ಅಪ್ರಾಮಾಣಿಕತೆಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ ಸಿದ್ದು
ಬೆಂಗಳೂರು, ಆ. 29 : ರಾಜಕಾರಣಿಗಳನ್ನು ಮೈಕ್ ಮುಂದೆ ಬಿಟ್ರೆ ಸಾಕು ಅಥವಾ ರಾಜಕಾರಣಿಗಳು ಪತ್ರಕರ್ತರೆದಿರು ಬಂದ್ರೆ ಸಾಕು ಶುರು ಹಚ್ಚಿಕೊಳ್ಳುತ್ತಾರೆ. ಸಾಧನೆಯ ಪಟ್ಟಿಗೆ ಮೊದಲು ಕೊನೆಯಿರುವುದಿಲ್ಲ. ಪ್ರಾಮಾಣಿಕತೆಯ ತಲೆಯ ಮೇಲೆ ಹೊಡೆದಂತೆ ಭಾಷಣ ಬಿಗಿಯಲು ಆರಂಭಿಸುತ್ತಾರೆ. ಇದಕ್ಕೆ ಯಾವ ಮಂತ್ರಿ, ಮುಖ್ಯಮಂತ್ರಿಯೂ ಹೊರತಲ್ಲ.
ಆದರೆ, ಇಲ್ಲೊಬ್ಬರಿದ್ದಾರೆ ನೋಡಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು! ಸಿದ್ದರಾಮಯ್ಯನವರು ಸಮಾರಂಭವೊಂದರಲ್ಲಿ, "ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತೆ" ಎಂದು ಹೇಳಿ ರಾಜಕಾರಣಿಗಳನ್ನು ಮಾತ್ರವಲ್ಲ ಪತ್ರಕರ್ತರೂ ಅಚ್ಚರಿಯಾಗುವಂತೆ ಮಾಡಿದರು ಮತ್ತು ಪ್ರಾಮಾಣಿಕತೆ ಪ್ರದರ್ಶಿಸಿದ್ದಕ್ಕೆ ಚಪ್ಪಾಳೆಗಳನ್ನೂ ಗಿಟ್ಟಿಸಿದರು.
ಚಪ್ಪಾಳೆ ಗಿಟ್ಟಿಸಬೇಕೆಂದು ನೀಡಿದ ಹೇಳಿಕೆ ಅದಾಗಿರಲಿಲ್ಲ ಎಂಬುದು ವಿಶೇಷ. ಸಿದ್ದರಾಮಯ್ಯ ಅಂದ್ರೇನೆ ಹಾಗೆ. ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣೆಗಳಲ್ಲಿ ಹಣವನ್ನು ವಂತಿಗೆಯಾಗಿ ಪಡೆಯುವ ಬಗ್ಗೆ ತಮ್ಮ 'ಅಪ್ರಾಮಾಣಿಕತೆ'ಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ, ಯಾವ ರಾಜಕಾರಣಿಯೂ ಒಪ್ಪಿಕೊಳ್ಳುವುದಿಲ್ಲ ಎಂಬುದೂ ಎಲ್ಲರಿಗೂ ತಿಳಿದ ಸಂಗತಿ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 87ನೇ ಹುಟ್ಟಹಬ್ಬದ ನಿಮಿತ್ತ 'ರಾಷ್ಟ್ರೀಯ ನವನಿರ್ಮಾಣ ವೇದಿಕೆ' ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿದ್ದ ಸಿದ್ದರಾಮಯ್ಯನವರು, ಚುನಾವಣೆಯಲ್ಲಿ ಹೋರಾಟ ಮಾಡಬೇಕಾದರೆ ಹಣದ ಅಗತ್ಯವೂ ಇರುತ್ತದೆ, ಅನ್ಯ ಮೂಲಗಳಿಂದ ಹಣವನ್ನು ಪಡೆಯಲೇಬೇಕಾಗುತ್ತದೆ ಎಂದು ಹೇಳಿದರು.
"ಇಂದಿನ ರಾಜಕೀಯದಲ್ಲಿ ಮೌಲ್ಯಗಳು ಕುಸಿದಿರುವುದು ನಿಜವಾದ ಸಂಗತಿ ಮತ್ತು ವಿಷಾದನೀಯ ವಿಷಯ. ಹೆಗಡೆ ಅವರ ಕಾಲದಲ್ಲಿ ಇದ್ದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ" ಎಂದು ಸಿದ್ದರಾಮಯ್ಯನವರು ವಿಷಾದ ವ್ಯಕ್ತಪಡಿಸಿದರು. 1980ರಲ್ಲಿ ರಾಮಕೃಷ್ಣ ಹೆಗಡೆ ಅವರು ಅಧಿಕಾರದ ಚುಕ್ಕಾಣಿ ಹಿಡಿದಾಗ ಸಿದ್ದರಾಮಯ್ಯನವರು ಮಂತ್ರಿಮಂಡಲದಲ್ಲಿದ್ದರು.
"ಇಂದು ರಾಜಕೀಯದಲ್ಲಿ ಇರಬೇಕಾದರೆ ಹಣಬಲ ಮಾತ್ರವಲ್ಲ ತೋಳ್ಬಲವೂ ಬೇಕು. ನಾನು ಕೂಡ ಸಾಕಷ್ಟು ರೀತಿಯಲ್ಲಿ ತತ್ತ್ವ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿದ್ದೇನೆ, ಪ್ರಾಮಾಣಿಕತೆಯನ್ನು ತ್ಯಾಗ ಮಾಡಿದ್ದೇನೆ. ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿಕೊಂಡರೆ ನನಗೆ ನಾನೇ ಮೋಸ ಮಾಡಿಕೊಂಡಂತೆ" ಎಂದ ನೂರು ದಿನ ಪೂರೈಸಿರುವ ಸಿದ್ದರಾಮಯ್ಯನವರಿಗೆ ಬಿದ್ದಿದ್ದವು ಸಾವಿರಾರು ಚಪ್ಪಾಳೆಗಳು.
"ಚುನಾವಣೆ ಬಂದಾಗ ಹಲವಾರು ಜನರು ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತಾರೆ. ಅದು ಯಾವ ಮೂಲದಿಂದ ಬಂದಿದೆ ಎಂಬುದೂ ನಮಗೆ ತಿಳಿದಿರುವುದಿಲ್ಲ. ರಾಜಕೀಯ ಇಂದು ಭ್ರಷ್ಟವಾಗಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು" ಎಂದು ನುಡಿದರು. ಈ ಸಮಾರಂಭದಲ್ಲಿ ಹೆಗಡೆಯವರ ಆಪ್ತರಲ್ಲಿ ಒಬ್ಬರಾಗಿದ್ದ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್ ವಿ ದೇಶಪಾಂಡೆ ಅವರು ಕೂಡ ಉಪಸ್ಥಿತರಿದ್ದರು. (ಪಿಟಿಐ)