'ತೀರ್ಪು ನೀಡದೆ ಅಪರಾಧಿಯನ್ನು ಬಿಟ್ಟಿದ್ದರೆ ಚೆನ್ನಾಗಿತ್ತು'
ನವದೆಹಲಿ, ಆ. 31 : ಡಿಸೆಂಬರ್ 16, 2012ರಂದು ದೆಹಲಿಯ 23 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರು ಕಾಮುಕರಲ್ಲಿ ಒಬ್ಬನಾಗಿದ್ದ 17 ವರ್ಷದ ಬಾಲಾಪರಾಧಿಯ ಆರೋಪ ಸಾಬೀತಾಗಿ, ಮೂರು ವರ್ಷಗಳ ಶಿಕ್ಷೆ ಘೋಷಿತವಾಗುತ್ತಿದ್ದಂತೆ, ಯುವತಿಯ ತಾಯಿ ನ್ಯಾಯಾಲಯದಿಂದ ಗಳಗಳನೆ ಅಳುತ್ತ ಓಡಿಬಂದರು.
ಅವರ ಕಣ್ಣಲ್ಲಿ ನೀರು ಬಂದಿದ್ದು, ಕಡೆಗೂ ಆರೋಪ ಸಾಬೀತಾಗಿ ಅಪರಾಧಿಗೆ ಶಿಕ್ಷೆಯಾಯಿತಲ್ಲ ಎಂದಲ್ಲ. ಚಲಿಸುತ್ತಿದ್ದ ಬಸ್ಸಿನಲ್ಲಿ ಕಬ್ಬಿಣದ ಸಲಾಕೆಯಿಂದ ಅಮಾನುಷವಾಗಿ ಚುಚ್ಚಿ ಹೊಟ್ಟೆಯನ್ನು ಬಗೆದಿದ್ದಲ್ಲದೆ, ಆರು ಜನ ಒಬ್ಬರಮೇಲೊಬ್ಬರು ಅತ್ಯಾಚಾರವೆಸಗಿದ್ದರೂ ಅಪರಾಧಿಗೆ ಬಾಲಾಪರಾಧಿ ನ್ಯಾಯಾಲಯದಿಂದ ಕೇವಲ ಮೂರು ವರ್ಷ ಶಿಕ್ಷೆಯಾಯಿತಲ್ಲ ಎಂದು. ಕಾರಣ ಆತ ಬಾಲಾಪರಾಧಿ!
"ಈ ತೀರ್ಪು ನಾವು ಒಪ್ಪುವುದಿಲ್ಲ. ಇದು ಅರ್ಥವೂ ಆಗುತ್ತಿಲ್ಲ. ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗಿದೆ. ಕೇವಲ ಮೂರು ವರ್ಷ ಶಿಕ್ಷೆ ನೀಡಬೇಕಾಗಿದ್ದರೆ ಈ ವಿಚಾರಣೆ ನಡೆಸುವ ಅವಶ್ಯಕತೆಯೇ ಇರಲಿಲ್ಲ. ನಾವು ಈ ತೀರ್ಪಿಗಾಗಿ ಬೆಳಗಿನಿಂದ ಕಾಯುತ್ತಿದ್ದೆವು. ಇಂಥ ತೀರ್ಪನ್ನು ಖಂಡಿತ ನಿರೀಕ್ಷಿಸಿರಲಿಲ್ಲ" ಎಂದು ಡಿಸೆಂಬರ್ 30ರಂದು ಸಿಂಗಪುರದಲ್ಲಿ ಕೊನೆಯುಸಿರೆಳೆದ ಯುವತಿಯ ತಾಯಿ ಕಣ್ಣೀರ ಕೋಡಿ ಹರಿಸಿದರು.
ಯುವತಿಯ ತಂದೆ ಕೂಡ, "ನಾವು ಮೋಸ ಹೋಗಿದ್ದೇವೆ. ಈ ತೀರ್ಪು ಆ ಅಪರಾಧಿಯನ್ನು ಖುಲಾಸೆ ಮಾಡಿದ್ದಕ್ಕೆ ಸಮ. ಇಂಥ ತೀರ್ಪು ನೀಡುವ ಬದಲು ಆತನನ್ನು ಬಿಟ್ಟಿದ್ದರೇ ಚೆನ್ನಾಗಿತ್ತು. ಇಂಥ ತೀರ್ಪಿನ ವಿರುದ್ಧ ಮೇಲ್ಮನವಿ ಖಂಡಿತ ಸಲ್ಲಿಸುತ್ತೇವೆ. ಅವನಿಗೆ ಗಲ್ಲೇ ಸೂಕ್ತವಾದ ಶಿಕ್ಷೆ" ಎಂದು ಕಣ್ಣೀರಾದರು.
"ನನ್ನ ಸಹೋದರಿ ಕ್ಷಣಕ್ಷಣವೂ ಸಾಯುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ಈ ದುರುಳರು ಮಾಡಿದ ಕೃತ್ಯದಿಂದಾಗಿ ಆಕೆ ಪ್ರತಿದಿನವೂ ಸಾವಿರಾರು ಬಾರಿ ಸತ್ತಿದ್ದಳು. ಈ ತೀರ್ಪಿನಿಂದ ಇಡೀ ಕುಟುಂಬಕ್ಕೆ ತೀವ್ರ ಆಘಾತವಾಗಿದೆ. ಆ ಮನುಷ್ಯನನ್ನು ಪರಿವರ್ತಿಸುವುದು ಸಾಧ್ಯವೇ ಇಲ್ಲ. ನಾಚಿಕೆಲ್ಲದ ಮೃಗ ಆತ. ಅವನ ಸ್ವಭಾವವೇ ಅಂತಹುದು" ಎಂದು ಯುವತಿಯ ಸಹೋದರ ದುಃಖ ತೋಡಿಕೊಂಡರು.
ಬಾಲಾಪರಾಧಿ ಈಗಾಗಲೆ 8 ತಿಂಗಳು ಜೈಲಿನಲ್ಲಿ ಕಳೆದಿದ್ದರಿಂದ ಕೇವಲ 2 ವರ್ಷ 4 ತಿಂಗಳು ಮಾತ್ರ ಆತ ಜೈಲಿನಲ್ಲಿ ಕಳೆಯಬೇಕಾಗಿದೆ. ಈ ತೀರ್ಪಿನ ವಿರುದ್ಧ ಭಾರೀ ಆಕ್ರೋಶಗಳು ಕೇಳಿಬರುತ್ತಿವೆ. ಇಂಥ ತೀರ್ಪಿನಿಂದ ಬಾಲಾಪರಾಧ ಇನ್ನಷ್ಟು ಹೆಚ್ಚುತ್ತದೆ ಎಂದು ಆಕ್ರೋಶ ವ್ಯಪ್ತಪಡಿಸುತ್ತಿದ್ದಾರೆ. ಈ ತೀರ್ಪು 'ಹೆಣ್ಣಿನ ರೂಪದಲ್ಲಿ ಅಪರಾಧ ಜನ್ಮತಾಳಿದೆ' ಎಂದು ಅತ್ಯಾಚಾರಕ್ಕೀಡಾಗಿದ್ದ ಯುವತಿಯ ತಂದೆ ಮಾರ್ಮಿಕವಾಗಿ ನುಡಿದಿದ್ದಾರೆ.
"ಸಾವಿನ ಹೇಳಿಕೆ ಸುಳ್ಳು" : "ಡಿಸೆಂಬರ್ 21ರಂದು ನ್ಯಾಯಾಲಯದಿಂದ ತೆಗೆದುಕೊಳ್ಳಲಾದ ಯುವತಿಯ ಹೇಳಿಕೆ ಸತ್ಯಕ್ಕೆ ದೂರ. ಅಸಲಿಗೆ ಡಿ.21ರಂದು ಆಕೆ ಬದುಕಿಯೇ ಇರಲಿಲ್ಲ. ಅಷ್ಟೊತ್ತಿಗಾಗಲೆ ಯುವತಿ ಸಾವಿಗೀಡಾಗಿದ್ದಳು. ಆಕೆ ಹೇಳಿಕೆ ನೀಡಿರುವುದನ್ನು ಸೃಷ್ಟಿಸಲಾಗಿದೆ. ಆಕೆ ಸತ್ತ ನಂತರ ವಿಚಾರ ಮಾಡಿ ಇದನ್ನು ಸೃಷ್ಟಿಸಲಾಗಿದೆ" ಎಂದು ಆರೋಪಿಗಳ ಪರ ವಕೀಲ ಎಪಿ ಸಿಂಗ್ ನ್ಯಾಯಾಲಯದ ಮುಂದೆ ವಾದಿಸಿದ್ದಾರೆ. [ಚಲಿಸುತ್ತಿದ್ದ ವಾಹನದಲ್ಲಿ ನಡೆದ ಅತ್ಯಾಚಾರಗಳು]