ನಿಡುಮಾಮಿಡಿ,ಚಂಪಾಗೆ ಪೇಜಾವರ ಶ್ರೀಗಳ ಖಡಕ್ ಉತ್ತರ
ಬಿಜಾಪುರ, ಆ 21: ಮಡೆಸ್ನಾನ ಮತ್ತು ಪಂಕ್ತಿಭೋಜನದ ವಿಚಾರದಲ್ಲಿ ನನ್ನ ಹಿಂದಿನ ನಿಲುವಿನಲ್ಲಿ ಬದಲಾವಣೆಯಿಲ್ಲ. ಮಡೆಸ್ನಾನಕ್ಕೆ ನನ್ನ ವಿರೋಧ ಈಗಲೂ ಇದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಶ್ರೀಗಳು ಮತ್ತು ಚಂಪಾ ಅವರು ನನ್ನ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಈ ಬಗ್ಗೆ ನನಗೆ ಬೇಸರವಿಲ್ಲ. ಕೃಷ್ಣ ಮಠದಲ್ಲಿ ಸಹಭೋಜನವಿದೆ ಎನ್ನುವುದನ್ನು ಕಾರ್ಯಕ್ರಮದಲ್ಲಿ ನನ್ನ ವಿರುದ್ದ ಮಾತನಾಡಿದ ಎಲ್ಲರೂ ಅರಿತುಕೊಳ್ಳಲಿ.
ಜನರ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಡುಮಾಮಿಡಿ ಶ್ರೀಗಳು ಮಾತನಾಡುವುದು ತರವಲ್ಲ. ಅದು ಜನರ ಧಾರ್ಮಿಕ ಭಾವನೆ, ಮೂಢನಂಬಿಕೆಯ ವಿಚಾರದಲ್ಲಿ ಎಲ್ಲವನ್ನೂ ಹತ್ತಿಕ್ಕುವುದು ಮತ್ತು ನಿಷೇಧಿಸುವುದು ಯೋಗ್ಯ ಪರಿಹಾರವಲ್ಲ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಚಾತುರ್ಮಾಸ್ಯದ ನಿಮಿತ್ತ ನಗರದಲ್ಲಿ ವಾಸ್ತವ್ಯ ಹೂಡಿರುವ ಪೇಜಾವರ ಶ್ರೀಗಳು ಮಾತನಾಡುತ್ತಾ, ಮಡೆಸ್ನಾನ ಹಲವು ದಶಕಗಳಿಂದ ಆಚರಿಸುಕೊಂಡು ಬರುತ್ತಿರುವ ಪದ್ದತಿ. ಏಕಾಏಕಿ ಇದನ್ನು ನಿಷೇಧಿಸಿದರೆ ಭಕ್ತರ ಮನಸ್ಸಿಗೆ ನೋವಾಗಬಹುದು.
ಅದಕ್ಕಾಗಿ ನಾವು ಮಡೆಸ್ನಾನದ ಬದಲು ಎಡೆಸ್ನಾನಕ್ಕೆ ಬೆಂಬಲ ಸೂಚಿಸಿದೆ. ದೇವರ ಪ್ರಸಾದವಿರುವ ಬಾಳೆ ಎಲೆಯಲ್ಲಿ ಹೊರಳಾಡುವುದಕ್ಕೆ ಯಾರ ತಕರಾರೂ ಇರಲಿಲ್ಲ. ಇದನ್ನು ಸಮಾರಂಭವೊಂದರಲ್ಲಿ ನಿಡುಮಾಮಿಡಿ ಶ್ರೀಗಳ ಬಳಿಯೂ ಚರ್ಚಿಸಿದ್ದೆ. ಅದಕ್ಕೆ ಅವರೂ ಅಂದು ಬೆಂಬಲ ಸೂಚಿಸಿ ಅಭಿನಂದನೆ ಸಲ್ಲಿಸಿದ್ದರು.
ಪೇಜಾವರ ಶ್ರೀಗಳು ಪ್ರತಿಸವಾಲು ಸ್ಲೈಡಿನಲ್ಲಿ..
ಮಡೆಸ್ನಾನ
ಮಡೆಸ್ನಾನದ ವಿಚಾರದಲ್ಲಿ ನಮಗೆ ದ್ವಂದ್ವ ನಿಲುವಿಲ್ಲ, ನಮ್ಮನ್ನು ವಿರೋಧಿಸುವವರಿಗೂ ನನ್ನ ನಿರ್ಧಾರದ ಬಗ್ಗೆ ಅರಿವಿದೆ. ಮಡೆಸ್ನಾನ ಬೆಂಬಲಿಸುವವರು ಎಡೆಸ್ನಾನ ಪದ್ದತಿ ತಡೆಗೆ ಕೋರ್ಟಿನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ. ಹಾಗಾಗಿ ಮಡೆಸ್ನಾನ ಪದ್ದತಿ ಯಥಾಪ್ರಕಾರ ಬದಲಾಗದೇ ಉಳಿದಿದೆ. ಮಡೆಸ್ನಾನ ವಿರೋಧಿಸುವವರು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಿ ಎಂದು ಪೇಜಾವರ ಶ್ರೀಗಳು ಸವಾಲೆಸೆದಿದ್ದಾರೆ.
ಧಾರ್ಮಿಕ ಪದ್ದತಿ
ಸಮಾಜಕ್ಕೆ ಹಾನಿಯಾಗುವ ಧಾರ್ಮಿಕ ಪದ್ದತಿಯನ್ನು ಮೊದಲು ನಿಷೇಧಿಸಲಿ. ಪ್ರಾಣಿಬಲಿ, ದೇವದಾಸಿ ಪದ್ದತಿಯನ್ನೂ ಮೊದಲು ನಿಷೇಧಿಸಲಿ. ಮೂಢನಂಬಿಕೆಯ ವಿಚಾರದಲ್ಲಿ ಸಾವಿರಾರು ಕುರಿ, ಕೋಳಿ, ಕೋಣಗಳನ್ನು ಬಲಿಕೊಡಲಾಗುತ್ತದೆ. ನನ್ನ ಬಗ್ಗೆ ಟೀಕೆ ಮಾಡುವವರು ಅದರ ಬಗ್ಗೆ ಸುಮ್ಮನಿರುವುದು ಹಾಸ್ಯಾಸ್ಪದ.
ಬ್ರಾಹ್ಮಣರ ಆಚಾರ ವಿಚಾರ
ಬ್ರಾಹ್ಮಣರ ಆಚಾರ ವಿಚಾರದಲ್ಲಿ ಕೆಲವರಿಗೆ ಬಹಳಾ ಆಸಕ್ತಿ, ದನದ ಮಾಂಸ ತಿನ್ನುವವರು ಬ್ರಾಹ್ಮಣರೇ ಜಾಸ್ತಿ ಎನ್ನುವ ಮಾತನ್ನು ಕೆಲವರು ಹೇಳಿದ್ದಾರೆ. ಬಾಯಿ ಚಪಲಕ್ಕೆ ಮನಸೋ ಇಚ್ಚೆ ಮಾತನಾಡುವುದು ತರವಲ್ಲ.
ಎಲ್ಲೂ ಭೋಜನ ಸ್ವೀಕರಿಸುವುದಿಲ್ಲ
ನಾನು ಈ ಹಿಂದೆಯೂ ಹೇಳಿದ್ದೆ, ನಾನು ದಲಿತರ ಮನೆಯಲ್ಲಿ ಅಲ್ಲ ಬ್ರಾಹ್ಮಣರ ಮನೆಯಲ್ಲೂ ಭೋಜನ ಸ್ವೀಕರಿಸುವುದಿಲ್ಲ. ಯತಿಗಳಿಗೆ ತಮ್ಮದೇ ಆದ ಆಹಾರ ಪದ್ದತಿಯಿದೆ. ಸನ್ಯಾಸತ್ವ ಸ್ವೀಕರಿಸುವವರು ಕೆಲವೊಂದು ಪದ್ದತಿಗೆ ಬದ್ದರಾಗ ಬೇಕಾಗುತ್ತದೆ. ಈ ಬಗ್ಗೆ ಚರ್ಚೆ ಅನವಶ್ಯಕ.
ಪಂಕ್ತಿಭೇದ
ಪಂಕ್ತಿಭೇದ ಎಲ್ಲಾ ಧರ್ಮದಲ್ಲೂ ಇದೆ, ಬಸವಣ್ಣ ಶಿವಭಕ್ತರೆಲ್ಲಾ ಸಮಾನರು ಎಂದಿದ್ದಾರೆ. ವಿಷ್ಣು ಭಕ್ತರೆಲ್ಲಾ ಸಮಾನರು ಎನ್ನುವ ವಿಚಾರ ಪ್ರಚಲಿತದಲ್ಲಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಹಪಂಕ್ತಿ ಭೋಜನವಿದೆ. ಕಾರ್ಯಕ್ರಮದಲ್ಲಿ ನನ್ನ ವಿರುದ್ದ ಮಾತನಾಡಿದ ಎಲ್ಲರಿಗೂ ಉಡುಪಿಗೆ ಆಹ್ವಾನಿಸುತ್ತೇನೆ. ಅವರೆಲ್ಲಾ ಬಂದು ಅಲ್ಲಿನ ಸಹಪಂಕ್ತಿ ಭೋಜನದ ಬಗ್ಗೆ ಮೊದಲು ಅರಿತುಕೊಳ್ಳಲಿ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.