ನಿಡ್ಡೋಡಿ ಜನತೆಗೆ ಕೇಂದ್ರ ಸಚಿವರ ಭರವಸೆ
ನವದೆಹಲಿ, ಆ.25: ನಿಡ್ಡೋಡಿಯಲ್ಲಿ ಪ್ರಸ್ತಾವಿತ ವಿದ್ಯುತ್ ಯೋಜನೆಯಿಂದ ಅಲ್ಲಿನ ಜನತೆಗೆ ಕಷ್ಟವಾಗುತ್ತಿದ್ದರೆ ಉಷ್ಣ ಸ್ಥಾಪನೆಗೆ ಸರ್ಕಾರ ಮುಂದಾಗುವುದಿಲ್ಲ ಎಂದು ಇಂಧನ ಖಾತೆ ರಾಜ್ಯ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿಯಲ್ಲಿ ಪ್ರಸ್ತಾವಿತ ಅಲ್ಟ್ರಾ ಮೆಗಾ ವಿದ್ಯುತ್ ಯೋಜನೆ ಜನತೆಗೆ ಬೇಡವಾದರೆ ಸ್ಥಾಪನೆಗೆ ಮುಂದಾಗುವುದಿಲ್ಲ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಾತೃಭೂಮಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಅಲೊನ್ಸ್ ಡಿಸೋಜಾ, ಭಾಸ್ಕರ್ ದೇವಸ್ಯ, ಪೂವಪ್ಪಗೌಡ, ಜಗನಾಥ ಶೆಟ್ಟಿ, ಸುಧಾಕರ ಸುವರ್ಣ ಅವರಿದ್ದ ನಿಯೋಗ ಇತ್ತೀಚೆಗೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ನಿಡ್ಡೋಡಿಯ ವಿದ್ಯುತ್ ಯೋಜನೆಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ಸಚಿವರ ಭೇಟಿಯ ನಂತರ ಮಾತನಾಡಿದ ಸಂಸದ ನಳಿನ್ ಕಟೀಲ್, 'ಪರಿಸರ, ಕೃಷಿ ಭೂಮಿ ಮತ್ತು ಜನರಿಗೆ ತೊಂದರೆಯಾಗುವುದಾದರೆ ಅಲ್ಲಿ ವಿದ್ಯುತ್ ಯೋಜನೆ ಜಾರಿಗೆ ತರುವುದಿಲ್ಲ' ಎಂದು ಕೇಂದ್ರ ಸಚಿವ ಸಿಂಧಿಯಾ ಭರವಸೆ ನೀಡಿದ್ದಾರೆ ಎಂದರು. ನಿಡ್ಡೋಡಿಯಲ್ಲಿ ಸ್ಥಾವರ ಸ್ಥಾಪನೆ ಬಗ್ಗೆ ಆಗಿರುವ ಬೆಳವಣಿಗೆಗಳತ್ತ ಸಣ್ಣ ನೋಟ ಇಲ್ಲಿದೆ ಓದಿ..
ಬೇರೆ ಸ್ಥಳ ಹುಡುಕಲಿ : ಕಟೀಲ್
ಈ ಯೋಜನೆಗೆ ರಾಜ್ಯ ಸರ್ಕಾರ ಬೇರೆ ಸ್ಥಳ ಹುಡುಕಲಿ, ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಬೇರೆ ಜಾಗ ಸಿಗದಿದ್ದರೆ, ಬೇರೆ ರಾಜ್ಯದಲ್ಲಿ ಯೋಜನೆ ಜಾರಿಗೆ ಬದಲಿದೆ ಎಂದು ಸಿಂಧಿಯಾ ನಿಯೋಗಕ್ಕೆ ತಿಳಿಸಿದ್ದಾರೆ
ಇದೀಗ ನಿಡ್ಡೋಡಿಯಲ್ಲಿ ವಿದ್ಯುತ್ ಯೋಜನೆಯ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಕೈಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಮೈಸೂರು ಜಿಲ್ಲೆಯ ಚಾಮಲಪುರದಲ್ಲಿ ವಿದ್ಯುತ್ ಯೋಜನೆ ಜಾರಿಗೆ ತರಲಿ ಎಂದು ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ಪ್ರತಿಭಟನೆಯ ಕಾವು
ದಕ್ಷಿಣ ಕನ್ನಡ ಜಿಲ್ಲೆ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣ ವಿದ್ಯುತ್ ಸ್ಥಾವರದ ವಿರುದ್ದದ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಏರುತ್ತಾ ಇದೆ.
ಯಾವುದೇ ಬೆಲೆ ತೆತ್ತಾದರೂ ಅಪಾರ ಪ್ರಮಾಣದ ಫಲವತ್ತಾದ ಕೃಷಿ ಭೂಮಿ ಅಣುಸ್ಥಾವರದ ಪಾಲಾಗಲು ಬಿಡುವುದಿಲ್ಲ ಎಂದು ಸ್ಥಳೀಯರು ಐತಿಹಾಸಿಕ ಕಟೀಲು ದುರ್ಗಾಪರಮೇಶ್ವರಿ ದೇವಳದಲ್ಲಿ ಪ್ರಮಾಣ ಮಾಡಿದ್ದಾರೆ.ಅರ್ಚಕರ ಸಮಿತಿ, ವಿವಿಧ ಸಂಘಟನೆಗಳು, ಅಂಗನವಾಡಿ ಸಂಸ್ಥೆಗಳು, ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.
ಮಾತೃಭೂಮಿ ಹೋರಾಟ ಸಮಿತಿ ಸದಸ್ಯರು ಯೋಜನೆ ವಿರೋಧಿಸಿ ಸಿಎಂ ಸಿದ್ದರಾಮಯ್ಯನವರಿಗೆ ಸಾವಿರಾರು ಪೋಸ್ಟ್ ಕಾರ್ಡ್ ಕಳಿಸಿ ಪ್ರತಿಭಟಿಸಿದ್ದರು. ಗ್ರಾಮಸ್ಥರು ಪೊರಕೆ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಿರಂತರವಾಗಿ ಸಾಗಿದೆ.
ಸ್ಥಾವರ ಏಕೆ ಬೇಡ?
ಮಂಗಳೂರು ತಾಲೂಕಿನ ಮುಲ್ಕಿ-ಕಿನ್ನಿಗೋಳಿ- ಮೂಡುಬಿದರೆ ನಡುವೆ ಬರುವ ನಿಡ್ಡೋಡಿ ಎಂಬ ಪುಟ್ಟ ಗ್ರಾಮದಲ್ಲಿ ತಲೆ ಎತ್ತಲು ಹಾತೊರೆಯುತ್ತಿರುವ ನೇಶನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ ಟಿಪಿಸಿ) ಸಂಸ್ಥೆಯ ಬೃಹತ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕರ್ನಾಟಕ ಸರ್ಕಾರ ಓಕೆ ಎಂಬ ಸುದ್ದಿ ಆತಂಕಕ್ಕೆ ಕಾರಣವಾಗಿದೆ.
ಸುಮಾರು 4000 ಮೆ.ವ್ಯಾ ಸಾಮರ್ಥ್ಯದ ಘಟಕದಲ್ಲಿ ಪ್ರತಿ ದಿನ ಸುಮಾರು 55,000 ಟನ್ ಪ್ರಮಾಣದ ಕಲಿದ್ದಲು ಭಸ್ಮವಾಗಲಿದೆ. ಪ್ರತಿದಿನದ ಹಾರುಬೂದಿಯ ಪ್ರಮಾಣ 10,000 ಟನ್ ಗಳನ್ನು ಮೀರಲಿದೆ. ಜೊತೆಗೆ ಮಾರಕ ಪಾದರಸದ ಪ್ರಮಾಣ 30-40 ಕೆ.ಜಿ ಕೂಡಾ ಸೇರಲಿದೆ. ಇನ್ನೂ ಅನೇಕ ರಾಸಯನಿಕಗಳು ಗಾಳಿಯನ್ನು ಸೇರಲಿದೆ. ಶುದ್ಧ ಕುಡಿಯುವ ನೀರು ಇನ್ಮುಂದೆ ಮರೀಚಿಕೆಯಾಗಲಿದೆ . ಇದರ ಜತೆಗೆ ಸಾವಿರಾರು ಎಕರೆ ಕೃಷಿ ಭೂಮಿ ಶಾಶ್ವತವಾಗಿ ನಾಶವಾಗಲಿದೆ.
