" ಎಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ವಿಪಕ್ಷಗಳಿಗೆ ಸವಾಲೆಸೆದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗುಜರಾತಿನ ಗಾಂಧಿನಗರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಉಪಸ್ಥಿತರಿದ್ದ ಉದ್ಧವ್ ಠಾಕ್ರೆ, 'ನಾನು ಮಹಾರಾಷ್ಟ್ರದಿಂದ ಬಾಳಾ ಸಾಹೇಬ್ ಠಾಕ್ರೆ ಅವರ ಆಶೀರ್ವಾದದೊಂದಿಗೆ ಇಲ್ಲಿಗೆ ಬಂದಿದ್ದೇನೆ. ಅಮಿತ್ ಭಾಯಿ ಅವರಿಗೆ ನನ್ನ ಶುಭಾಶಯ ತಿಳಿಸುತ್ತೇನೆ. ನಮ್ಮ ನಡುವೆ(ಬಿಜೆಪಿ-ಶಿವಸೇನೆ) ವೈಮನಸ್ಯ ಇದ್ದಿದ್ದನ್ನು ನೋಡಿ ಎಷ್ಟು ಜನ ಸಂತೋಷ ಪಟ್ಟಿದ್ದರೋ ಅವರಿಗೆಲ್ಲ ಒಂದು ಮಾತು ಹೇಳುತ್ತೇನೆ. ಐದು ವರ್ಷದಲ್ಲಿ ಆಗಿದ್ದು ಆಗಿಹೋಯಿತು, ನಾವು ಭಾರತದ ಭವಿಷ್ಯದ ದೃಷ್ಟಿಯಿಂದ ಎಂದಿಗೂ ಒಂದಾಗಿರುತ್ತೇವೆ. ವಿಪಕ್ಷಗಳ ಮಹಾಮೈತ್ರಿಕೂಟದ ನಾಯಕರು ಕೈಹಿಡಿದು ತಮ್ಮ ಒಗ್ಗಟ್ಟು ತೋರಿಸಬಹುದು. ಆದರೆ ಅವರ ಹೃದಯ ಎಂದಿಗೂ ಒಂದಾಗುವುದಿಲ್ಲ. ಆದರೆ ನಾವು ಹೊರಗೆಷ್ಟೇ ಪರಸ್ಪರ ಟೀಕಿಸಿಕೊಳ್ಳಬಹುದು, ನಮ್ಮ ಹೃದಯ ಒಂದಾಗಿರುತ್ತದೆ' ಎಂದು ಅವರು ಹೇಳಿದರು.
ಅಡ್ವಾಣಿ ಮೊದಲೇ ಸ್ವಯಂ ನಿವೃತ್ತಿ ಘೋಷಿಸಬೇಕಿತ್ತು: ಶಿವಸೇನಾ
"ಮೋದಿಯವರನ್ನು ಟೀಕಿಸುವ ವಿಪಕ್ಷಗಳಿಗೆ ಅವರ ಜನಪ್ರಿಯತೆಯ ಅರಿವಿಲ್ಲ. ತಾಕತ್ತಿದ್ದರೆ ವಿಪಕ್ಷದ ಯಾವುದಾದರೂ ನಾಯಕರ ಹೆಸರನ್ನು ಜನರು ಸಮಾವೇಶಗಳಲ್ಲಿ ಪಠಿಸುವಂತೆ ಮಾಡಿ ನೋಡೋಣ" ಎಂದು ಅವರು ಸವಾಲೆಸೆದರು.
"ಬಿಜೆಪಿ ಮತ್ತು ಶಿವಸೇನೆಯ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಕೆಲವಿರಬಹುದು. ಆದರೆ ಸೈದ್ಧಾಂತಿಕವಾಗಿ ನಾವು ಸಮಾನ ಮನಸ್ಕರು. ನಾವು ಒಂದಾಗಿಯೇ ಇರುತ್ತೇವೆ" ಎಂದು ಠಾಕ್ರೆ ಹೇಳಿದರು.