ಹಳ್ಳಿಮನೆ ಹೋಟೆಲ್ ನಿಂದ ಬಾಲ ಕಾರ್ಮಿಕರಿಗೆ ಮುಕ್ತಿ
ಮಂಗಳವಾರ ಸಂಜೆ ಮಲ್ಲೇಶ್ವರಂನಲ್ಲಿರುವ ಹಳ್ಳಿಮನೆ ಹೋಟೆಲ್ ಮತ್ತು ವೈಯಾಲಿಕಾವಲ್ ನಲ್ಲಿರುವ ಕ್ಯಾಟರಿಂಗ್ ಕೇಂದ್ರದ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಮಣಿಪುರ ಮೂಲದ 14 ವರ್ಷದೊಳಗಿನ 17 ಮಕ್ಕಳು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮಕ್ಕಳನ್ನು ರಕ್ಷಿಸಿದ ಪೊಲೀಸರು ಈ ಸಂಬಂಧ ಹೋಟೆಲ್ ಮ್ಯಾನೇಜರ್ ಬಾಬುರಾವ್ ಮತ್ತು ಸೂಪರ್ ವೈಸರ್ ಕಾಂತರಾಜು ಅವರನ್ನು ಬಂಧಿಸಿದ್ದಾರೆ. ಹೋಟೆಲ್ ಮಾಲೀಕರ ವಿರುದ್ಧ ಬಾಲ ನ್ಯಾಯ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಹಳ್ಳಿಮನೆ ಹೋಟೆಲ್ ನಲ್ಲಿ ಬಾಲ ಕಾರ್ಮಿಕರನ್ನು ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಿಐಡಿ ಮಾನವ ಕಳ್ಳ ಸಾಗಣೆ ಪತ್ತೆ ದಳಕ್ಕೆ ದೂರು ನೀಡಿತ್ತು.
ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮಕ್ಕಳನ್ನು ಬಂಧಿಸಿ, ಇಬ್ಬರನ್ನು ಬಂಧಿಸಿದ್ದಾರೆ. ಬಾಲ ಕಾರ್ಮಿಕರನ್ನು ನಿಮ್ಹಾನ್ಸ್ ಬಳಿಯಿರುವ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಬಾಲ ಮಂದಿಕ್ಕೆ ಕಳುಹಿಸಿಕೊಡಲಾಗಿದೆ.
ಪ್ರತಿ ಮಕ್ಕಳ ವಯೋಮಿತಿಯ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ. ಅನ್ಯ ರಾಜ್ಯದ ಮಕ್ಕಳು ಕಡಿಮೆ ಕೂಲಿಗೆ ಕೆಲಸಕ್ಕೆ ದೊರೆಯುತ್ತಾರೆ. ಆದ್ದರಿಂದ ಅವರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.