Most Wanted ಉಗ್ರ ಯಾಸಿನ್ ಭಟ್ಕಳ ಕೊನೆಗೂ ಸಿಕ್ಕಿಬಿದ್ದ
ನವದೆಹಲಿ, ಆಗಸ್ಟ್ 29: ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ಭಾಗಿಯಾಗಿ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಭಟ್ಕಳದ ಇಂಜಿನಿಯರಿಂಗ್ ಪದವೀಧರ ಯಾಸಿನ್ ಭಟ್ಕಳ (30) ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇತ್ತೀಚೆಗಷ್ಟೇ ಬಂಧನಕ್ಕೀಡಾದ ಉಗ್ರ ತುಂಡಾ, ಯಾಸಿನ್ ಬಗ್ಗೆ ಮಹತ್ವದ ಸುಳಿವು ನೀಡಿದ್ದ ಎನ್ನಲಾಗಿದೆ. ಯಾಸಿನ್ ಭಟ್ಕಳನನ್ನು ಬಿಹಾರ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಇದೀಗ ದೃಢಪಡಿಸಿದ್ದಾರೆ.
ಭಟ್ಕಳ್ ಸೋದರರು: ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಯಾಸಿನ್ ಭಟ್ಕಳ ಇಂಡಿಯನ್ ಮುಜಾಹಿದಿನ್ ಸಂಘಟನೆಯ ಸಕ್ರಿಯ ಮಾಸ್ಟರ್ ಮೈಂಡ್. ಇವನು ತನ್ನ ಸೋದರ ರಿಯಾಜ್ ಭಟ್ಕಳನ ಜತೆಗೂಡಿ 2008ರಲ್ಲಿ ಇಂಡಿಯನ್ ಮುಜಾಹಿದಿನ್ (IM) ಭಯತ್ಪಾದನೆ ಸಂಘಟನೆಯನ್ನು ಹುಟ್ಟುಹಾಕಿದ್ದ. ಯಾಸಿನ್ ಭಟ್ಕಳನ ಮೂಲ ಹೆಸರು ಮುಹಮದ್ ಅಹಮದ್ ಜರಾರ್ ಸಿದ್ದಿಬಾಪ.
ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು (NIA) ಭಾರತ-ನೇಪಾಳ ಗಡಿಯಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ. ಇತ್ತೀಚೆಗೆ ದೆಹಲಿ ಪೊಲೀಸರ ಎರಡನೆಯ ಅತಿ ದೊಡ್ಡ ಬೇಟೆ ಇದಾಗಿದೆ.
ಮತ್ತೊಂದು ಮೂಲದ ಪ್ರಕಾರ ಗುರುವಾರ ಬೆಳಗ್ಗೆ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಗೋರಖ್ ಪುರದಲ್ಲಿ ಯಾಸಿನ್ ಭಟ್ಕಳನನ್ನು ದೆಹಲಿ ಮತ್ತು ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ದೇಶದ ವಿವಿಧ ಕಡೆ ನಡೆದ ಸ್ಫೋಟ ಪ್ರಕರಣಗಳ ರೂವಾರಿ, ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಯಾಸಿನ್ ಭಟ್ಕಳನ ಕುರಿತು ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು.
ಭಟ್ಕಳ್, ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಪರಾರಿಯಾಗಿರಬಹುದೆಂಬ ಶಂಕಿಸಲಾಗಿತ್ತು. ಭಟ್ಕಳ್ ಪುಣೆಯ ಜರ್ಮನ್ ಬೇಕರಿ ಸ್ಫೋಟ ನಡೆಸಬೇಕಾದ ಸ್ಥಳವನ್ನು ಪರಿಶೀಲನೆ ನಡೆಸಿದ್ದ ಎನ್ನಲಾಗಿದೆ.
ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ 20 ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಅಬ್ದುಲ್ ಕರೀಂ ಅಲಿಯಾಸ್ ತುಂಡಾ ಆಗಸ್ಟ್ 17ರಂದು ಸೆರೆ ಸಿಕ್ಕಿದ್ದ. ತುಂಡಾ ಅಲ್ ಖೈದಾ ಸಂಘಟನೆಯ ಭಯೋತ್ಪಾದಕ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ. ಬಾಂಬ್ ಸ್ಫೋಟಕಗಳ ತಯಾರಿಕೆಯಲ್ಲಿ ಇವನು ನಿಸ್ಸೀಮ.