ಪ್ರತಿಭಟನೆ ಹೇಗೆ ಸಾಗಿದೆ?
ರಾಜ್ಯ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿ ಈ ಯೋಜನೆ ಇಲ್ಲಿಗೆ ಬರಲು ತಾನು ಬಿಡಲಾರೆ. ಮೊದಲಿನಿಂದಲೂ ಜನಪರ ಹೋರಾಟಕ್ಕೆ ಬೆಂಬಲಿಸುತ್ತಾ ಬಂದಿದ್ದೇನೆ. ಈಗಲೂ ಜನಪರವಾದ ಮಂಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. [ಜೈನ್ ನೀಡಿದ್ದ ಭರವಸೆ ಏನು?]
ಕಟೀಲು ಕಾಲೇಜಿನ ಪ್ರಾಧ್ಯಾಪಕ ಸೋಂದಾ ಭಾಸ್ಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರಾದ ವಿಲಾಸ್ ನಾಯಕ್, ಸುಬೇಧರ್ ನಾಯಕ್ ಧರಣೇಂದ್ರ, ಬಿಜೆಪಿ ಮುಖಂಡರಾದ ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ರೈತ ಮುಖಂಡ ರೋಹಿತಾಕ್ಷ, ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿಕೋಸ್ಟಾ ಮುಂತಾದವರು ಹಗಲಿರಳು ಶ್ರಮಿಸುತ್ತಿದ್ದಾರೆ.
ಚಿತ್ರದಲ್ಲಿ: ಸಂಸದ ನಳೀನ್ ಕುಮಾರ್ ಕಟೀಲ್ ಅವರು ಕೇಂದ್ರ ಸಚಿವ ಸಿಂಧಿಯಾ ಅವರಿಗೆ ನೀಡಿದ ಮಾನ್ವಿ ಪತ್ರ
ಸ್ಥಳೀಯರ ಹೇಳಿಕೆ
ಸಾರ್ವಜನಿಕ ಹಿತಾಸಕ್ತಿಯ ಪ್ರತಿಭಟನೆಯಲ್ಲೂ ರಾಜಕೀಯ ಲಾಭ ಪಡೆದುಕೊಳ್ಳುವುದು ಪಕ್ಷಗಳ ಒಂದಂಕಿ ಕಾರ್ಯಕ್ರಮದಂತಾಗಿರುವುದರಿಂದ ಈ ಹೋರಾಟಕ್ಕೆ ಸ್ಥಳೀಯರು ರಾಜಕೀಯ ನಾಯಕರುಗಳನ್ನು ಹೆಚ್ಚಾಗಿ ಅವಲಂಬಿತವಾಗಿಲ್ಲ ಎಂದಿರುವ ಮಾತೃಭೂಮಿ ಸಂಘಟನೆಯ ಸಕ್ರಿಯ ಸದಸ್ಯ, ಕಟೀಲು ಫಸ್ಟ್ ಗ್ರೇಡ್ ಕಾಲೇಜಿನ ಉಪನ್ಯಾಸಕ ಸೋಂದಾ ಭಾಸ್ಕರ್ ಭಟ್ ಅವರು ಒನ್ ಇಂಡಿಯಾಗೆ ನೀಡಿರುವ ಸಂದರ್ಶನ ಓದಿ