ಗಣಪನನ್ನು ಸ್ವಾಗತಿಸಲು ಬೆಂಗಳೂರಿಗರು ಸಜ್ಜು!
ಬೆಂಗಳೂರು, ಸೆ.8 : ಸೋಮವಾರ ಗಣೇಶನನ್ನು ಬರಮಾಡಿಕೊಳ್ಳಲು ಬೆಂಗಳೂರು ಮಹಾನಗರಿ ಸಜ್ಜಾಗಿ ನಿಂತಿದೆ. ಶನಿವಾರದಿಂದಲೇ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿ ಹೋಗಿದ್ದವು. ಬೆಲೆ ಏರಿಕೆಯ ಬಿಸಿಯ ನಡುವೆಯೂ ಜನರು ಹಬ್ಬಕ್ಕೆ ಅಗತ್ಯವಾದ ವಸ್ತು ಖರೀದಿಸಿ ಗಣಪನನ್ನು ಸ್ವಾಗತಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷದ ಗಣೇಶ ಚತುರ್ಥಿಗೆ ಹೋಲಿಸಿದರೆ ಈ ಬಾರಿ ಎಲ್ಲಾ ವಸ್ತುಗಳ ಬೆಲೆ ಶೇ 20ರಷ್ಟು ಹೆಚ್ಚಾಗಿದೆ ಎಂಬುದು ಬೆಂಗಳೂರಿನ ಜನರ ಆರೋಪ. ಬೆಲೆ ಎಷ್ಟಾದರೂ ಏನು? ಹಬ್ಬ ಮಾಡುವುದು ಬಿಡಲಾದಿತೆ. ಜನರು ಮಾರುಕಟ್ಟೆಗೆ ನುಗ್ಗಿ ಅಗತ್ಯವಸ್ತುಗಳನ್ನು ಖರೀಸಿದಿ ತಂದಿದ್ದಾರೆ.
ಗಣೇಶ ಹಬ್ಬಕ್ಕೆ ಅತ್ಯಗತ್ಯವಾದ ಹೂವು, ಗಣೇಶ ಮೂರ್ತಿ, ಬಾಳೆಕಂದುಗಳ ಬೆಲೆ ಹೆಚ್ಚಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ ಎಂಬ ಮಾಲಿನ್ಯ ನಿಯಂತ್ರಣ ಮಂಡಳ ಮನವಿ ಇದ್ದರೂ ರಾಸಾಯನಿಕಯುಕ್ತ ಗಣಪತಿ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ.
ಹಣ್ಣು, ತರಕಾರಿ, ದಿನಸಿ ಸಾಮಾಗ್ರ, ಗಣಪತಿ ವಿಗ್ರಹ ಇವುಗಳ ಬೆಲೆ ಏರಿಕೆಯ ನಡುವೆಯೇ ಈ ಬಾರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಬೆಂಗಳೂರು ನಗರ ಸಜ್ಜಾಗಿದೆ. ಚಿತ್ರಗಳಲ್ಲಿ ನಗರದ ಗಣೇಶ ಹಬ್ಬದ ತಯಾರಿಯನ್ನು ನೋಡೋಣ ಬನ್ನಿ...
ಗಣೇಶ ವಿಗ್ರಹ ದುಬಾರಿ
ಈ ಬಾರಿ ಬಣ್ಣದ ಗಣಪನ ಬೆಲೆ ಹೆಚ್ಚಾಗಿದೆ. 3 ರಿಂದ 20 ಅಡಿ ಗಣೇಶನ ವಿಗ್ರಹದ ಬೆಲೆ 50 ರೂ.ನಿಂದ ಪ್ರಾರಂಭವಾಗಿ 1 ಸಾವಿರ ರೂ.ವರೆಗೆ ಇದೆ. ಆರ್.ವಿ.ರಸ್ತೆಯಲ್ಲಿ ಮುತ್ತಿನಹಾರವಿರುವ ಗಣಪತಿ ವಿಗ್ರಹದ ಬೆಲೆ 20 ಸಾವಿರ ರೂ. ಬಾಂಬೆ ಗಣೇಶ ವಿಗ್ರಹದ ಬೆಲೆ 12 ರಿಂದ 30 ಸಾವಿರದವರೆಗೆ ಇದೆ.
ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ
ಈ ಬಾರಿ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಯಾವುದೇ ಅಲಂಕಾರವಿಲ್ಲದ ಮಣ್ಣಿನಿಂದ ಮಾಡಿದ 1 ಅಡಿ ಗಣೇಶ ವಿಗ್ರಹದ ಬೆಲೆ 150ರಿಂದ 200 ರೂ ಆಗಿದೆ.
ಹೂವು ಸಖತ್ ದುಬಾರಿ
ಗಣೇಶ ಹಬ್ಬಕ್ಕೆ ಹೂವಿನ ಬೆಲೆ ಗಗನಕ್ಕೆ ಹೋಗಿದೆ. ಮಲ್ಲಿಗೆ ಕೆ.ಜಿ.ಗೆ 300, ಕನಕಾಂಬರ 500 ರಿಂದ 700, ಸೇವಂತಿ 200, ತಾವರೆ ಹೂ 1ಕ್ಕೆ 20 ರಿಂದ 30 ಆಗಿದೆ. ಗಣಪತಿಗೆ ಧರಿಸುವ ಹೂವಿನ ಹಾರದ ಬೆಲೆ 350 ರಿಂದ 1400ರೂ.ವರೆಗೆ ಇದೆ.
ಬಾಳೆಕಂದು ದುಬಾರಿ
ನಗರದ ಅನೇಕ ಪ್ರದೇಶಗಳಲ್ಲಿ ಫುಟ್ ಪಾತ್ ಮೇಲೆ ಬಾಳೆಕಂದು ವ್ಯಾಪಾರ ಜೋರಾಗಿ ಸಾಗಿದೆ. ಆದರೆ, ಬೆಲೆ ಮಾತ್ರ ಕೇಳುವಂತಿಲ್ಲ. ಜೋಡಿ ಬಾಳೆಕಂದಿಗೆ ಭಾನುವಾರ ಬೆಳಗ್ಗೆ 40ರಿಂದ 50 ರೂ. ಇತ್ತು. ಭಾನುವಾರ ಸಂಜೆ ದರ ಇನ್ನೂ ಹೆಚ್ಚಾಗಲಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಡುತ್ತಿದ್ದರು.
ಮತ್ತೆ ತರಕಾರಿ ಬೆಲೆ ಏರಿಕೆ
ಈ ಬಾರಿ ತರಕಾರಿ ಬೆಲೆ ಗ್ರಾಹಕರ ಜೇಬಿಗೆ ಕತ್ತಿರಿ ಹಾಕಿದ್ದೆ ಹೆಚ್ಚು. ಈಗ ಗಣೇಶ ಹಬ್ಬದಿಂದಾಗಿ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಕುಂಬಳಕಾಯಿ ಕೆ.ಜಿ.ಗೆ 20 ರೂ., ಬದನೆಕಾಯಿ 25, ಬೆಂಡೆಕಾಯಿ 25, ಬೀನ್ಸ್ 50 ರಿಂದ 60 ಹೀಗೆ ಎಲ್ಲಾ ತರಕಾರಿಗಳ ಬೆಲೆ 30-40 ರೂ.ಗಳಿಂದಲೇ ಪ್ರಾರಂಭವಾಗುತ್ತಿದೆ.
ಹಣ್ಣು ನೋಡಲು ಮಾತ್ರ
ಗಣಪನಿಗೆ ಹಣ್ಣುಗಳೆಂದರೆ ಪಂಚಪ್ರಾಣ ಆದರೆ, ಗಣೇಶನಿಗೆ ಹಣ್ಣು ನೇವೇದ್ಯ ಮಾಡಲು ಅದನ್ನು ಕೊಳ್ಳುವಂತಿಲ್ಲ. ಬಾಳೆಹಣ್ಣು ಕೆ.ಜಿ.ಗೆ 40ರಿಂದ 50 ರೂ. ಮೂಸಂಬಿ 50 ರಿಂದ 60 ರೂ., ಸೇಬು 90ರಿಂದ 150ರೂ.ಗಳಿಗೆ ಮಾರಾಟವಾಗುತ್ತಿದೆ.
