ಕೊನೆಗೂ ಜೈಲು ಸೇರಿದ ಅಸಾರಾಮ್ ಬಾಪು
ಜೋಧಪುರ, ಸೆ.2: ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ಅವರಿಗೆ ನರಸಂಬಂಧಿ ಕಾಯಿಲೆಯಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾತನ್ನು ಪುಷ್ಟಿಕರೀಸಲು ಪೊಲೀಸರು ನಡೆಸಿದ ತಂತ್ರ ಫಲಕೊಟ್ಟಿದೆ. ಪುರುಷತ್ವ ಪರೀಕ್ಷೆಯಲ್ಲಿ ಬಾಪು ಪಾಸಾಗಿದ್ದಾರೆ. ಈಗ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಬಾಪು ಕಾಲ ದೂಡಬೇಕಾಗಿದೆ.
ಇಲ್ಲಿನ ಎಸ್ ಎನ್ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾದ ಪುರುಷತ್ವ ಪರೀಕ್ಷೆಯಲ್ಲಿ ಅಸಾರಾಮ್ ಬಾಪು ಅವರು ಪೂರ್ಣ ಪ್ರಮಾಣದಲ್ಲಿ ಆರೋಗ್ಯದಿಂದ ಇದ್ದು, ಎಲ್ಲಾ ಅವಯಮಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವೈದ್ಯಕೀಯ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸದ್ಯದಲ್ಲೇ ಅಸಾರಾಮ್ ಬಾಪು ಅವರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಾಪು ಒಬ್ಬರೇ ಆರೋಪಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಸಾರಾಮ್ ಬಾಪು ಅವರ ಆಪ್ತ ಶಿವ ಎಂಬುವವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನಷ್ಟು ಆಶ್ರಮವಾಸಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಾಪು ವಿಚಾರಣೆಗೆ ಅರ್ಹರಾಗಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದ ನಂತರ ಬಂಧಿಸಲಾಗಿತ್ತು. ಸುಮಾರು ಎಂಟು ಗಂಟೆಗಳ ಕಾಲ ಕಾದ ಬಳಿಕ ಪೊಲೀಸರ ತಂಡ ಬಾಪು ಅವರನ್ನು ಮಧ್ಯರಾತ್ರಿ ಬಂಧಿಸಿ ಜೋಧಪುರಕ್ಕೆ ಕರೆದೊಯ್ಯಲಾಗಿತ್ತು. ಭಾನುವಾರ ಬೆಳಗ್ಗೆ AI-635 ವಿಮಾನದ ಮೂಲಕ 72 ವರ್ಷ ವಯಸ್ಸಿನ ನರಸಂಬಂಧಿ ಕಾಯಿಲೆ ಹೊಂದಿರುವ ಬಾಪು ಅವರನ್ನು ದೆಹಲಿ ಮುಖಾಂತರ ಜೋಧ್ ಪುರಕ್ಕೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿಜುಜಾರ್ಜ್ ಜೋಸೆಫ್ ತಿಳಿಸಿದ್ದಾರೆ. [ಅಸಾರಮ್ ಬಾಪು 10 ವಿವಾದಗಳು]
ಬಾಪು ಹೇಳಿದ ಮಾತುಗಳನ್ನು ನಾನು ಹುಚ್ಚನಂತೆ ನಂಬಿಬಿಟ್ಟೆ. ಬಾಪು ನನ್ನ ಮಗಳ ಮೇಲೆ ದೌರ್ಜನ್ಯ ಎಸಗಿಬಿಟ್ಟ. ಲಕ್ನೋದಿಂದ 150 ಕಿ.ಮೀ ದೂರದಲ್ಲಿರುವ ಷಹಜಹಾನ್ ಪುರದಲ್ಲಿ ನನ್ನ ಜಮೀನು ದಾನ ನೀಡಿ ಆಶ್ರಮ ನಿರ್ಮಿಸಿ ತಪ್ಪು ಮಾಡಿಬಿಟ್ಟೆ. ಬಾಪುಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಸಂತ್ರಸ್ತ ಬಾಲಕಿಯ ತಂದೆ ದುಃಖ ತೋಡಿಕೊಂಡಿದ್ದಾರೆ.