ರೈತ ಚಳುವಳಿಯ ಕಾವು ಮತ್ತು ಪಕ್ಷ ರಾಜಕಾರಣ
ದೆಹಲಿಯ ರೈತ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ವರ್ಗದ, ಎಲ್ಲಾ ವಯೋಮಾನದ, ಎಲ್ಲಾ ವೃತ್ತಿಯ ಜನರೂ ರೈತ ಚಳವಳಿಯ ಬಗ್ಗೆ ಕಾಳಜಿ ತೋರುತ್ತಿರುವುದನ್ನು ಕಾಣಬಹುದು.
ಅಂತೆಯೇ ಈ ಚಳವಳಿಗೆ ಅನೇಕ ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿವೆ. ಮುಂದಿನ ದಿನಗಳಲ್ಲಿ ಈ ಚಳವಳಿಯ ಫಸಲು ಕೊಯಿಲು ಮಾಡಿಕೊಳ್ಳುವರ್ಯಾರು ಎಂಬುದನ್ನು ಕಾದು ನೋಡಬೇಕಿದೆ.
ರೈತ ನಾಯಕರು ಮತ್ತು ಸಾಮೂಹಿಕ ನಾಯಕತ್ವದ ಅನಿವಾರ್ಯತೆ
ಕರ್ನಾಟಕದಲ್ಲಿ ರೈತ ಚಳುವಳಿ ಉತ್ತುಂಗದಲ್ಲಿದ್ದಾಗ ಅದರ ಫಸಲು ಕೊಯಿಲು ಮಾಡಿಕೊಂಡದ್ದು ಜನತಾ ಪಕ್ಷ. 'ರೈತರಿಗೆ ಗುಂಡು ಹೊಡೆದ ಗುಂಡೂರಾಯರ ಪಕ್ಷಕ್ಕೆ ಓಟಿಲ್ಲ' ಎಂಬ ರೈತ ಸಂಘದ ಘೋಷಣೆ ಜನತಾ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಇತಿಹಾಸ. ಕರ್ನಾಟಕದಲ್ಲಿ ಕಾಂಗ್ರೇಸ್ಸೇತರ ಪಕ್ಷವನ್ನು ಅಧಿಕಾರಕ್ಕೆ ತರಲು ರೈತ ಚಳುವಳಿಯ ಕೊಡುಗೆ ದೊಡ್ಡದು.
ರಾಮಕೃಷ್ಣ ಹೆಗಡೆ ಕನಕಪುರದಲ್ಲಿ "ಹಸಿರು ಶಾಲು ನನ್ನ ತಾಯಿ, ರೈತ ಸಂಘದ ಬೋರ್ಡು ನನ್ನ ತಂದೆ" ಎಂದು ಚುನಾವಣೆ ಎದುರಿಸಿ ಗೆದ್ದು ಬಂದದ್ದು ಸ್ಮರಿಸಬಹುದು.
ಕರ್ನಾಟಕದಲ್ಲಿ ರೈತ ಸಂಘ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ ಇಷ್ಟೊತ್ತಿಗೆ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮುತ್ತಿದ್ದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಹಿರಿಯ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಅವರ ಸ್ಪಷ್ಟ ಅಭಿಪ್ರಾಯ.
ಎಚ್.ಆರ್.ಬಿ ಮಾತು
1994, ಜುಲೈ 21 ಧಾರವಾಡದಲ್ಲಿ ರೈತ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪ್ರೊ.ಎಂಡಿಎನ್, ನಾನು, ಬಾಬಾಗೌಡ ಪಾಟೀಲ್, ಹನುಮನಗೌಡ, ಶ್ರೀನಿವಾಸ್ ಆವತ್ತು ಐಬಿಯಲ್ಲಿ ಉಳಿದುಕೊಂಡಿದ್ವಿ. ಮಾರನೆಯ ದಿನ ಬೆಳಿಗ್ಗೆ (22 ರಂದು) ಎಂ.ಪಿ ಪ್ರಕಾಶ್ ಹಾಗೂ ಸಿದ್ಧರಾಮಯ್ಯ ಪ್ರೊ.ಎಂಡಿಎನ್ ಭೇಟಿಗಾಗಿ ಅತಿಥಿ ಗೃಹಕ್ಕೆ ಬಂದರು.