ಮಾರುಕಟ್ಟೆಯಲ್ಲಿದೆ ರೆಡಿಮೇಡ್ ಬಾಗಿನ
ಮೊದಲು ಗಣಪತಿ ಮತ್ತು ಗೌರಿ ಹಬ್ಬದ ಬಾಗಿನಗಳ ವಸ್ತುಗಳು ಮಾತು ಮಾರುಕಟ್ಟೆಯಲ್ಲಿ ದೊರೆಯುತ್ತಿತ್ತು. ಈ ಬಾರಿ ರೆಡಿಮೇಡ್ ಬಾಗಿನ ಮಾರುಕಟ್ಟೆಗೆ ಆಗಮಿಸಿದೆ. 250 ರಿಂದ 300 ರೂ.ಗಳಿಗೆ ರೆಡಿಮೇಡ್ ಬಾಗಿನ ಮಾರಾಟವಾಗುತ್ತಿದೆ.
ಬಸನವಗುಡಿಯಲ್ಲಿ ಮರಳಿನ ಗಣಪ
ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸನವಗುಡಿಯ ಶ್ರೀ ವಿದ್ಯಾರಣ್ಯ ಯುವಕರ ಸಂಘವು ಮರಳಿನ ಗಣಪತಿ ಪ್ರತಿಷ್ಠಾಪನೆಗೆ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಂಘದ ಅಧ್ಯಕ್ಷ ನಟರಾಜ್, ಸೆ.9ರಿಂದ 11 ದಿನಗಳ ಕಾಲ ಇಲ್ಲಿನ ಎಪಿಎಸ್ ಕಾಲೇಜು ಆವರಣದಲ್ಲಿ 51ನೇ 'ಬೆಂಗಳೂರು ಗಣೇಶ ಉತ್ಸವ' ಹಮ್ಮಿಕೊಂಡಿದ್ದು, 15 ಅಡಿ ಉದ್ದ ಹಾಗೂ 50 ಅಡಿ ಅಗಲದ ಮರಳಿನ ಗಣಪತಿ ಈ ಬಾರಿಯ ಗಣೇಶೋತ್ಸವದ ಕೇಂದ್ರ ಬಿಂದುವಾಗಿದೆ ಎಂದು ಹೇಳಿದ್ದಾರೆ. ಒಡಿಶಾ ಕಲಾವಿದರು ಈ ಮರಳಿನ ಗಣೇಶನನ್ನು ತಯಾರಿಸಿದ್ದಾರೆ.
ಆರ್.ವಿ.ರಸ್ತೆಯಲ್ಲಿ ಅನ್ನಭಾಗ್ಯ ಗಣಪತಿ
ನಗರದ ಆರ್.ವಿ.ರಸ್ತೆಯಲ್ಲಿ ನಿರ್ಮಿಸಿರುವ ಅನ್ನಭಾಗ್ಯ ಗಣಪತಿ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗೆ ಗಣೇಶನೂ ಒಳ್ಳೆಯದಾಗಲಿ ಎಂದು ಹರಸುತ್ತಿದ್ದಾನೆ.
ಕರ್ನಾಟಕದಲ್ಲೇ ಎತ್ತರದ ಗಣಪ
ಕರ್ನಾಟಕದಲ್ಲೇ ಅತಿ ಎತ್ತರದ ಗಣಪತಿ ವಿಗ್ರಹ ಬೆಂಗಳೂರಿನಲ್ಲಿ ಪ್ರತಿಷ್ಠಾಪನೆ ಆಗಲಿದೆ. ಹೆಣ್ಣೂರು ಬಳಿಯ ಹೊರ ವರ್ತುಲ ರಸ್ತೆಯಲ್ಲಿ 63 ಅಡಿ ಎತ್ತರದ ಗಣೇಶ ಪ್ರತಿಷ್ಠಾಪನೆ ಆಗುತ್ತಿದೆ. ಶಿವಮೊಗ್ಗ ಮೂಲದ ಶಿಲ್ಪಿಯೊಬ್ಬರು ಇದನ್ನು ನಿರ್ಮಿಸಿದ್ದು, ಅನ್ನಪೂರ್ಣೇಶ್ವರಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಸಂಘ ಪ್ರತಿ ವರ್ಷ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತದೆ.