ಆಗ್ರಾದಲ್ಲಿ ಅಣಕು ಕಾರ್ಯಾಚರಣೆಯಿಂದ 22 ರೋಗಿಗಳು ಸಾವು? ತನಿಖೆಗೆ ಆದೇಶ
ಆಗ್ರಾ, ಜೂನ್ 8: ಆಗ್ರಾದ ಖಾಸಗಿ ಆಸ್ಪತ್ರೆಯಲ್ಲಿ ಏಪ್ರಿಲ್ 26ರಂದು 22 ಕೊರೊನಾ ರೋಗಿಗಳು ಸಾವನ್ನಪ್ಪಿದ್ದು, ಅಣಕು ಕಾರ್ಯಾಚರಣೆಗಾಗಿ ವೈದ್ಯಕೀಯ ಆಮ್ಲಜನಕ ಸರಬರಾಜನ್ನು ಕಡಿತಗೊಳಿಸಿದ್ದ ಕಾರಣ ಈ ಘಟನೆ ನಡೆದಿದೆಯೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈ ಕುರಿತು ಆಗ್ರಾ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಪರಾಸ್ ಆಸ್ಪತ್ರೆ ಮಾಲೀಕ ಅರಿಂಜನ್ ಜೈನ್ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ, ಆಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ಅಣಕು ಕಾರ್ಯಾಚರಣೆ ನಂತರ 22 ರೋಗಿಗಳು ಸಾವನ್ನಪ್ಪಿರುವ ಸಂಗತಿ ಪ್ರಸ್ತಾಪವಾಗಿತ್ತು.
ಆಮ್ಲಜನಕ ಕೊರತೆ: ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು
"ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಇದ್ದು, ಡಿಸ್ಚಾರ್ಜ್ ಆಗುವಂತೆ ಜನರಿಗೆ ಮನವಿ ಮಾಡಿದ್ದೆವು. ಆದರೆ ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆವು. ಏಪ್ರಿಲ್ 26ರ ಬೆಳಿಗ್ಗೆ ಏಳು ಗಂಟೆಗೆ 5 ನಿಮಿಷಗಳ ಕಾಲ ಆಮ್ಲಜನಕ ಸರಬರಾಜನ್ನು ನಿಲ್ಲಿಸಿದ್ದೆವು. 22 ಕೊರೊನಾ ಸೋಂಕಿತರು ತೀವ್ರ ಉಸಿರಾಟ ತೊಂದರೆಯಲ್ಲಿದ್ದು, ಆಮ್ಲಜನಕವಿಲ್ಲದೇ ಬದುಕುಳಿಯಲಾರರು ಎಂಬುದು ತಿಳಿದುಬಂದಿತು. ಕೂಡಲೇ ನಾವು ಉಳಿದ 74 ರೋಗಿಗಳ ಕುಟುಂಬದವರಿಗೆ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮಾಡುವಂತೆ ಸೂಚಿಸಿದೆವು" ಎಂದು ಅರಿಂಜನ್ ಜೈನ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆಗೆ ಆಗ್ರಹಿಸಿದೆ. ಆಗ್ರಾ ಮ್ಯಾಜೆಸ್ಟ್ರೇಟ್ ಪಿಎನ್ ಸಿಂಗ್ ಹಾಗೂ ಮುಖ್ಯ ವೈದ್ಯಾಧಿಕಾರಿ ಆರ್ಸಿ ಪಾಂಡೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಅಣಕು ಕಾರ್ಯಾಚರಣೆ ಕಾರಣವಾಗಿ 22 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾದ ವಿಡಿಯೋ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆಸ್ಪತ್ರೆಗೆ ಆಮ್ಲಜನಕವನ್ನು ಪೂರೈಕೆ ಮಾಡಿದ್ದೆವು. ವಿಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪಿಎನ್ ಸಿಂಗ್ ಮಾಹಿತಿ ನೀಡಿದ್ದಾರೆ.
ವಿಡಿಯೋ ಬಗ್ಗೆ ಅರಿಂಜನ್ ಜೈನ್ ಕೂಡ ಮಾತನಾಡಿದ್ದು, "ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾವು ಏಪ್ರಿಲ್ 26ರಂದು ಅಣಕು ಕಾರ್ಯಾಚರಣೆ ನಡೆಸಿದ್ದೆವು. ತೀರಾ ಗಂಭೀರ ರೋಗಿಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಈ ಕಾರ್ಯಾಚರಣೆ ನಡೆಸಿದ್ದೆವಷ್ಟೆ. ಏಪ್ರಿಲ್ 26ರಂದು ನಾಲ್ಕು ಕೊರೊನಾ ರೋಗಿಗಳು ಮೃತಪಟ್ಟಿದ್ದರು" ಎಂದು ಹೇಳಿಕೆ ನೀಡಿದ್ದಾರೆ.