ಢುಂಢಿ ಪುಸ್ತಕ ನಿಷೇಧ ತಪ್ಪು: ಡಾ. ಯುಆರ್ಎ
ಗಣಪತಿಯ ಅಸ್ತಿತ್ವದ ಬಗ್ಗೆ ಬಂದಿರುವ 'ಢುಂಢಿ' ಪುಸ್ತಕ ನಿಷೇಧ ತಪ್ಪು, ಹೀಗೆ ಆಗುತ್ತಿದ್ದರೆ ನನ್ನನ್ನು ಬಂಧಿಸಬಹುದು. ಇದು ಅನ್ಯಾಯ ಎಂದು ಯುಆರ್ ಅನಂತಮೂರ್ತಿ ಹೇಳಿದ್ದಾರೆ. ಢುಂಢಿ ಪುಸ್ತಕದಲ್ಲಿರುವ ವಿವಾದಿತ ಅಂಶಗಳ ಬಗ್ಗೆ ಪರ-ವಿರೋಧ ಚರ್ಚೆ ಇನ್ನೂ ಜಾರಿಯಲ್ಲಿದೆ. ಪುಸ್ತಕ ನಿಷೇಧದ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
'ಪುಸ್ತಕಗಳಲ್ಲಿರುವ ಅಂಶಗಳ ಬಗ್ಗೆ ಬಹಿರಂಗವಾಗಿ ಚರ್ಚೆಯಾಗಲಿ. ಈ ಬಗ್ಗೆ ಲೇಖಕ ಯೋಗೇಶ್ ಮಾಸ್ಟರ್ ರನ್ನು ನೇರವಾಗಿ ಪ್ರಶ್ನಿಸಿ ಉತ್ತರ ಪಡೆಯಿರಿ. ಪುಸ್ತಕ ನಿಷೇಧಿಸಿ, ಲೇಖಕನನ್ನು ಬಂಧಿಸಿದರೆ ಸಮಸ್ಯೆ ಪರಿಹಾರ ಸಿಗುವುದಿಲ್ಲ.ನನ್ನ ಸಂಸ್ಕಾರ ಕಾದಂಬರಿ ಕೂಡಾ ವಿವಾದಕ್ಕೀಡಾಗಿತ್ತು. ಆ ಸಮಯದಲ್ಲಿ ನನ್ನನ್ನು ಬಂಧಿಸಬಹುದಾಗಿತ್ತು' ಎಂದು ಯುಆರ್ ಅನಂತಮೂರ್ತಿ ಹೇಳಿದ್ದಾರೆ.
ಗಣಪತಿಯ ಹುಟ್ಟಿನ ಬಗ್ಗೆ ಪುಸ್ತಕದಲ್ಲಿ ಅಪಮಾನಕಾರಿಯಾಗಿ ಬಿಂಬಿಸಿರುವುದಲ್ಲದೆ, ಗಣಪತಿಯನ್ನು ರೌಡಿ ಎಂದು ಚಿತ್ರಿಸಲಾಗಿದ್ದು, ಲೇಖಕ ಯೋಗೇಶ್ ಮಾಸ್ಟರ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಾಧ್ಯಕ್ಷ ಪ್ರಣವಾನಂದಸ್ವಾಮಿ ಅವರು ದೂರು ನೀಡಿದ್ದರು.
'ಡುಂಢಿ' ಕೃತಿಯಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಅವರು ಕೋಟ್ಯಂತರ ಹಿಂದೂಗಳಿಂದ ಪೂಜಿಸಲ್ಪಡುವ ಗಣೇಶ ಗೂಂಡಾ, ಕ್ರೂರಿ ಎಂದು ವಿಶ್ಲೇಷಿಸಿದ್ದರು. ಅಲ್ಲದೇ, ಶಿವ-ಪಾರ್ವತಿ ಹಾಗೂ ಗಣೇಶನ ಸಂಬಂಧವನ್ನು ಆಕ್ಷೇಪಾರ್ಹವಾಗಿ ಈ ಕಾದಂಬರಿಯಲ್ಲಿ ಲೇಖಕರು ಹೆಣೆದಿದ್ದರು ಎನ್ನಲಾಗಿದೆ. ಯೋಗೇಶ್ ಮಾಸ್ಟರ್ ರನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದಾರೆ. ವಿವಾದ, ಬಂಧನದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.