ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ದಾಳಿ
ಸೋಮವಾರ ಸಂಜೆ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಾಣಿ, ಅನಂತಪುರ ಹೊರವಲಯದಲ್ಲಿರುವ ಮನೆಗೆ ಹೋಗುತ್ತಿದ್ದಾಗ, ರಾಘವೇಂದ್ರ ಮತ್ತು ವೆಂಕಟೇಶ್ ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ.
ಆಸಿಡ್ ದಾಳಿಯಿಂದಾಗಿ ವಾಣಿ ಬಲಗೈ ಮತ್ತು ಭುಜದ ಭಾಗ ಸುಟ್ಟು ಹೋಗಿದ್ದು, ಆಕೆಯನ್ನು ಅನಂತಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಘವೇಂದ್ರನನ್ನು ಪ್ರೀತಿಸಲು ನಿರಾಕಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಅನಂತಪುರ ಸಮೀಪದ ಮುಡಿಗುಪ್ಪ ಗ್ರಾಮದಲ್ಲಿ ರಾಘವೇಂದ್ರ ಹೂವಿನ ವ್ಯಾಪಾರಿಯಾಗಿದ್ದಾನೆ. ಇದೇ ಗ್ರಾಮದ ವಾಣಿಯನ್ನು ಆತ ಪ್ರೀತಿಸುತ್ತಿದ್ದ. ಪ್ರತಿದಿನ ಆಕೆಯ ಹಿಂದೆ ಸುತ್ತುತ್ತಾ, ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಈಗಾಗಲೇ ವಿವಾಹವಾಗಿರುವ ರಾಘವೇಂದ್ರನನ್ನು ಪ್ರೀತಿಸಲು ವಾಣಿ ನಿರಾಕರಿಸಿದ್ದಳು.
ಇದರಿಂದ ಕೋಪಗೊಂಡ ರಾಘವೇಂದ್ರ ತನ್ನ ಸ್ನೇಹಿತ ವೆಂಕಟೇಶ್ ಜೊತೆ ಸೇರಿ, ಸೋಮವಾರ ಸಂಜೆ ಕಾಲೇಜಿನಿಂದ ಮನೆಗೆ ವಾಪಸ್ ಆಗುತ್ತಿದ್ದ ವಾಣಿ ಮೇಲೆ ಆಸಿಡ್ ದಾಳಿ ನಡೆಸಿ, ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಪೋಲಿಸರ ನಿರ್ಲಕ್ಷ್ಯ : ರಾಘವೇಂದ್ರ ತನಗೆ ಪ್ರೀತಿಸುವಂತೆ ಪೀಡಿಸುತ್ತಿದ್ದಾನೆ ಎಂದು ವಾಣಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಣಿ ಪೋಷಕರು ಆರೋಪಿಸಿದ್ದಾರೆ. (ಆಸಿಡ್ ದಾಳಿ ಜಾಮೀನು ರಹಿತ ಅಪರಾಧ : ಸುಪ್ರೀಂ)