(ಸಿದ್ದರಾಮಯ್ಯ 83 ರಲ್ಲಿ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾಗಿದ್ದವರು, ಪ್ರೊ. ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳಲಿಲ್ಲವಾಗಿ ರೈತ ಸಂಘ ಬಿಟ್ಟು ಪಕ್ಷ ರಾಜಕಾರಣಕ್ಕೆ ಆಗಲೇ ಹೋದವರು. ಸಿದ್ದರಾಮಯ್ಯ ಒಬ್ಬರೇ ಅಲ್ಲ ಗೋವಿಂದೇ ಗೌಡ-ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿದ್ದವರು, ಸಿಂಧ್ಯಾ ಬೆಂಗಳೂರು ಜಿಲ್ಲಾಧ್ಯಕ್ಷರು, ಹೀಗೆ ಅನೇಕರನ್ನು ರೈತ ಸಂಘದಿಂದ ಜನತಾ ಪಕ್ಷ ತನ್ನತ್ತ ಸೆಳೆದುಕೊಳ್ಳುವಲ್ಲಿ ಸಫಲವಾಯಿತು)
ಪ್ರೊ.ಎಂಡಿಎನ್- ಎಂ.ಪಿ ಪ್ರಕಾಶ ಮತ್ತು ಸಿದ್ಧರಾಮಯ್ಯ ಅವರ ಮಾತುಕತೆ
ಎಂ.ಪಿ.ಪ್ರಕಾಶ್: ನೋಡಿ ಪ್ರೊಫೆಸರ್ ನಾವೂ ನೀವೂ ಹೊಂದಾಣಿಕೆ ಮಾಡಿಕೊಳ್ಳೋಣ, ನಾವೊಂದು 70 ಸೀಟು ಬರ್ತೀವಿ, ನೀವೂ ಒಂದು ನಲವತ್ತು ಸೀಟು ಬರುವುದು ಗ್ಯಾರಂಟಿ, ಎಲೆಕ್ಷನ್ ಗೆ ಮುಂಚೆ ಹೊಂದಾಣಿಕೆ ಮಾಡ್ಕೊಂಡು ಎಲೆಕ್ಷನ್ ಎದುರಿಸೋಣ.
ಪ್ರೊ.ಎಂಡಿಎನ್: ನಿಮ್ಮಲ್ಲಿ ನಾಲ್ಕು ಮುದಿಯಾಗಳಿದಾರಲ್ಲಾ ಅವ್ರನ್ನ ಹೊರಗಾಕ್ದೆ ಹೋದ್ರೆ ನಿಮಗೆ ಭವಿಷ್ಯ ಇಲ್ಲ. ಯುವಕರನ್ನು ತರೋಕೆ ಆಗಲ್ಲ, ಮೊದ್ಲು ಅವ್ರನ್ನು ಹೊರಗಾಕಿ ಬನ್ನಿ ನೋಡೋಣ" (ದೇವೇಗೌಡ, ಹೆಗಡೆ, ಬೊಮ್ಮಯಿ, ಪಟೇಲ್).
ನಿಶ್ಯಬ್ಧ
ಎಂ.ಪಿ.ಪ್ರಕಾಶ್: ಸರಿ ಸಾರ್ ನಾವು ಹೊರಡ್ತೀವಿ. ನಂತರ ನಾನು ಬಾಬಾಗೌಡರು ಎಲ್ಲಾ ಪ್ರೊ.ಗೆ "ಏನ್ಸಾರ್ ಇಂಥಾ ಆಪಾರ್ಚುನಿಟಿ ಕಳೀತೀರಿ" ಅಂದೆವು.
ಎಂಡಿಎನ್: ರೈತರು ಹಣ್ಣು ಹರಿವಾಣ ತಗೊಂಡು ರೈತ ಸರ್ಕಾರ ತರೋಕೆ ತಯಾರಿದಾರೆ, ರೈತ ಸಂಘದ ಮುಖ್ಯಮಂತ್ರಿನೇ ಬರೋವಾಗ ಈ ಹೊಂದಾಣಿಕೆಗೆ ಹೊರಟಿದ್ದೀರಲ್ಲಾ, ನಿಮ್ಮ ಮೇಲೆಲ್ಲಾ ಕ್ರಮ ತಗೋಬೇಕು.
