ಮತ್ತೆ ಭುಗಿಲೆದ್ದ ಮಲ್ಲೇಶ್ವರಂ ಮಾರುಕಟ್ಟೆ ವಿವಾದ
ಸುಮಾರು 40 ರಿಂದ 48 ವ್ಯಾಪಾರಿಗಳಿಗೆ ಭಾನುವಾರ ನೋಟಿಸ್ ತಲುಪಿದ್ದು, ಮಲ್ಲೇಶ್ವರಂ ಮಾರುಕಟ್ಟೆ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ತಾತ್ಕಾಲಿಕ ಮಾರುಕಟ್ಟೆಗೆ ವ್ಯಾಪಾರಿಗಳು ಸ್ಥಳಾಂತರಗೊಳ್ಳಬೇಕು ಎಂದು ತಿಳಿಸಲಾಗಿದೆ.
ಮೂರು ತಿಂಗಳ ಹಿಂದೆ ಹೈಕೋರ್ಟ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಸಜ್ಜಿತವಾದ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ, ವ್ಯಾಪಾರಿಗಳಿಗೆ ಸ್ಥಳಾಂತರಗೊಳ್ಳಲು ಒಂದು ವಾರಗಳ ಕಾಲಾವಕಾಶ ನೀಡಬೇಕು ಎಂದು ಆದೇಶ ನೀಡಿತ್ತು.
ಆದರೆ, ಕೆಲವು ಶೆಡ್ ಗಳನ್ನು ನಿರ್ಮಿಸಿರುವ ಬಿಬಿಎಂಪಿ ವ್ಯಾಪಾರಿಗಳು ತಕ್ಷಣ ಅಲ್ಲಿಗೆ ಸ್ಥಳಾಂತರಗೊಳ್ಳಬೇಕು ಎಂದು ನೋಟಿಸ್ ನೀಡಿದೆ. ಇದು ವ್ಯಾಪಾರಿಗಳ ವಿರೋಧಕ್ಕೆ ಕಾರಣವಾಗಿದ್ದು, ನೋಟಿಸ್ ವಿರೋಧಿಸಿ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳು ತಯಾರಾಗಿದ್ದಾರೆ.
ಮಲ್ಲೇಶ್ವರಂ ಮಾರುಕಟ್ಟೆ ಹೋರಾಟ ಸಮಿತಿ ಕಾರ್ಯದರ್ಶಿ ಜಿ.ಚಂದ್ರಶೇಖರ್, ಮಾರುಕಟ್ಟೆಯಲ್ಲಿ 247 ವ್ಯಾಪಾರಿಗಳಿದ್ದಾರೆ. ಆದರೆ, ಕೆಲವು ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಿ ಎಲ್ಲಾ ವ್ಯಾಪಾರಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕು ಎಂದು ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಮಾರುಕಟ್ಟೆ ವಿವಾದದ ಕುರಿತಂತೆ ಬಿಎಂಟಿಎಫ್ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ, ಅದಕ್ಕೂ ಪಾಲಿಕೆ ಉತ್ತರ ನೀಡಿಲ್ಲ. ಹೈಕೋರ್ಟ್ ನಿರ್ದೇಶನದಂತೆ, ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವ ಬದಲು, ವ್ಯಾಪಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಬಿಬಿಎಂಪಿ ಮತ್ತೊಮ್ಮೆ ವ್ಯಾಪಾರಿಗಳ ಆಕ್ರೋಶಕ್ಕೆ ತುತ್ತಾಗಿದೆ. (ಬಗೆಹರಿಯಿತು ಮಲ್ಲೇಶ್ವರಂ ಮಾರುಕಟ್ಟೆ ವಿವಾದ)