ತಿರುಪತಿ ತಿಮ್ಮಪ್ಪನ ಕಾಲಿನ ಬೆರಳು ತುಂಡಾಗಿದೆ!
ವೈಕುಂಠದಿಂದ ಭೂಮಿಗೆ ಇಳಿದ ವೆಂಕಟೇಶ್ವರ ಸ್ವಾಮಿ ಮೊದಲು ತನ್ನ ಪಾದವನ್ನು ಇಟ್ಟ ಸ್ಥಳವಿದು ಎಂಬ ನಂಬಿಕೆ ಇದೆ. ಆದ್ದರಿಂದ ಈ ಜಾಗವನ್ನು ಶ್ರೀವರಿ ಪಾದಲು ಎಂದು ಕರೆಯುತ್ತಾರೆ, ಇದು ತಿರುಪತಿ ದೇವಾಲಯದಿಂದ ಏಳು ಕಿ.ಮೀ.ದೂರದಲ್ಲಿದೆ.
ಮೊದಲು ಶ್ರೀವರಿ ಪಾದದಲ್ಲಿ ಹೆಜ್ಜೆ ಇಟ್ಟ ತಿಮ್ಮಪ್ಪ ನಂತರ, ತಿರುಮಲದಲ್ಲಿರುವ ಈಗಿನ ಗರ್ಭಗುಡಿಯ ಜಾಗದಲ್ಲಿ ನೆಲೆ ನಿಂತ ಎಂದು ಪುರಾಣಗಳು ಹೇಳುತ್ತವೆ. ಆದರೆ, ತಿರುಮಲ- ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಸ್ಥಳವನ್ನು ನಿರ್ಲಕ್ಷಿಸಿದೆ ಎಂಬ ಆರೋಪಗಳಿವೆ.
ಶನಿವಾರ ಭಕ್ತರು ತಿಮ್ಮಪ್ಪನ ಎಡಗಾಲಿನ ಹೆಬ್ಬೆರಳು ತುಂಡಾಗಿರುವುದನ್ನು ಗಮನಿಸಿ, ಟಿಟಿಡಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಭಕ್ತರು ತೆಂಗಿನ ಕಾಯಿ ಒಡೆಯುವಾಗ ತಿಮ್ಮಪ್ಪನ ಹೆಬ್ಬೆರಳು ತುಂಡಾಗಿರಹುದು ಎಂದು ಟಟಿಡಿ ಅಧಿಕಾರಿಗಳು ಶಂಕಿಸಿದ್ದಾರೆ.
ಸದ್ಯ ಆಡಳಿತ ಮಂಡಳಿ ತುಂಡಾದ ಬೆರಳನ್ನು ಮೂಲ ಸ್ಥಳದಲ್ಲಿ ಇಟ್ಟು, ಕುಂಕುಮ, ಅರಿಶಿಣದಿಂದ ಬೆರಳನ್ನು ಮುಚ್ಚಿದೆ. ಸಾಮಾನ್ಯವಾಗಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರು ಶ್ರೀವರಿ ಪಾದಾಲುವಿಗೆ ತೆರಳಿ ತಿಮ್ಮಪ್ಪನ ಪಾದ ಮುಟ್ಟಿ ನಮಸ್ಕರಿಸಿ, ಪೂಜೆ ಸಲ್ಲಿಸುತ್ತಾರೆ.
ಟಿಟಿಡಿ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತಿಮ್ಮಪ್ಪನ ಪಾದಗಳಿಗೆ ಅಗತ್ಯವಿರುವ ಸುರಕ್ಷತೆಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.