ಮದನಿಗೆ ನೀರಿಳಿಸಿದ ಪಿಪಿ: ಮದನಿ ನೌಟಂಕಿ ಬಂದ್
ಜಾಮೀನು ಕೋರಿ ಮದನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮದನಿ ಆಟಾಟೋಪವನ್ನು ನ್ಯಾಯಾಧೀಶರೆದುರು ಎಳೆ ಎಳೆಯಾಗಿ ಬಿಚ್ಚಿಟ್ಟ ಸರಕಾರಿ ವಕೀಲರು ಅವನಿಗೆ ಜಾಮೀನು ಸಿಗದಂತೆ ನೋಡಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಪಾಪ ಜೈಲಿನಲ್ಲಿ ಸಕಲ ಸವಲತ್ತೂ ಅನುಭವಿಸುತ್ತಾ ಮದನಿ ಇನ್ನಷ್ಟು ದಿನ ಕಾಲ ತಳ್ಳಬಹುದಿತ್ತು. ಆದರೆ ಈಗ ಮದನಿಗೆ ದುರ್ದೆಸೆ ಆರಂಭವಾದಂತಿದೆ.
ಇತ್ತ ಯಾಸಿನ್ ಭಟ್ಕಳ ಎಂಬ ಪರಮ ಪಾತಕಿ ಸಿಕ್ಕಿಹಾಕಿಕೊಂಡಿದ್ದೇ ತಡ ಮದನಿ ಮತ್ತು ಬೆಂಗಳೂರು ಸ್ಫೋಟದ ಬಗ್ಗೆ ಮಹತ್ವದ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಗಳಿವೆ. ಈಗಾಗಲೇ ಪಾಕ್ ISI ಸೂಚನೆಯಂತೆ ತಾನು ಭಯೋತ್ಪಾದನೆಯಲ್ಲಿ ತೊಡಗಿದ್ದೆ ಎಂದು ತಪ್ಪೊಪ್ಪಿಕೊಂಡಿರುವ ಯಾಸಿನ್ ಭಟ್ಕಳ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಮದನಿ ಪಾತ್ರವೇನು ಎಂಬುದರ ಬಗ್ಗೆ ಬಾಯ್ಬಿಟ್ಟರೆ ಮುಗಿಯಿತು ಮದನಿಯ ನೌಟಂಕಿಗಳು ಮುಗಿದಂತೆ.
ಯಾಸಿನ್ ಭಟ್ಕಳ ಬಂಧನವಾಗುವುದಕ್ಕೆ 2 ದಿನ ಮೊದಲು ಮದನಿಗೆ ಜಾಮೀನು ಸಿಕ್ಕಿದ್ದರೆ ಕಥೆ ಮುಗಿದೇ ಹೋಗುತ್ತಿತ್ತು. ಆದರೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್ ಮದನಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಮಾಡಿದೆ.
ಇಷ್ಟಕ್ಕೂ, ಅಬ್ದುಲ್ ನಾಸಿರ್ ಮದನಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡುವ ಅಗತ್ಯವಿಲ್ಲ. ಅವನ ಆರೋಗ್ಯ ಬಿಲ್ಕುಲ್ ಫಿಟ್ ಆಗಿದೆ ಎಂದು ಸಮರ್ಥವಾಗಿ ಪ್ರತಿವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಜಾಮೀನು ಪಡೆಯಲು ಅರ್ಜಿಯಲ್ಲಿ ಉಲ್ಲೇಖಿಸಿರುವ ಕಾಯಿಲೆಗಳಲ್ಲಿ ಸತ್ಯಾಂಶಗಳಿಲ್ಲ. ಅಲ್ಲದೆ, ಮದನಿಗೆ ಇಲ್ಲಿಯವರೆಗೆ 16 ಬಾರಿ ಚಿಕಿತ್ಸೆ ನೀಡಲಾಗಿದ್ದು, ಅದರ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸಿದೆ. ಆದರೆ, ಕೊನೆಯ ಮೂರು ಚಿಕಿತ್ಸೆಯನ್ನು ಖುದ್ದು ಮದನಿಯೇ ತಿರಸ್ಕರಿಸಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಪಡಿಸಿದರು.
ಈ ಮಧ್ಯೆ, ತನಗೆ ಕಣ್ಣಿನ ತೊಂದರೆಯಿದೆ ಎಂದು ಮದನಿ ಅಲವತ್ತುಕೊಂಡಿದ್ದ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಾದಿಸಿ, ಮದನಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ, ಅವರ ಕಣ್ಣು ಸಹ ಕಾಣುತ್ತಿಲ್ಲ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮದೇ ಆದ ರೀತಿಯಲ್ಲಿ ಪ್ರತಿವಾದ ಮಂಡಿಸಿದ್ದಾರೆ. ಆರೋಪಿಗೆ ಅಂತಹ ಯಾವುದೇ ದೋಷ/ ಸಮಸ್ಯೆಗಳು ಇಲ್ಲ. ಜಾಮೀನಿಗಾಗಿ ಎಲ್ಲಾ ನಾಟಕವಾಡ್ತಿದ್ದಾನೆ. ಜೈಲಿನಲ್ಲಿ ಪ್ರತಿನಿತ್ಯ ಯಾವುದೇ ತೊಂದರೆಯಿಲ್ಲದೆ ದಿಪತ್ರಿಕೆ ಓದುತ್ತಾನೆ, ಟಿವಿ ನೋಡ್ತಾನೆ, ಸಿಸಿಟಿವಿ ಕ್ಯಾಮೆರಾದಲ್ಲಿ ಇದೆಲ್ಲಾ ದಾಖಲಾಗಿದೆ. ಆದ್ದರಿಂದ ಅವರು ನೀಡಿರುವ ಕಾರಣಗಳನ್ನು ಪರಿಗಣಿಸಬಾರದು ಎಂದು ಸರ್ಕಾರಿ ಅಭಿಯೋಜಕರಾದ ದೊರೆರಾಜು ವಾದ ಮಂಡಿಸಿದರು.
ಅಲ್ಲದೆ, ಮದನಿ ವಿರುದ್ಧ ಕೇರಳ ನ್ಯಾಯಾಲಯದಲ್ಲಿನ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ, ಜಾಮೀನು ನೀಡುವುದು ಸೂಕ್ತವಲ್ಲ ಎಂಬ ವಾದವನ್ನೂ ಮಂಡಿಸಿದರು. ಅಲ್ಲದೆ ಮದನಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಸರಕಾರದ ವತಿಯಿಂದ 19 ಬಾರಿ ಮನವಿ ಮಾಡಲಾಗಿದೆ. ಆದರೆ ಆ ಮನವಿಗೆ ಮದನಿ ಸ್ಪಂದಿಸುತ್ತಿಲ್ಲ ಎಂದು ದೊರೆರಾಜು ಮಂಡಿಸಿದ ವಾದವನ್ನು ಪರಿಗಣಿಸಿದ ನ್ಯಾ ಎನ್ ಆನಂದ್ ಭೈರಾರೆಡ್ಡಿ ಅವರು ಮದನಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.