ಸಂಸದ ನವಜೋತ್ ಸಿಂಗ್ ಸಿದ್ದು ನಾಪತ್ತೆ!
ಅಮೃತಸರ ನಗರದ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಈ ಭಿತ್ತಿಪತ್ರ ಮಂಗಳವಾರ ಬೆಳಗ್ಗೆ ಪತ್ತೆಯಾಗಿದ್ದು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದೆ.
ಅಮೃತಸರದ ಸಂಸದ ನವಜೋತ್ ಸಿಂಗ್ ಸಿದ್ದು ಕೆಲವು ದಿನಗಳಿಂದ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಭಿತ್ತಿಪತ್ರ ಮುದ್ರಣಗೊಂಡಿದೆ.
ಸಿದ್ದು ವಿರುದ್ಧ ಆಕ್ರೋಶ : ಲೋಕಸಭೆ ಚುನಾವಣೆಗೂ ಮುನ್ನ ಸಿದ್ದು ಅಮೃತಸರ ಕ್ಷೇತ್ರವನ್ನು ಪ್ಯಾರಿಸ್ ನಗರದಂತೆ ಪರಿವರ್ತನೆ ಮಾಡುವುದಾಗಿ ಹೇಳಿದ್ದರು. ಆದರೆ, ಸಿದ್ದು ಕಳೆದ ಹಲವು ದಿನಗಳಿಂದ ಕ್ಷೇತ್ರಕ್ಕೆ ಆಗಮಿಸಿಲ್ಲ. ಕೇವಲ ಟಿವಿಯಲ್ಲಿ ಜನರು ಅವರನ್ನು ನೋಡುವಂತಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ವಚನ ಭ್ರಷ್ಟರಾದ ನವಜೋತ್ ಸಿಂಗ್ ಸಿದ್ದು ಎಲ್ಲಿದ್ದಾರೆ ಎಂದು ಹುಡುಕಿಕೊಡಿ ಎಂದು ಭಿತ್ತಿಪತ್ರದಲ್ಲಿ ಮನವಿ ಮಾಡಲಾಗಿದೆ. ಸಂಸದರ ಯೋಜನೆಯಡಿ ದೊರೆಯುವ ಅನುದಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಿದ್ದು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೇವಲ ಟಿವಿ ಕಾರ್ಯಕ್ರಮಗಳಲ್ಲಿ ಮಾತ್ರ ನವಜೋತ್ ಸಿಂಗ್ ಸಿದ್ದು ಕಾಣಿಸಿಕೊಳ್ಳುತ್ತಾರೆ. ಅವರ ಭರವಸೆ ನಂಬಿ ಮತ ನೀಡಿದ ಕ್ಷೇತ್ರದ ಮತದಾರರು, ಈಗ ಸಂಸದರನ್ನು ಎಲ್ಲಿ ಹುಡಕಬೇಕು? ಎಂದು ಪ್ರಶ್ನಿಸಲಾಗಿದೆ. 2012ರ ನಂತರ ಸಿದ್ದು ಕ್ಷೇತ್ರಕ್ಕೆ ಆಗಮಿಸಿಲ್ಲ ಎಂಬುದು ಕ್ಷೇತ್ರದ ಜನತೆಯ ಕೋಪಕ್ಕೆ ಕಾರಣವಾಗಿದೆ.