ವಾರಣಾಸಿ 'ಸಂಸದ' ಮೋದಿಗೆ ಹೈಕೋರ್ಟಿನಿಂದ ನೋಟಿಸ್
ವಾರಣಾಸಿ, ಜುಲೈ 19: ವಾರಾಣಸಿ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಹಾಗೂ ವಿಜೇತ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಸತ್ ಸ್ಥಾನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಬಾದ್ ಹೈಕೋರ್ಟ್ ಸ್ವೀಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿಗೆ ಹೈಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ.
ಅಲಹಾಬಾದ್ ಹೈಕೋರ್ಟಿನ ಜಸ್ಟೀಸ್ ಎಂ.ಕೆ ಗುಪ್ತಾ ಅವರು ಆಗಸ್ಟ್ 21ರಂದು ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ವಾರಾಣಸಿ ಲೋಕಸಭೆ ಚುನಾವಣಾ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಎರಡೆರಡು ಬಾರಿ ಅರ್ಜಿ ಸಲ್ಲಿಸಿ ವಿಫಲರಾಗಿದ್ದ ಬಿಎಸ್ಎಫ್ ಮಾಜಿ ಯೋಧ ತೇಜ್ ಬಹದ್ದೂರ್ ಅವರು ತಮ್ಮ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇದಾಗಿದೆ. ಈ ಹಿಂದೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಮಾಜಿ ಯೋಧ ಬಹದ್ದೂರ್ ನಿರಾಶೆ ಅನುಭವಿಸಿದ್ದರು.
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ಸಿನಿಂದ ಅಜಯ್ ರಾಯ್ ಕಣದಲ್ಲಿದ್ದರು. ಎಸ್ಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಯೋಧ ತೇಜ್ಬಹಾದ್ದೂರ್ ಯಾದವ್ ಉಮೇದುವಾರಿಕೆ ಸಲ್ಲಿಸಿದ್ದರು.
ಮೋದಿ ವಿರುದ್ಧ ಸ್ಪರ್ಧಿಸಿರುವ ಮಾಜಿ ಸೈನಿಕನಿಗೆ ಆಯೋಗ ನೊಟೀಸ್
ಇದಕ್ಕೂ ಮುನ್ನ ಪಕ್ಷೇತರರಾಗಿ ಕೂಡಾ ನಾಮಪತ್ರ ಸಲ್ಲಿಸಿದ್ದರು. ಸೇನೆಯಿಂದ ಅಮಾನತ್ತಾಗಿರುವುದಕ್ಕೆ ಸ್ಪಷ್ಟೀಕರಣ ಹಾಗೂ ಬಿಎಸ್ಎಫ್ನಿಂದ ನಿರಪೇಕ್ಷಣಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲು ವಿಫಲರಾಗಿರುವ ಕಾರಣ ತೇಜ್ ಬಹದ್ದೂರ್ ಅವರ ನಾಮಪತ್ರವನ್ನು ಚುನಾವಣಾ ಆಯೋಗವು ರದ್ದು ಮಾಡಿತ್ತು.
ಮೋದಿ ಎದುರಾಳಿ ತೇಜ್ ಬಹದೂರ್ ಯಾದವ್ ಆಸ್ತಿ ವಿವರ
ನಾಮಪತ್ರ ರದ್ದು ಮಾಡಿದ್ದೇಕೆ?: ಚುನಾವಣೆಗೆ ಸ್ಪರ್ಧಿಸಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸದ ಕಾರಣ ಚುನಾವಣಾ ಆಯೋಗ ಇವರ ನಾಮಪತ್ರವನ್ನು ತಿರಸ್ಕರಿಸಿತ್ತು.
"2017ರಲ್ಲಿ ಯೋಧರಿಗೆ ನೀಡುವ ಅಹಾರದ ಗುಣಮಟ್ಟವನ್ನು ಟೀಕಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ಯಾದವ್ ಅವರು ನಂತರ ತಮ್ಮ ಕೆಲಸ ಕಳೆದುಕೊಂಡಿದ್ದರು. ಆದರೆ, ತೇಜ್ ಬಹದ್ದೂರ್ ವಿರುದ್ಧ ಯಾವುದೇ ಭ್ರಷ್ಟಾಚಾರ ಅಥವಾ ನಿಷ್ಠಾವಂತರಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ, ಹೀಗಾಗಿ, ನಾಮಪತ್ರವನ್ನು ವಿನಾಕರಣ ತಿರಸ್ಕರಿಸಲಾಗಿದೆ, ನನ್ನ ಕಕ್ಷಿದಾರರ ಪರ ವಾದ ಮಂಡಿಸಲು ಅವಕಾಶ ನೀಡಿಲ್ಲ. ಮೋದಿ ಅವರ ಗೆಲುವನ್ನು ಅನೂರ್ಜಿತಗೊಳಿಸಬೇಕು" ಎಂದು ತೇಜ್ ಬಹದ್ದೂರ್ ಪರ ವಕೀಲರು ವಾದಿಸಿದ್ದಾರೆ.