ವಕೀಲರು-ಪತ್ರಕರ್ತ ಘರ್ಷಣೆ ಈಗ ಸಿಬಿಐ ತನಿಖೆಗೆ
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಾ.2ರಂದು ಮಾಧ್ಯಮ ಮತ್ತು ವಕೀಲರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಉನ್ನತಾಧಿಕಾರಿಗಳ ಸಮಿತಿಗೆ ಸುಪ್ರೀಂಕೋರ್ಟ್ ಶುಕ್ರವಾರ (ಅ.19, 2012) ಆದೇಶಿಸಿತ್ತು.
ಹಲಸೂರು ಗೇಟ್ ಇನ್ಸ್ ಪೆಕ್ಟರ್ ನೇತೃತ್ವದ ತನಿಖಾ ತಂಡದಲ್ಲಿ ತಮಿಳುನಾಡು, ಕೇರಳ ಎಡಿಜಿಪಿ, ಸಿಐಡಿ ಮತ್ತು ಡಿಐಜಿ ಮಟ್ಟದ ಅಧಿಕಾರಿಗಳಿರುತ್ತಾರೆ. ಮೂರು ತಿಂಗಳೊಳಗೆ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಿರಲಿಲ್ಲ. ರಾಜ್ಯ ಸರ್ಕಾರ ತನಿಖಾ ತಂಡ ರಚನೆಗೆ ಉತ್ಸಾಹ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ವಕೀಲರ ಸಂಘ ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.
ಈಗ ಈ ಪ್ರಕರಣ ಕುರಿತು ರಾಜ್ಯ ಸರ್ಕಾರ ಮತ್ತು ವಕೀಲರ ಸಂಘದ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರ ಪೀಠ, ಆದೇಶವನ್ನು ಕಾಯ್ದಿರಿಸಿತ್ತು. ಮಂಗಳವಾರ ಆದೇಶ ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ.
ಏನಿದು ಪ್ರಕರಣ? : ಮಾ.2, 2012ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಿಂದ ಹೊರಬಿದ್ದ ಎಎಂಸಿ ಗಣಿಗಾರಿಕೆ ಪ್ರಕರಣದ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ...
ಕೋರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ವಕೀಲರ ನಡುವೆ ಗಾಡಿ ತೆಗೆಯುವ ವಿಚಾರಕ್ಕೆ ಜಗಳ ನಡೆದಿತ್ತು. ಇದನ್ನು ನೋಡಿದ ಖಾಸಗಿ ಮಾಧ್ಯಮ ವಾಹಿನಿ ಪ್ರತಿನಿಧಿಗಳು ವಕೀಲರ ಗಲಾಟೆಯನ್ನು ಕೆಮೆರಾದಲ್ಲಿ ಸೆರೆಹಿಡಿಯಲು ಹೋಗಿದ್ದಾರೆ. ಇದಕ್ಕೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಕೀಲರು ಪೊಲೀಸರ ನಡುವೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ದೊಡ್ಡ ಪ್ರತಿಭಟನೆ ನಡೆದಿತ್ತು.
ಆ ವೇಳೆಯಲ್ಲಿ ಮಾಧ್ಯಮಗಳಲ್ಲಿ 'ವಕೀಲರನ್ನು ಗೂಂಡಾಗಳು' ಎಂದು ಬಿಂಬಿಸಿ, ಅಪಮಾನ ಮಾಡಲಾಗಿದೆ ಎನ್ನುವ ಸಿಟ್ಟನ್ನು ಮನಸಿನಲ್ಲಿಟ್ಟುಕೊಂಡಿದ್ದ ವಕೀಲರು, ಮಾಧ್ಯಮದ ಮೇಲೆ ಹರಿಹಾಯ್ದರು. ಇಬ್ಬರ ವಕೀಲರು ತಮ್ಮ ಗಾಡಿ ಜಗಳ ಮರೆತು ಕೆಮೆರಾಮ್ಯಾನ್ ಹಿಂದೆ ಬಿದ್ದರು. ವಕೀಲರ ಬೆಂಬಲಕ್ಕೆ ಇನ್ನಷ್ಟು ಕರಿಕೋಟುಗಳು ಕೊಂಡರು. ಕೋರ್ಟ್ ಆವರಣದಲ್ಲಿದ್ದವರ ಬ್ಯಾಡ್ಜ್ ನೋಡಿ ಮಾಧ್ಯಮದವರು ಎಂದು ತಿಳಿದ ತಕ್ಷಣ ಯಕ್ಕಾ ಮಕ್ಕಾ ಬಾರಿಸಿದರು.
ಪರಿಸ್ಥಿತಿ ಕೈಮೀರಿ ಮಾಧ್ಯಮ ಸಂಸ್ಥೆಗಳ OB ವಾಹನಗಳು ಜಖಂಗೊಂಡಿದ್ದವು, ಅನೇಕರಿಗೆ ಗಾಯಗಳಾಯಿತು. ಕೋರ್ಟ್ ಬಹಿಷ್ಕರಿಸಿ ವಕೀಲರು ಮುಷ್ಕರ ಹೂಡಿದರು. ವಕೀಲರ ವರ್ತನೆ ವಿರುದ್ಧ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯಿತು.ಮಾಧ್ಯಮ ಸಂಸ್ಥೆಗಳು ಕೂಡಾ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದ್ದರು.
ಸುಮಾರು 12 ದಿನಗಳ ಕೋರ್ಟ್ ಆವರಣಕ್ಕೆ ಕಾಲಿಡದ ವಕೀಲರು ಕೊನೆಗೂ ಕರಿಕೋಟು ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಆದರೆ, ಪತ್ರಕರ್ತರು ಹಾಗೂ ಪೊಲೀಸ್-ವಕೀಲರ ನಡುವಿನ ಘರ್ಷಣೆ ಪ್ರಕರಣ ಕೊನೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.