'2022 ರ ಗುಜರಾತ್ ಚುನಾವಣೆಯಲ್ಲಿ ಎಲ್ಲಾ ಸ್ಥಾನದಲ್ಲಿ ಆಪ್ ಸ್ಪರ್ಧೆ': ಅರವಿಂದ್ ಕೇಜ್ರಿವಾಲ್
ಅಹಮದಾಬಾದ್, ಜೂ.14: 2022 ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಯ ಅರವಿಂದ್ ಕೇಜ್ರಿವಾಲ್ ಸೋಮವಾರ ಪ್ರಕಟಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಏಕದಿನ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.
2021 ರಲ್ಲಿ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಎಂಸಿ) ಚುನಾವಣೆಯಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದ ನಂತರ ಕೇಜ್ರಿವಾಲ್ ಗುಜರಾತ್ಗೆ ಇದು ಎರಡನೇ ಬಾರಿ ಭೇಟಿ ನೀಡಿದ್ದಾರೆ. ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವು ಎಲ್ಲಾ ಸ್ಥಳೀಯ ಸಂಸ್ಥೆಗಳಾದ ಪುರಸಭೆ ನಿಗಮಗಳು, ಪುರಸಭೆಗಳು, ತಾಲ್ಲೂಕು ಪಂಚಾಯಿತಿಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
'ಈಗ ಗುಜರಾತ್ ಬದಲಾಗಲಿದೆ': ಅರವಿಂದ್ ಕೇಜ್ರಿವಾಲ್ ಟ್ವೀಟ್
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅರವಿಂದ್ ಕೇಜ್ರಿವಾಲ್, "ಎಎಪಿ 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಂದು ಸ್ಥಾನದಲ್ಲೂ ಸ್ಪರ್ಧಿಸಲಿದೆ. ಎಎಪಿಯು ಬಿಜೆಪಿ ಮತ್ತು ಕಾಂಗ್ರೆಸ್ಗೆ ವಿಶ್ವಾಸಾರ್ಹ ಪರ್ಯಾಯವಾಗಿದೆ. ಗುಜರಾತ್ ಶೀಘ್ರದಲ್ಲೇ ಬದಲಾಗುತ್ತದೆ," ಎಂದು ಹೇಳಿದ್ದಾರೆ.
"ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ ಸ್ನೇಹ ಮತ್ತು ಮೈತ್ರಿಯಿಂದಾಗಿ ಗುಜರಾತ್ ಬಳಲುತ್ತಿದೆ. ಕಳೆದ 27 ವರ್ಷಗಳಿಂದ ಬಿಜೆಪಿ ಈ ರಾಜ್ಯವನ್ನು ಆಳಿತು. ಕಾಂಗ್ರೆಸ್ ಬಿಜೆಪಿಯ ಜೇಬಿನಲ್ಲಿದೆ ಎಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ. ಸ್ವಾತಂತ್ರ್ಯದ ನಂತರದ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರದಲ್ಲಿದೆ. ಆದರೆ ಬಿಜೆಪಿ, ಕಾಂಗ್ರೆಸಿಗರು ಯಾವ ಕಾರ್ಯ ಮಾಡಿದ್ದಾರೆ ಎಂಬುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ. 75 ವರ್ಷಗಳ ನಂತರವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ," ಎಂದರು.
ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ: ಕೇಜ್ರಿವಾಲ್ ಘೋಷಣೆ
ಇನ್ನು ಗುಜರಾತಿ ಸುದ್ದಿ ವಾಹಿನಿಯ ಮಾಜಿ ಮುಖ್ಯಸ್ಥ ಇಸುದಾನ್ ಗಾದ್ವಿ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಗುಜರಾತ್ನ "ಪ್ರಸ್ತುತ ಪರಿಸ್ಥಿತಿ" ಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ದೂಷಿಸಿದ ಕೇಜ್ರಿವಾಲ್, "ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಾಮಾನ್ಯ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲ್ಲಿ ಎಂದು ಸರ್ಕಾರ ಬಿಟ್ಟುಬಿಟ್ಟಿದೆ," ಎಂದು ದೂರಿದರು.
"ಗುಜರಾತ್ನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಅವ್ಯವಸ್ಥೆಯಿದೆ. ವ್ಯಾಪಾರಿಗಳು ಭಯದಿಂದ ಬದುಕುತ್ತಿದ್ದಾರೆ," ಎಂದು ಅವರು ಆರೋಪಿಸಿದರು.
"ದೆಹಲಿಯಲ್ಲಿ ಉಚಿತ ವಿದ್ಯುತ್ ಇರುವಾಗ ಗುಜರಾತ್ನಲ್ಲಿ ವಿದ್ಯುತ್ ವೆಚ್ಚ ಏಕೆ ಹೆಚ್ಚಾಗಿದೆ ಎಂದು ಜನರು ತಿಳಿದುಕೊಳ್ಳಲು ಬಯಸುವಿರಾ?. ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಉನ್ನತ ದರ್ಜೆಯಲ್ಲಿರುವಾಗ ಈ ರಾಜ್ಯದಲ್ಲಿ ಏಕೆ ಕೆಟ್ಟ ಸ್ಥಿತಿಯಲ್ಲಿವೆ?," ಎಂದು ಪ್ರಶ್ನಿಸಿದ ಕೇಜ್ರಿವಾಲ್, ಗುಜರಾತ್ನಲ್ಲಿ" ದೆಹಲಿ ಮಾದರಿ" ಯನ್ನು ಜಾರಿಗೆ ತರಬೇಕು ಎಂದು ಪ್ರಸ್ತಾಪಿಸಿದರು. "ಈ ಅಭಿವೃದ್ಧಿಯ ಮಾದರಿಯನ್ನು ಗುಜರಾತ್ನ ಆರು ಕೋಟಿ ಜನರು ನಿರ್ಧರಿಸುತ್ತಾರೆ," ಎಂದು ಪರೋಕ್ಷವಾಗಿ ಆಮ್ ಆದ್ಮಿಯನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹೇಳಿದರು.
"ಎಎಪಿ ತನ್ನನ್ನು ಗುಜರಾತ್ನಲ್ಲಿ ಕಾಂಗ್ರೆಸ್ಸಿಗೆ ಅಸಾಧಾರಣ ಪರ್ಯಾಯವಾಗಿರಲು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸವಾಲು ಹಾಕಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಹಲವಾರು ಶಾಸಕರು ರಾಜೀನಾಮೆ ನೀಡಿದ್ದರಿಂದ ಹಿನ್ನಡೆ ಕಂಡಿರುವ ಕಾಂಗ್ರೆಸ್, ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ತನ್ನ ಕಳಪೆ ಪ್ರದರ್ಶನವನ್ನು ಸರಿಮಾಡುವ ಪ್ರಯತ್ನ ಮಾಡುತ್ತಿದೆ," ಎಂದು ಕಾಂಗ್ರೆಸ್, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. (ಒನ್ಇಂಡಿಯಾ ಸುದ್ದಿ)