ರಾಸಾಯನಿಕಗಳಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ: 9 ಮಂದಿ ದಹನ
ಅಹಮದಾಬಾದ್, ನವೆಂಬರ್ 4: ರಾಸಾಯನಿಗಳಿದ್ದ ಉಗ್ರಾಣದಲ್ಲಿ ಉಂಟಾದ ಭಾರಿ ಸ್ಫೋಟದಲ್ಲಿ ಭಾಗವೊಂದು ಕುಸಿದ ಪರಿಣಾಮ ಉಂಟಾದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ದಹನವಾಗಿದ್ದಾರೆ. ಕನಿಷ್ಠ ಮೂರು ಮಂದಿ ಬೆಂಕಿಯಿಂದ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಗುಜರಾತ್ನ ಅಹಮದಾಬಾದ್ನ ಪಿಪ್ಲಜ್ ರಸ್ತೆಯಲ್ಲಿ ಬುಧವಾರ ಈ ದುರ್ಘಟನೆ ನಡೆದಿದೆ.
ಇದುವರೆಗೂ ಕನಿಷ್ಠ 14 ಮಂದಿಯನ್ನು ಅವಶೇಷಗಳಿಂದ ಹೊರತೆಗೆದು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ಗಾಯಾಳುಗಳನ್ನು ಎಲ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಸಚಿವ ಪ್ರಲ್ಹಾದ ಜೋಶಿ ಪತ್ನಿ ಒಡೆತನದ ಫ್ಯಾಕ್ಟರಿಗೆ ಬೆಂಕಿ: 3 ಕೋಟಿ ರೂ. ಹೆಚ್ಚು ಹಾನಿ
ಭಾರಿ ಸ್ಫೋಟದೊಂದಿಗೆ ಹೊತ್ತಿಕೊಂಡ ಬೆಂಕಿ ಕಟ್ಟಡ ಕುಸಿತಕ್ಕೆ ಕಾರಣವಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಕಾಂಕ್ರೀಟ್ ಸ್ಲ್ಯಾಬ್ಗಳ ಅಡಿಯಲ್ಲಿ ಜನರು ಸಿಲುಕಿದ್ದು, ಅವರನ್ನು ಹೊರತೆಗೆಯಲು ಯಂತ್ರಗಳ ಮೂಲಕ ಸ್ಲ್ಯಾಬ್ಗನ್ನು ಕತ್ತರಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಕೆಲವರು ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟಿದ್ದರೆ, ಉಳಿದವರು ಚಿಕತ್ಸೆ ಪಡೆಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಸುಮಾರು 10-15 ಮಂದಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.
ಗಣೇಶನಗರದ ಬಟ್ಟೆಗಳ ಉಗ್ರಾಣದಲ್ಲಿ ಬುಧವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಉಗ್ರಾಣವು ಕುಸಿದು ಏಕಾಏಕಿ ಭಾರಿ ಬೆಂಕಿ ಆವರಿಸಿಕೊಂಡಿದೆ. ಅಗ್ನಿ ಜ್ವಾಲೆ ಎಷ್ಟು ತೀವ್ರವಾಗಿತ್ತೆಂದರೆ ಅವಶೇಷಗಳಡಿ ಸಿಲುಕಿ ಬೀಳದವರಿಗೂ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
'ಅಹ್ಮದಾಬಾದ್ನ ಗೋದಾಮಿನಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಜೀವ ಹಾನಿಯಾದ ಘಟನೆ ತೀವ್ರ ನೋವುಂಟುಮಾಡಿದೆ. ಮೃತರ ಕುಟುಂಬದವರಿಗೆ ನನ್ನ ಸಂತಾಪಗಳು. ಗಾಯಾಳುಗಳ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಅಧಿಕಾರಿಗಳು ಎಲ್ಲ ಅಗತ್ಯ ನೆರವುಗಳನ್ನು ನೀಡುತ್ತಿದ್ದಾರೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.