ನೆಲಕ್ಕುರುಳಿದ ಐತಿಹಾಸಿಕ ವಿದುರಾಶ್ವತ್ಥ ಮರ
ಗೌರಿ ಬಿದನೂರು ನಗರದಿಂದ ಸುಮಾರು 9 ಕಿ.ಮೀ. ದೂರದಲ್ಲಿ ವಿದುರಾಶ್ವಥ ಕ್ಷೇತ್ರವಿದೆ. ಇಲ್ಲಿ ವಿದುರಾಶ್ವಥ ನಾರಾಯಣ ಸ್ವಾಮಿ ದೇವಸ್ಥಾನವಿದ್ದು, ಇದೊಂದು ಪುಣ್ಯ ಸ್ಥಳವಾಗಿದೆ. ಇಲ್ಲಿನ ವಿದುರ ಮರ ಬುಧವಾರ ಬೆಳಗ್ಗೆ ಭಾರೀ ಮಳೆಯ ಕಾರಣ ಧರೆಗೆ ಉರುಳಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆಸುರಿಯುತ್ತಿದೆ. ಮಂಗಳವಾರ ರಾತ್ರಿಯೂ ಗೌರಿಬಿದನೂರಿನಲ್ಲಿ 5 ಸೆಂ.ಮೀ.ಮಳೆ ಸುರಿದಿತ್ತು. ಇದರಿಂದಾಗಿ ಐತಿಹಾಸಿಕ ಮರ ಧರೆಗುರುಳಿದೆ.
ಪುರಾಣದಂತೆ ವಿದುರ ದೃತರಾಷ್ಟ್ರನ ತಮ್ಮ. ಕೌರವರಿಗೆ ರಾಜ್ಯಭಾರ ಮಾಡಲು ಅವರು ಸಹಾಯ ಮಾಡುತ್ತಿದ್ದರಂತೆ. ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಮೈತ್ರೆಯೀ ಮುನಿಯ ಆಶ್ರಮಕ್ಕೆ ಬಂದ ವಿದುರ ಅಲ್ಲಿ ವಾಸಿಸುತ್ತಿದ್ದನಂತೆ.
ಋಷಿವರ್ಯರು ವಿದುರನಿಗೆ ಆಶ್ರಮದಲ್ಲಿ ಅಶ್ವಥ ಮರ ನೆಟ್ಟು, ಅದನ್ನು ಬೆಳೆಸಬೇಕೆಂದು ತಿಳಿಸಿ ದೇಶ ಪರ್ಯಟನೆಗೆ ಹೊರಟರಂತೆ. ವಿದುರನು ಆಶ್ವತ ಮರವನ್ನು ಮತ್ತು ಆ ಪ್ರದೇಶ ವನ್ನು ನೋಡಿಕೊಂಡದ್ದರಿಂದ ಈ ಸ್ಥಳ ವಿದುರಾಶ್ವಥ ಎಂದೇ ಪ್ರಸಿದ್ದವಾಗಿದೆ.
ವಿದುರಾಶ್ವತ್ಥವು ದಕ್ಷಿಣ ಭಾರತದ ಜಲಿಯಾನ್ ವಾಲಾ ಬಾಗ್ ಎಂದೂ ಪ್ರಸಿದ್ಧವಾಗಿದೆ. 1938ರಲ್ಲಿ ಹಲವಾರು ಪ್ರತಿಭಟನಾಕಾರರು ಬ್ರಿಟಿಷರ ಗುಂಡೇಟಿಗೆ ಈ ಸ್ಥಳದಲ್ಲಿ ಬಲಿಯಾಗಿದ್ದರು. ಮರದ ಪಕ್ಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರ "ಶಿಲಾ ಸ್ಮಾರಕ" ಹಾಗೂ "ವೀರ ಸೌಧ"ಗಳಿವೆ.