ಎಲ್ಲರೂ: ಬಾಯಿ ಬಂದ್.
1994 ರಲ್ಲಿ 115 ಸೀಟುಗಳಿಂದ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಇದಕ್ಕೂ ಮುನ್ನ 1985 ರಲ್ಲಿ ಜೆ.ಹೆಚ್.ಪಟೇಲರು ರೈತ ಸಂಘಕ್ಕೆ 40-50 ಸೀಟು ಕೊಡಿಸುವುದಾಗಿ ಹೇಳಿದಾಗಲೂ ಪ್ರೊ.ಎಂಡಿಎನ್ ಒಪ್ಪಿರಲಿಲ್ಲ.
1989 ರಲ್ಲಿ ರೈತ ಸಂಘ ಎರಡು ಸೀಟ್ ಗೆದ್ದಿತ್ತು. 32 ಕಾನ್ಸ್ಟಿಟ್ಯುಯೆನ್ಸಿಯಲ್ಲಿ ಎರಡನೆಯ ಸ್ಥಾನದಲ್ಲಿದ್ವಿ. 40-46 ರಲ್ಲಿ ಮೂರನೆಯ ಸ್ಥಾನದಲ್ಲಿದ್ವಿ. ಸಕ್ರಿಯ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ವಿ. ಇದರ ಹಿನ್ನೆಲೆಯನ್ನೆಲ್ಲಾ ನೋಡಿದ್ದ ಜನತಾ ಪಕ್ಷದ ಮುಖಂಡರು ನಮ್ಮೊಂದಿಗೆ ಕೈಜೋಡಿಸಲು ಬಹಳ ಪ್ರಯತ್ನ ಪಟ್ಟರು. ಅದಕ್ಕೆ ನಿಮ್ಮ ಪ್ರೊ. ಅವಕಾಶ ಕೊಡ್ಲಿಲ್ಲ ನಾಗೇಶ್.
ನಾಗೇಶ್: ನಮ್ಮ ಪ್ರೊ. ಮಾತ್ರನಾ
ಎಚ್ ಆರ್ ಬಿ: ನಮ್ಮ ಪ್ರೊ. ಹೌದು. ನಮಗೆಲ್ಲಾ ಆಸೆ ಇತ್ತು. ಹೊಂದಾಣಿಕೆ ರಾಜಕಾರಣ ಮಾಡೋಕೆ. ಪ್ರೊ. ಗೆ ಹೊಂದಾಣಿಕೆ ಅಂದ್ರೆ ಆಗ್ತಿರ್ಲಿಲ್ಲಾ. ನಾವೇನೂ ಆಗ್ಲಿಲ್ವಲ್ಲಾ ಅನ್ನೋ ಬೇಜಾರು ಇದ್ರೂನೂ ನಮಗೆ ಸ್ವಾಭಿಮಾನದ ಪಾಠ ಹೇಳಿದ. ನಾವು ಯಾರಿಗಿಂತಲೂ ಕಡಿಮೆ ಅಲ್ಲಾ ಅನ್ನೋ ರೀತಿ ಬದುಕಲು ಕಲಿಸಿದ್ರು ಪ್ರೊ. ಇರ್ಲಿ.
