ಶಂಕರ್ ಬಿದರಿಗೆ ’ಕೈ’ಕೊಟ್ಟ ರಾಜ್ಯ ಕಾಂಗ್ರೆಸ್ ನಾಯಕರಾರು?
ಬೆಂಗಳೂರು, ಆ 26: ಕೆಲವು ಹಿರಿಯ ಮತ್ತು ಪ್ರಭಾವಿ ರಾಜ್ಯ ಘಟಕದ ಕಾಂಗ್ರೆಸ್ ನಾಯಕರಿಂದಾಗಿ ನಾನು ಕಾಂಗ್ರೆಸ್ ಸೇರುವುದನ್ನು ಕೈಬಿಡಬೇಕಾಗಿ ಬಂತು ಎಂದು ಮಾಜಿ ಪೋಲೀಸ್ ಅಧಿಕಾರಿ ಶಂಕರ್ ಬಿದರಿ ಹೇಳಿದ್ದಾರೆ.
ರಾಜ್ಯ ಮಟ್ಟದ ನಾಯಕರಿಗೆ ನಾನು 'ಆಂಧ್ರಪ್ರದೇಶದಲ್ಲಿ ಎನ್ ಟಿ ರಾಮರಾವ್ ಅವರಂತೆ ರಾಜ್ಯದಲ್ಲಿ ಬೆಳೆದರೆ' ಎನ್ನುವ ಭಯ ಕಾಡುತ್ತಿತ್ತು. ಬಿದರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ರಾಜ್ಯ ಕಾಂಗ್ರೆಸ್ 'ನಿಜಲಿಂಗಪ್ಪ ಕಾಂಗ್ರೆಸ್' ಆಗಿ ಪರಿವರ್ತನೆ ಆಗುತ್ತದೆ ಎನ್ನುವ ಆತ್ಮಸಂಕಟ ಅವರಿಗೆ ಕಾಡುತ್ತಿದ್ದರಿಂದ ನಾನು ಕಾಂಗ್ರೆಸ್ ಸೇರುವುದನ್ನು ಸುತರಾಂ ಬಯಸಲಿಲ್ಲ ಎಂದು ಶಂಕರ್ ಬಿದರಿ ಹೇಳಿದ್ದಾರೆ.
ಟಿವಿ9 ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಪತ್ರಕರ್ತ ವಿನಾಯಕ್ ಗಂಗೊಳ್ಳಿ ಜೊತೆ (ಭಾನುವಾರ, ಆ 25) ಮಾತನಾಡುತ್ತಿದ್ದ ಬಿದರಿ, ನಾನು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಧಿಕಾರ ಬಯಸಿ ಸೇರಲು ಇಚ್ಚಿಸಿದವನಲ್ಲ. ಈ ವಿಷಯ ರಾಜ್ಯದ ಕಾಂಗ್ರೆಸ್ ನಾಯಕರಿಗೂ ಗೊತ್ತು.
ಆದರೆ ರಾಜ್ಯದ ಮುಖಂಡರೇ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಲಿಲ್ಲ ಎಂದು ಬಿದರಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಇದೆ..ಮುಂದೆ ಓದಿ..
ಶಂಕರ್ ಬಿದರಿ
ಸುಮಾರು ಮೂರು ತಿಂಗಳಿನಿಂದ ನನ್ನ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಯಾರ ಬಳಿಯೂ ಉತ್ತರವಿರಲಿಲ್ಲ. ಕೊನೆಗೆ ಕಾಂಗ್ರೆಸ್ ಸೇರುವ ಆಲೋಚನೆಯನ್ನು ಕೈಬಿಡ ಬೇಕಾಯಿತು. ಜೀವನದುದ್ದಕ್ಕೂ ಗೌರವ ಕಾಪಾಡಿಕೊಂಡು ಬಂದವನು ನಾನು ಎಂದು ಬಿದರಿ ಹೇಳಿದ್ದಾರೆ.
ಉಮಾಶ್ರೀ
ಉಮಾಶ್ರೀಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ನಾನು ವಿರೋಧಿಸಿದ್ದು ನಿಜ. ನನಗೆ ವೈಯಕ್ತಿಕವಾಗಿ ಅವರ ಮೇಲೆ ಏನೂ ದ್ವೇಷವಿಲ್ಲ. ಆಕೆ ಆ ಕ್ಷೇತ್ರದವರಲ್ಲ, ಸ್ಥಳೀಯರಲ್ಲೇ ಸೂಕ್ತ ಅಭ್ಯರ್ಥಿಗಳು ಇರಬೇಕಾದಾಗ ಉಮಾಶ್ರೀಗೆ ಟಿಕೆಟ್ ನೀಡಬಾರದೆಂದು ನಾನು ವಿರೋಧಿಸಿದ್ದು ಹೌದು ಎಂದಿದ್ದಾರೆ ಬಿದರಿ.
ಸಮಾಜವಾದಿ ಪಕ್ಷ
ನಾನು ಈಗ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ. ಸಮಯದ ಅಭಾವದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ನಾವು ಇತರ ಪಕ್ಷಗಳಿಗೆ ಪೈಪೋಟಿ ನೀಡಲಾಗುವುದಿಲ್ಲ. ಆದರೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಬಲವನ್ನು ಪ್ರದರ್ಶಿಸುತ್ತೇವೆ ಎಂದು ಬಿದರಿ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
ರಾಜ್ಯಾದ್ಯಂತ ಪ್ರವಾಸ
ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಲು ಆರಂಭಿಸಿದ್ದೇನೆ. ಇನ್ನೆರಡು ತಿಂಗಳಲ್ಲಿ ರಾಜ್ಯ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪಕ್ಷ ಸಂಘಟನೆಗೆ ಪೂರ್ಣ ಮಟ್ಟದಲ್ಲಿ ಸಜ್ಜಾಗುತ್ತೇವೆ ಎಂದು ಬಿದರಿ ಹೇಳಿದ್ದಾರೆ.
ಭಾರೀ ವಿಶ್ವಾಸ ಹೊಂದಿರುವ ಬಿದರಿ
ನನಗೆ ದೇವೇಗೌಡ, ಎಸ್ ಎಂ ಕೃಷ್ಣ ಅವರಿಂದ ಹಿಡಿದು ಈಗಿನ ಸಿದ್ದರಾಮಯ್ಯನವರ ವರೆಗೆ ಎಲ್ಲರ ಬಳಿಯೂ ಸಂಪರ್ಕವಿದೆ. ನಾನು ಪೋಲೀಸ್ ಹುದ್ದೆಯಲ್ಲಿದ್ದಾಗ ಎಷ್ಟು ಪ್ರಾಮಾಣಿಕನಾಗಿದ್ದೆನೋ, ಅಷ್ಟೇ ಪ್ರಾಮಾಣಿಕವಾಗಿ ರಾಜಕೀಯದಲ್ಲಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಶಂಕರ್ ಬಿದರಿ ಕಾರ್ಯಕ್ರಮದಲ್ಲಿ ಅಖಂಡ ವಿಶ್ವಾಸದ ಮಾತನ್ನಾಡಿದ್ದಾರೆ.