ಕೆಲ ರಾಜಕಾರಣಿಗಳಿಗೆ ಜೈಲು ಖಂಡಿತ: ಕೋಡಿಶ್ರೀಗಳ ಭವಿಷ್ಯ
ಹುಬ್ಬಳ್ಳಿ, ಸೆ 4: ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ದೇಶ ಭಾರೀ ಅಸ್ಥಿರತೆಗೆ ಸಿಲುಕಲಿದೆ, ರಾಜ್ಯದ ಕೆಲವು ರಾಜಕಾರಣಿಗಳು ಜೈಲು ಶಿಕ್ಷೆ ಅನುಭವಿಸಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಅಸ್ಥಿರತೆ ತಪ್ಪಿದ್ದಲ್ಲ. ವ್ಯವಸಾಯವನ್ನೇ ನಂಬಿಕೊಂಡಿರುವ ರೈತರು ಸಂಕಷ್ಟ ಎದುರಿಸ ಬೇಕಾಗುತ್ತದೆ ಎಂದು ಕೋಡಿಮಠದ ಶ್ರೀಗಳು ಮಂಗಳವಾರ (ಸೆ 3)ಹೇಳಿದ್ದಾರೆ.
ಅಕ್ಟೋಬರ್ ತಿಂಗಳವರೆಗೆ ಸಿದ್ದರಾಮಯ್ಯ ಸರಕಾರಕ್ಕೆ ಅಪಾಯ ಎದುರಾಗಲಿದೆ. ಇನ್ನು ಹನ್ನೊಂದು ತಿಂಗಳಲ್ಲಿ ರಾಜ್ಯ ಸರಕಾರದ ಭವಿಷ್ಯದ ಸ್ಪಷ್ಟತೆ ಗೊತ್ತಾಗಲಿದೆ. ದೇಶ ಹಲವು ಅವಘಡಗಳಿಗೆ ಸಾಕ್ಷಿಯಾಗಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ನಿಧನ ಹೊಂದಲಿದ್ದಾರೆ. ಇದರಿಂದ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ. ಈ ವಿಜಯ ನಾಮ ಸಂವತ್ಸರ ರಾಜಕಾರಣಿಗಳಿಗೆ ಸೂಕ್ತವಾದ ಸಂವತ್ಸರವಲ್ಲ ಎಂದಿದ್ದಾರೆ.
ದೇಶದ ಕೆಲವು ಭಾಗಗಳಲ್ಲಿ ಅನಾವೃಷ್ಟಿ ಎದುರಾದರೆ ಕೆಲವು ಭಾಗಗಳಲ್ಲಿ ಅತಿವೃಷ್ಟಿ ಎದುರಾಗಲಿದೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ.
ಈ ವರ್ಷ ಕೋಡಿಮಠದ ಶ್ರೀಗಳು ನುಡಿದ ಕೆಲವೊಂದು ಭವಿಷ್ಯಗಳ ಝಲಕ್ ಸ್ಲೈಡಿನಲ್ಲಿ..
ಫೆಬ್ರವರಿ (ಕೊಪ್ಪಳ)
2013ರಲ್ಲಿಯೂ ರಾಜಕೀಯ ಅಸ್ಥಿರತೆ ಮುಂದುವರೆಯಲಿದೆ. ಯಾವ ಪಕ್ಷಗಳು ಅಧಿಕಾರಕ್ಕೆ ಬಂದರೂ ಸುಲಭವಾಗಿ ಆಡಳಿತ ಮಾಡಲು ಸಾಧ್ಯವಾಗುವುದಿಲ್ಲ. ಜನಪ್ರತಿನಿಧಿಗಳ ಆಟಾಟೋಪ ಕಂಡು ಜನರು ಹತಾಶರಾಗಿದ್ದಾರೆ. ಆದರೆ, ರಾಜಕೀಯ ನಾಯಕರನ್ನು ದಾರಿಗೆ ತರುವಷ್ಟು ಅವರು ಬುದ್ಧಿವಂತರಾಗಿದ್ದಾರೆ. ಚುನಾವಣಾ ವೇಳೆಯಲ್ಲಿ ಅವರು ತಮ್ಮ ನಿರ್ಧಾರ ತಿಳಿಸಲಿದ್ದಾರೆ. ಜನರ ದೃಢ ನಿರ್ಧಾರದಿಂದಾಗಿ ಈ ಬಾರಿಯೂ ರಾಜಕೀಯ ಅಸ್ಥಿರತೆ ಉಂಟಾಗಲಿದೆ. 2 ವರ್ಷಗಳ ಸತತ ಬರಗಾಲದಿಂದ ತತ್ತರಿಸುವ ರಾಜ್ಯದಲ್ಲಿ ಈ ಬಾರಿ ಅಕಾಲಿಕ ಮಳೆ ಬೀಳಲಿದೆ. ಹಲವೆಡೆ ಅಕಾಲಿಕ ಮಳೆ ಸುರಿದು ನೈಸರ್ಗಿಕ ವೈಪರಿತ್ಯ ಉಂಟಾಗಲಿದೆ. ಪ್ರಾಕೃತಿಕ ಸಮತೋಲನ ಹದಗೆಡಲಿದ್ದು, ಪ್ರಕೃತಿ ವಿಕೋಪಗಳು ಹೆಚ್ಚಾಗಿ ಸಂಭವಿಸಬಹುದು ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದರು.
ಏಪ್ರಿಲ್ (ಹಾಸನ)
ಯಾವ ಪಕ್ಷಗಳೂ ಬಹುಮತ ಪಡೆಯದೇ ಈ ಬಾರಿ ಚುನಾವಣೆ ನಂತರ ಅತಂತ್ರ ಸ್ಥಿತಿ ನಿರ್ಮಾಣ ವಾಗಲಿದೆ. ಪಶ್ಚಿಮ ಘಟ್ಟದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಜನರು ಅಪಾರವಾದ ಸಂಕಷ್ಟಗಳಿಗೆ ಸಿಲುಕಲಿದ್ದಾರೆ. ಬಂಗಾರದ ಪಂಜರ ಭಾರವಾಗಲಿದೆ.
ಏಪ್ರಿಲ್ (ಅರಸೀಕೆರೆ)
ಸಿದ್ದರಾಮಯ್ಯ ಸಿಎಂ ಆಗೋ ಯೋಗ ಚೆನ್ನಾಗಿದೆ. ಕಾಂಗ್ರೆಸ್ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಬಿಜೆಪಿ ಸ್ಥಿತಿ ಇದಕ್ಕೆ ತದ್ವಿರುದ್ಧ. ಇನ್ನು ಜೆಡಿಎಸ್ ಮತ್ತು ನೂತನ ಕೆಜೆಪಿ ಸಾಧನೆ ಪರವಾಗಿಲ್ಲ. ಬಿಎಸ್ಆರ್ ಕಾಂಗ್ರೆಸ್ಸಿಗೆ ಕಷ್ಟ ಕಷ್ಟ. ಪರಿಸ್ಥಿತಿ ಹೀಗಿರುವಾಗ ಕೈ ಪಕ್ಷಕ್ಕೆ ನಾಯಕರೇ ಭಾರವಾಗಿ ಅಧಿಕಾರಕ್ಕಾಗಿ ಕಾದಾಟ ನಡೆಯುವುದು ನಿಶ್ಚಿತ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕರು ಬಲಾಬಲ ಪ್ರದರ್ಶನಕ್ಕೂ ಮುಂದಾಗುತ್ತಾರೆ. ಸಿಎಂ ರೇಸಿನಲ್ಲಿ ಬಹಳ ನಾಯಕರಿದ್ದರೂ ಸಿದ್ದರಾಮಯ್ಯನವರಿಗೆ ಯೋಗ ಚೆನ್ನಾಗಿಯೇ ಇದೆ. ಈ ಬಾರಿಯೂ ರಾಜಕೀಯ ಅಸ್ಥಿರತೆ ತಪ್ಪಿದ್ದಲ್ಲ. ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ರಾಜಕೀಯವು ಧ್ರುವೀಕರಣದಿಂದ ದೂರವಾಗಿ ಮತ್ತೆ ಒಗ್ಗೂಡುವಿಕೆಗೆ ಸನಿಹವಾಗಲಿದೆ.
ಮೇ (ಅರಸೀಕೆರೆ)
ಚುನಾವಣೆಗೆ ಮುನ್ನ ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಅದರಂತೆ ತಾನು ಹೇಳಿದ್ದು ಈಗ ಸಂಪೂರ್ಣ ನಿಜವಾಗಿದೆ. ಆದರೆ ಪಾಮರರು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಂಬಲಿ ಹಳಸಿತು, ಕಂಬಳಿ ಹಾಸಿತು, ಕೈಲಾಸದಲ್ಲಿ ಗಂಟೆ ಬಾರಿಸಿತು. ಅಂಬಲಿ ಹಳಸಿತು ಅಂದರೆ ಡಾ ಪಿ. ಪರಮೇಶ್ವರ್ ಅವರು ದಲಿತ ಸಮಾಜದ ಮುಖಂಡರು ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರು ಆಗಿದ್ದು ಅವರು ಸೋತಿದ್ದಾರೆ.
ಮೇ (ಅರಸೀಕೆರೆ)
ಕಂಬಳಿ ಹಾಸಿತು ಅಂದರೆ ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಕುರುಬ ಜನಾಂಗದ ಮುಂಖಡರಾಗಿದ್ದು, ಕಂಬಳಿ ಕುರುಬ ಜನಾಂಗದ ಸಂಕೇತ. ಹಾಗಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದರು. ಇನ್ನು ಕೈಲಾಸದಲ್ಲಿ ಗಂಟೆ ಬಾರಿಸಿತು ಎಂಬುದಕ್ಕೆ ಕಾಂಗ್ರೆಸ್ ಚಿಹ್ನೆಯಾದ ಕೈ ರಾಜ್ಯದ ಆಡಳಿತ ಸುಸೂತ್ರವನ್ನು ಹಿಡಿದ ಕಾರಣ ಕೈಲಾಸದಲ್ಲಿ ಕೈ ಗಂಟೆ ಬಾರಿಸಿತು ಎಲ್ಲದಕ್ಕೂ ನಂಬಿಕೆ ಮುಖ್ಯ ಕಾರಣ ಎಂದು ಶ್ರೀಗಳು ಹೇಳಿದ್ದರು.