ಎಚ್ ಎಸ್ ರುದ್ರಪ್ಪ ಅವರು ಎಂಡಿಎನ್ ಅವರಿಗೆ ಒಂದು ಮಾತು ಹೇಳೋವ್ರು. "ನಿನಗೆ ಗೊತ್ತಾಗಲ್ಲಾ ಕಣಪ್ಪಾ., ಎದುರಾಳಿ ಸೈನ್ಯದ ಬಲ ನೋಡ್ಬೇಕು ನಾವು. ಹಿಂದೆ ರಾಜ ಮಹಾರಾಜರುಗಳು ಯುದ್ಧಕ್ಕೆ ಹೋಗೋವಾಗ ಎದುರಾಳಿ ಸೈನ್ಯ ದೊಡ್ಡದಿದ್ರೆ ಅಕ್ಕ ಪಕ್ಕದ ಸಣ್ಣ ಪುಟ್ಟ ರಾಜರುಗಳ ಜೊತೆ ಹೊಂದಾಣಿಕೆ ಮಾಡ್ಕೊಂಡು ಯುದ್ದಕ್ಕಿಳೀತಿದ್ದ. ಹಂಗೆನೇ ಇದೂ ಕೂಡಾ"
ಹೀಗೆ ಒಟ್ಟಾರೆ ಸಂಘದಲ್ಲಿ ಬಹುತೇಕರಿಗೆ ಪಕ್ಷ ರಾಜಕಾರಣದ ಹೊಂದಾಣಿಕೆ ಬಗ್ಗೆ ಆಸಕ್ತಿ ಇತ್ತು. ಎಂಡಿಎನ್ ಅದಕ್ಕೆ ಅವಕಾಶ ಕೊಡಲಿಲ್ಲ.
ನಿಮಗೊಂದು ವಿಷಯ ಹೇಳಲೇ ಬೇಕು.
ಮುಲಾಯಂ ಅವರು ಪ್ರೊ. ಮನೆಗೆ ಬರೋದಾಗಿ ಹೇಳಿದ್ರು. ಆಗ ನನ್ನನ್ನು ಮತ್ತು ಮಂಡ್ಯದ ಬೋರಪ್ಪನನ್ನು ಕರೆಸ್ಕೊಂಡಿದ್ರು ಪ್ರೊಫೆಸರ್. ಏನ್ ಪೊಲೀಸ್ ಬಂದೋಬಸ್ತು, ನಾಯಿಗಳು, ಸೆಕ್ಯೂರಿಟಿ ಜೋರಾಗಿತ್ತು ಪ್ರೊ ಮನೇಲಿ. ಸ್ವಲ್ಪ ಹೊತ್ತಾದ್ಮೇಲೆ ಪೊಲೀಸ್ನೋರಿಗೆ ಏನ್ರಪ್ಪಾ ಎಷ್ಟೊತ್ತಾಗುತ್ತಂತೆ ಬರೋದು ಅಂದರು ಎಂಡಿಎನ್. ಅವರು ಸಾರ್ ದೇವೇಗೌಡರ ಮನೇಲಿದಾರೆ ಇನ್ನೇನು ಹೊರಡ್ತಾರೆ ಅಂದರು.
ಕೂಡಲೇ ಅವ್ರಿಗೇಳಿ ಬರೋದು ಬೇಡಾ ಅಂತಾ, ಬೇರೆ ಏನೋ ಕೆಲ್ಸದ ಮೇಲೆ ಆಚೆ ಹೋಗಿದಾರೆ ಅಂತಾ ತಿಳಿಸ್ ಬಿಡಿ ಅಂತಾ ಪೊಲೀಸರನ್ನು ಕಳಿಸೇ ಬಿಟ್ರು. ಹಿಂಗೆ ನಿಮ್ ಪ್ರೊಫೆಸರ್ ಎಂದವರ ಧ್ವನಿಯಲ್ಲಿ ರಾಜಕಾರಣದಲ್ಲಿ ಏನೂ ಅಗಲಿಲ್ಲವಲ್ಲಾ ಎಂಬ ನೋವಂತೂ ಇತ್ತು.
ಈಗ ವಿಷಯಕ್ಕೆ ಬರೋಣ. ಇದೀಗ ದಿಲ್ಲಿ ಚಳವಳಿಯ ಕಾವನ್ನು ಮುಂದಿನ ಚುನಾವಣೆಯಲ್ಲಿ ರೈತ ಹೋರಾಟಗಾರರು ರೈತ ಸಂಘಗಳು ಬಳಸಿಕೊಳ್ಳದೇ ಇದ್ದಲ್ಲಿ. ರೈತ ಸಂಘದಿಂದಲೇ ನೇರ ಚುನಾವಣೆ ಎದುರಿಸದೇ ಇದ್ದಲ್ಲಿ, ಮತ್ತಾವುದೋ ಪಕ್ಷ ಇದರ ಫಸಲು ಕೊಯಿಲು ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ.