ತಾಜ್ಮಹಲ್ನಲ್ಲಿ ಶಿವಪೂಜೆ: ಹಿಂದೂ ಮಹಾಸಭಾದ ಮೂವರ ಬಂಧನ
ಆಗ್ರಾ, ಮಾರ್ಚ್ 12: ತಾಜ್ ಮಹಲ್ ಆವರಣದ ಒಳಗೆ ಶಿವಪೂಜೆಗೆ ಮುಂದಾಗಿದ್ದ ಹಿಂದೂ ಮಹಾಸಭಾದ ಮೂವರು ಸದಸ್ಯರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬ ಮಹಿಳೆ ಸೇರಿದಂತೆ ಮೂವರು ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐತಿಹಾಸಿಕ ತಾಜ್ಮಹಲ್ ಸ್ಮಾರಕ ರಕ್ಷಣೆಗಾಗಿ ನಿಯೋಜಿಸಲಾಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಈ ಮೂವರನ್ನು ಬಂಧಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಾಜ್ಗಂಜ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಚಂದ್ರ ತ್ರಿಪಾಠಿ ತಿಳಿಸಿದ್ದಾರೆ.
ಮಹಾಶಿವರಾತ್ರಿ: ಶಿವನ ದರ್ಶನ ಪಡೆದ ರಾಜ್ಯದ ಪ್ರಭಾವಿ ರಾಜಕಾರಣಿಗಳು!
ಹಿಂದೂ ಮಹಾಸಭಾದ ಪ್ರಾಂತೀಯ ಅಧ್ಯಕ್ಷೆ ಮೀನಾ ದಿವಾಕರ್ ಅವರು, ಗುರುವಾರ ಶಿವರಾತ್ರಿಯ ಸಂದರ್ಭದಲ್ಲಿ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಸೇರಿ ತಾಜ್ಮಹಲ್ ಆವರಣದಲ್ಲಿನ ಮುಖ್ಯ ತೊಟ್ಟಿ ಸಮೀಪದ ಬೆಂಚ್ ಒಂದರ ಮೇಲೆ ಶಿವಪೂಜೆಗೆ ಸಿದ್ಧತೆ ನಡೆಸುತ್ತಿದ್ದರು. ಆಗ ಅವರನ್ನು ಬಂಧಿಸಲಾಗಿದೆ.
ಮೊಘಲರ ಕಾಲದ ಈ ಐತಿಹಾಸಿಕ ಸ್ಮಾರಕವನ್ನು ಭಾರತೀಯ ಪುರತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ತಾಜ್ಮಹಲ್ ಷಹಜಹಾನ್ ಕಟ್ಟಿಸದ ಸ್ಮಾರಕವಲ್ಲ. ಅದು ಮೂಲತಃ ಹಿಂದೂ ದೇವಾಲಯ. ತೇಜೋಮಹಲ್ ಎಂಬ ಹೆಸರನ್ನು ಸಮಾಧಿಯನ್ನಾಗಿ ಬದಲಿಸಿ ತಾಜ್ಮಹಲ್ ಮಾಡಲಾಯಿತು ಎಂದು ಅನೇಕ ಹಿಂದೂಪರ ಸಂಘಟನೆಗಳು ಪ್ರತಿಪಾದಿಸಿವೆ.