ಸಿದ್ದರಾಮಯ್ಯ ಮನೆಯಲ್ಲಿ ರಹಸ್ಯವಾಗಿ ನಡೆಯಿತು ಪೂಜೆ!
ತಾಜಾ ಆಗಿ ಉಪಚುನಾವಣೆ ಫಲಿತಾಂಶದ ಹಿಂದಿನ ದಿನ ನಿನ್ನೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಅತ್ಯಂತ ಗೌಪ್ಯವಾಗಿ ಪೂಜೆ ನೆರವೇರಿಸಿದ್ದಾರೆ. ಶ್ರಾವಣ ಮಾಸದ 3ನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ, ಅದೂ ಸರ್ಪಗಾವಲಿನಲ್ಲಿ ನಡೆದಿದೆ!
ಈ ಪೂಜೆ ಸಿದ್ದರಾಮಯ್ಯನವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಹಬ್ಬದೂಟದ ಸವಿಯುಣ್ಣುವ ಭಾಗ್ಯ ಹಲವು ಸಚಿವರಿಗೆ ಒಲಿದಿತ್ತು. ಇನ್ನು ಪೂಜೆಯಲ್ಲಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ, ಇಬ್ಬರೂ ಪುತ್ರರು, ಸಹೋದರರು, ಆತ್ಮೀಯ ಸಂಬಂಧಿಗಳು ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ.
ಹೀಗಾಗಿ, ಸಿಎಂ ನಿವಾಸಕ್ಕೆ ಶುಕ್ರವಾರ ಬೆಳಗ್ಗೆಯಿಂದ ಯಾರಿಗೂ ಪ್ರವೇಶವೂ ಇರಲಿಲ್ಲ; ಆಹ್ವಾನವೂ ಇರಲಿಲ್ಲ. ಸಿದ್ದರಾಮಯ್ಯ ಅವರು ಬೆಳಗ್ಗೆ 10 ಗಂಟೆಗೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಅತ್ತ ಕುಟುಂಬದವರು ಪೂಜೆ ಮಾಡುತ್ತಿದ್ದರೆ ಅದರಲ್ಲಿ ತಮಗೇನು ಕೆಲಸ ಎಂದು ತಮ್ಮ ಸಚಿವ ಸಂಪುಟದ ಸಭೆ ನಡೆಸಿದ್ದರು. ಇದರ ಹೊರತಾಗಿ ಶುಕ್ರವಾರ ಸಿದ್ದರಾಮಯ್ಯ ಅವರಿಗೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿರಲಿಲ್ಲ.
ಸುಮಾರು ನಾಲ್ಕೂವರೆ ಗಂಟೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಊಟದ ವ್ಯವಸ್ಥೆ ಇರಲಿಲ್ಲ. ಆದರೆ ಮನೆಯಲ್ಲಿ ಲಕ್ಷ್ಮಿಪೂಜೆ ಇರುವುದರಿಂದ ಎಲ್ಲರೂ ಊಟಕ್ಕೆ ಅಲ್ಲಿಗೆ ಆಗಮಿಸಬೇಕು ಎಂದು ಮುಖ್ಯಮಂತ್ರಿ ಆಹ್ವಾನ ನೀಡಿದ್ದರು. ಹೀಗಾಗಿ, ಮುಖ್ಯಮಂತ್ರಿಯವರ ನಿವಾಸದ ಲಕ್ಷ್ಮಿಪೂಜೆಗೆ ಕೊನೆಯಲ್ಲಿ ಆಹ್ವಾನಿತರಾದವರು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಮಾತ್ರ. ಅವರಿಗೆ ಮಾತ್ರ ಹಬ್ಬದೂಟ. ಇನ್ನು ಪೂಜೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದವರು ಎಂಬುದೂ ಗೌಪ್ಯವಾಗಿದೆ.
ಸಾಮಾನ್ಯ ದಿನಗಳಲ್ಲಿ ಮುಖ್ಯಮಂತ್ರಿಯವರ ನಿವಾಸದಲ್ಲಿ ಬೆಳಗ್ಗಿನಿಂದಲೇ ಸಾರ್ವಜನಿಕರ ಭೇಟಿ ಇರುತ್ತದೆ. ಇದನ್ನು ಶುಕ್ರವಾರ ನಿರ್ಬಂಧಿಸಲಾಗಿತ್ತು. ಲಕ್ಷ್ಮಿ ಪೂಜೆ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಪ್ರವೇಶ ನಿಷಿದ್ಧವಾಗಿತ್ತು. ಅದರಲ್ಲೂ ಮಾಧ್ಯಮವರನ್ನು ಸಾಕಷ್ಟು ದೂರವೇ ಉಳಿಸಲಾಗಿತ್ತು. ಮುಖ್ಯಮಂತ್ರಿಯವರ ಅಧಿಕೃತ ಛಾಯಾಗ್ರಾಹಕರಿಗೂ ನಿವಾಸಕ್ಕೆ ಪ್ರವೇಶ ಇರಲಿಲ್ಲ.