ಭಾರತದ ವಿರುದ್ದ ಮತ್ತೆ ವಿಷ ಕಕ್ಕಿದ ಹಫೀಜ್ ಸಯೀದ್
ಇಸ್ಲಾಮಾಬಾದ್, ಸೆ 7: ಭಾರತದ ವಿರುದ್ದ ಮತ್ತೆ ಜಮಾತ್-ಉದ್-ದುವಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ವಿಷ ಕಕ್ಕಿದ್ದಾನೆ. ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 'ಭಾರತವನ್ನು ಭಯೋತ್ಪಾದಕ ದೇಶ'ಎಂದು ಘೋಷಿಸ ಬೇಕೆಂದು ವಿಶ್ವ ನಾಯಕರನ್ನು ಒತ್ತಾಯಿಸಿದ್ದಾನೆ.
ಭಾರತ ಒಂದು ಉಗ್ರರ ದೇಶ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಬ್ಬ ಕೊಲೆಗಡುಕ ಎಂದು ಸಭೆಯಲ್ಲಿ ಜರಿದಿದ್ದಾನೆ. ಸಾವಿರಾರು ಜನ ಸೇರಿದ್ದ ಸಾರ್ವಜನಿಕ ಸಭೆಯಲ್ಲಿ ಹಫೀಜ್ ಭಾರತದ ವಿರುದ್ದ ಮನಸೋ ಇಚ್ಚೆ ವಾಗ್ದಾಳಿ ನಡೆಸಿದ್ದಾನೆ.
ಸಾವಿರಾರು ಮಂದಿ ಹಿಂಬಾಲಕರೊಂದಿಗೆ ದೇಫಾ-ಇ-ಪಾಕಿಸ್ತಾನ್ ಯಾತ್ರೆ ನಡೆಸುತ್ತಿರುವ ಹಫೀಜ್ ವಾಗ್ದಾಳಿ ಇಸ್ಲಾಮಾಬಾದ್ ನಂತರ ಪಾಕಿಸ್ಥಾನದ ಇನ್ನೊಂದು ನಗರ ರಾವಲ್ಪಿಂಡಿಯಲ್ಲೂ ಮುಂದುವರಿದಿದೆ.
ಭಾರತ ವಿರೋಧಿ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದಂತೆ, ನಾವು ವಿಶ್ವದಲ್ಲಿ ಪ್ರಭಲ ರಾಷ್ಟ್ರವಾಗ ಬೇಕು. ಭಾರತ ನಮ್ಮ ಬದ್ದ ವೈರಿ. ಉಗ್ರರಿಗೆ ಭಾರತವೇ ಮೂಲ ನೆಲೆ ಎಂದು ಭಾಷಣ ಬಿಗಿದಿದ್ದಾನೆ.
ಪಾಕಿಸ್ಥಾನ ಶಾಂತಿ ಬಯಸಿದರೂ ಗಡಿಯಲ್ಲಿ ಹಿಂದೂಸ್ಥಾನದ ಯೋಧರು ಕದನ ವಿರಾಮ ಉಲ್ಲಂಘಿಸುತ್ತಿದ್ದಾರೆ, ನಮ್ಮ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಸಭೆಯಲ್ಲಿ ಟೀಕಾ ಪ್ರಹಾರ ಮಾಡಿದ್ದಾನೆ.
ಭಾರತ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪಾಕಿಗಳು ಹಫೀಜ್ ನಡೆಸುತ್ತಿರುವ ಭಾರತ ವಿರೋಧಿ ಯಾತ್ರೆಗೆ ಭಾರೀ ಬೆಂಬಲ ನೀಡುತ್ತಿದ್ದಾರೆ.
ಹಫೀಜ್ ಭಾಷಣದ ಸ್ವಲ್ಪ ಹೊತ್ತಿನಲ್ಲೇ ಕಾಕತಾಳೀಯ ಎನ್ನುವಂತೆ ಪಾಕ್ ಪಡೆಗಳು ಗಡಿಯಲ್ಲಿ ಮತ್ತೆ ಭಾರತದ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೂಂಚ್ ಭಾಗದ ಮೇಗ್ದಾರ್ ಗಡಿಯಲ್ಲಿ ಈ ದಾಳಿ ನಡೆದಿದೆ. (ಪಿಟಿಐ)