ಗಾಂಧಿ ನೆಲದಲ್ಲಿ ಉಗ್ರವಾದ ಹುಟ್ಟು ಹಾಕಲು ಹೊರಟವನ ಕೈಗೆ ಬೇಡಿ
ಗಾಂಧಿನಗರ, ಜನವರಿ.09: ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದ ಶಂಕಿತ ಆರೋಪಿ ಒಬ್ಬನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆಯು ಬಂಧಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಐಸಿಸ್ ಸಂಘಟನೆಯನ್ನು ದೇಶದಲ್ಲಿ ಬೆಳೆಸಲು ಈತ ಸಂಚು ರೂಪಿಸಿದ್ದ ಎನ್ನಲಾಗಿದೆ.
ಗುಜರಾತ್ ವಡೋದರ ನಗರದ ಗೊರ್ವಾ ಪ್ರದೇಶದಲ್ಲಿ ಜಾಫರ್ ಅಲಿ ಎಂಬ ಶಂಕಿತ ಉಗ್ರನನ್ನು ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿದ್ದ ಶಂಕಿತನು ಕಳೆದ 10 ರಿಂದ 12 ದಿನಗಳ ಹಿಂದೆಯಷ್ಟೇ ಗುಜರಾತ್ ಗೆ ಆಗಮಿಸಿದ್ದ ಎಂದು ಹೇಳಲಾಗುತ್ತಿದೆ.
ರಾಷ್ಟ್ರ ರಾಜಧಾನಿ ಮೇಲಿ ಬಿದ್ದಿದೆಯಾ ಐಸಿಸ್ ಉಗ್ರರ ಕರಿನೆರಳು?
ಐಎಸ್ಐಎಸ್ ಸಂಘಟನೆಗೆ ಸೇರಿದ್ದ ಎನ್ನಲಾದ ಶಂಕಿತನ ಬಂಧನಕ್ಕಾಗಿ ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ, ಗುಜರಾತ್ ನ ವಡೋದರಕ್ಕೆ ಬಂದು ನೆಲೆಸಿದ್ದ ಎಂದು ಮೂಲಗಳು ತಿಳಿಸಿವೆ.
ಐಸಿಸ್ ಸಂಘಟನೆಗೆ ಸೇರಲು ಪ್ರೇರೇಪಣೆ:
ಗುಜರಾತ್ ನಲ್ಲಿ ಉಗ್ರ ಸಂಘಟನೆಯನ್ನು ಬೆಳೆಸುವುದಕ್ಕಾಗಿ ವಡೋದರಾಕ್ಕೆ ಆಗಮಿಸಿದ್ದ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ ನತ್ತ ಯುವಕರನ್ನು ಸೆಳೆಯಲು ಜಾಫರ್ ಅಲಿ ಸಂಚು ರೂಪಿಸಿದ್ದು, ಸಂಘಟನೆಗೆ ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಎಟಿಎಸ್ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.