ಧಾರವಾಡದಲ್ಲಿ ಲೋಕಸತ್ತಾ ಜಿಲ್ಲಾ ಘಟಕ ಉದ್ಘಾಟನೆ
ಧಾರವಾಡ, ಆ. 29 : ಲೋಕಸತ್ತಾ ಪಕ್ಷಕ್ಕೆ ಬಂದ ಪ್ರತಿಯೊಂದು ಮತವೂ ಮೌಲ್ಯಾಧಾರಿತ ಮತ್ತು ಸ್ವಚ್ಛ ರಾಜಕೀಯವನ್ನು ಬೆಂಬಲಿಸಿ, ಜಾತಿ-ಹಣ-ಭ್ರಷ್ಟಾಚಾರವನ್ನು ವಿರೋಧಿಸಿ ಬಂದಂತಹ ಮತಗಳು. ಇದು ಪ್ರಜ್ಞಾವಂತ ಮತ್ತು ನೈತಿಕ ರಾಜಕೀಯಕ್ಕೆ ಇರುವ ಬೆಂಬಲವನ್ನು ಸೂಚಿಸುತ್ತದೆ ಎಂದು ಲೋಕಸತ್ತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವಿಕೃಷ್ಣಾ ರೆಡ್ಡಿ ಅವರು ಧಾರವಾಡದಲ್ಲಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಮತ ಚಲಾಯಿಸಿದ ಎಲ್ಲರಿಗೂ ಲೋಕಸತ್ತಾ ಪಕ್ಷ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಲೋಕಸತ್ತಾ ಪಕ್ಷದ ರವಿ ಕೃಷ್ಣಾರೆಡ್ಡಿಯವರು ತಿಳಿಸಿದರು. ಅವರು ಧಾರವಾಡದಲ್ಲಿ ಲೋಕಸತ್ತಾ ಪಕ್ಷದ ಘಟಕದ ಉದ್ಘಾಟನಾ ಸಮಾರಂಭದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡುತ್ತಿದ್ದರು.
ಲೋಕಸತ್ತಾ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 24 ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, 65000ಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು. ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಪಡೆದಿತ್ತು. ಹಾಗೆಯೇ, ಇಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾಗರಾಜ ತಿಗಡಿಯವರು ಸ್ಪರ್ಧಿಸಿದ್ದು ಅವರಿಗೆ 843 ಮತಗಳು ಬಂದಿದ್ದವು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಸ್ಪರ್ಧಿಸಿ ನೈತಿಕ ರಾಜಕಾರಣವನ್ನು ಪ್ರಸ್ತುತಪಡಿಸಲು ಶ್ರಮಿಸುತ್ತದೆ. ಈಗಾಗಲೇ ರಾಜ್ಯ ಸಮಿತಿಯು ನಿರ್ಣಯ ಕೈಗೊಂಡು, ರಾಜ್ಯದ ಅನೇಕ ಭಾಗಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಜಿಲ್ಲಾವಾರು ಘಟಕಗಳ ಸ್ಥಾಪನೆ ಮತ್ತು ಇತರ ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೋಹಿಣಿ ಚಂದ್ರಕಾಂತ್ ಅವರು ತಿಳಿಸಿದರು.
ಗುರುವಾರ ಲೋಕಸತ್ತಾ ಪಕ್ಷವು ಧಾರವಾಡ ಜಿಲ್ಲಾ ಘಟಕದ ಘೋಷಣೆ ಮಾಡಲಾಗುತ್ತಿದ್ದು, ನಾಗರಾಜ ತಿಗಡಿಯವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ. ಅವರಿಗೆ ಪಕ್ಷದ ಸಿದ್ಧಾಂತ ಮತ್ತು ನೈತಿಕತೆಯ ಆಧಾರದ ಮೇಲೆ ಪಕ್ಷವನ್ನು ಸಂಘಟಿಸಲು ಸೂಚಿಸಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿಯಾದ ದೀಪಕ ಸಿ.ಎನ್.ರವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ತಿಗಡಿಯವರು, ಧಾರವಾಡ ಜಿಲ್ಲೆಯ ಜನತೆಯು ನೈತಿಕ ಮತ್ತು ಪ್ರಜ್ಞಾವಂತ ರಾಜಕಾರಣಕ್ಕಾಗಿ ಲೋಕಸತ್ತಾ ಪಕ್ಷವನ್ನು ಬೆಂಬಲಿಸಬೇಕು. ನಮ್ಮ ರಾಜ್ಯದ ಮತ್ತು ದೇಶದಲ್ಲಿ ಅನೇಕ ಸಂಕೀರ್ಣ ಸಮಸ್ಯೆಗಳಿದ್ದು, ಪ್ರಸ್ತುತ ಸಾಮಾಜಿಕ, ಆರ್ಥಿಕ ಸಮಸ್ಯೆಗಳಾದ ಭ್ರಷ್ಟಾಚಾರ, ಬೆಲೆಏರಿಕೆ, ನಿರುದ್ಯೋಗ, ಅಸಮಾನತೆಗಳಿಗೆ ನೈತಿಕ ಮತ್ತು ಸ್ವಚ್ಛ ರಾಜಕಾರಣ ಮಾತ್ರ ಉತ್ತರವಾಗಬಲ್ಲದು ಮತ್ತು ಅದು ಅತ್ಯಗತ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯಾದ ದೀಪಕ್ ಸಿ. ಎನ್., ರಾಜ್ಯ ಸಮಿತಿಯ ಸದಸ್ಯರಾದ ರವಿ ಕೃಷ್ಣಾರೆಡ್ಡಿ, ರೋಹಿಣಿ ಚಂದ್ರಕಾಂತ್ ಮತ್ತು ನಾಗರಾಜ ತಿಗಡಿಯವರು ಉಪಸ್ಥಿತರಿದ್ದರು.