ಮುಸ್ಲಿಂ ಸೋದರಿಯರಿಂದ ಮೋದಿಗೆ 'ರಾಖಿ'
ವಾರಣಾಸಿ, ಆ.20: ಭರವಸೆಯ ಭವಿಷ್ಯದ ನಂಬಿಕೆಯನ್ನು ಹೊತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುತ್ತಿದ್ದೇವೆ ಎಂದು ಉತ್ತರ ಪ್ರದೇಶದ ಮುಸ್ಲಿಂ ಮಹಿಳೆಯರು ಘೋಷಿಸಿದರು. ಮಂಗಳವಾರ ರಕ್ಷಾ ಬಂಧನದ ದಿನ ಮೋದಿ ಅವರ ಕೈ ಪ್ರೀತಿಯ ಭಾರಕ್ಕೆ ಸೋತಿದ್ದು ಸುಳ್ಳಲ್ಲ.
ದೇಶ, ವಿದೇಶದ ಸೋದರಿಯರಿಂದ ರಾಖಿ ಕಟ್ಟಿಸಿಕೊಂಡು ಪವಿತ್ರ ಬಂಧನಕ್ಕೆ ಒಳಗಾದ ನರೇಂದ್ರ ಮೋದಿ, ಎಲ್ಲರ ರಕ್ಷಣೆಯ ಹೊಣೆ ನನ್ನ ಮೇಲಿದೆ ಎಂಬ ಭಾವನೆ ಮೂಡಿಸಿದರು. ರಕ್ಷಣೆ, ಶಕ್ತಿ, ಭರವಸೆಯ ಪ್ರತೀಕವಾದ ರಾಖಿ ಧರಿಸಿ ಮೋದಿ ಎಂದಿನಂತೆ ಸಂತಸದಿಂದ ಕಂಡು ಬಂದರು.
ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದೇ ಮೋದಿ ಅವರ ಮೂಲ ಮಂತ್ರ ಎಂಬ ಟೀಕಾಕಾರರ ಮೂದಲಿಕೆಗೆ ಪ್ರತಿ ಉತ್ತರ ನೀಡುವಂತ್ತಿತ್ತು ಇಂದಿನ ಕಾರ್ಯಕ್ರಮ.
ಮುಸ್ಲಿಂ ಮಹಿಳಾ ಫೌಂಡೇಶನ್ ನ ವತಿಯಿಂದ ಆಗಮಿಸಿದ್ದ ಮಹಿಳೆಯರು ಒಬ್ಬ ತಂಗಿ ತನ್ನ ಅಣ್ಣನಿಗೆ ತೋರಿಸುವ ವಾತ್ಸಲ್ಯ ಭರಿತ ದೃಷ್ಟಿಯಿಂದ ಮೋದಿಯನ್ನು ಕಂಡರು. ವಾರಣಾಸಿಯಲ್ಲಿ ನಡೆದ ರಕ್ಷಾ ಬಂಧನ್ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ
ಮುಸ್ಲಿಂ ಮಹಿಳೆಯಿಂದ ರಾಖಿ
ಮುಸ್ಲಿಂ ಮಹಿಳಾ ಫೌಂಡೇಶನ್ ನ ವತಿಯಿಂದ ಆಗಮಿಸಿದ್ದ ಮಹಿಳೆಯರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ರಾಖಿ ಕಟ್ಟಿದರು.
ಚುನಾವಣೆ ಹಿನ್ನೆಲೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಈ ರೀತಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂಬ ಟೀಕೆ ಕೂಡಾ ಕೇಳಿ ಬಂದಿದೆ.
ವಾರಣಾಸಿಯಿಂದ ಸ್ಪರ್ಧೆ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಗುಜರಾತ್ ಹಾಗೂ ಉತ್ತರಪ್ರದೇಶದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ವಾರಣಾಸಿಯಿಂದಲೇ ಮೋದಿ ಸ್ಪರ್ಧಿಸಲಿ ಎಂದು ಇಲ್ಲಿನ ಜನ ಆಗ್ರಹಿಸಿದ್ದಾರೆ.
ಹೆಚ್ಚಿನ ಸಂಸತ್ ಸ್ಥಾನಗಳು
ಉತ್ತರಪ್ರದೇಶದಲ್ಲಿ ಕುಗ್ಗಿರುವ ಬಿಜೆಪಿ ಜನಪ್ರಿಯತೆ ಹೆಚ್ಚಿಸಲು ಮೋದಿ ಆಗಮಿಸಿದ್ದಾರೆ. ಸುಮಾರು 80 ಸಂಸತ್ ಸ್ಥಾನಗಳ ಪ್ರಶ್ನೆ ಇದಾಗಿರುವುದರಿಂದ ಹೆಚ್ಚಿನ ಮಹತ್ವ, ಕಾಳಜಿಯನ್ನು ಉತ್ತರ ಪ್ರದೇಶ ಕ್ಷೇತ್ರಗಳಿಗೆ ನೀಡಲಾಗುತ್ತಿದೆ.
ಜೋಶಿ ಕ್ಷೇತ್ರದಲ್ಲಿ ಮೋದಿ
ಲಭ್ಯ ಮಾಹಿತಿ ಪ್ರಕಾರ ಮುರಳಿ ಮನೋಹರ್ ಜೋಶಿ ಅವರು ಹೊಂದಿರುವ ಕ್ಷೇತ್ರವನ್ನು ಮೋದಿ ಅವರಿಗೆ ನೀಡಿ, ಜೋಶಿ ಅವರಿಗೆ ಬೇರೊಂದು ಕ್ಷೇತ್ರ ನೀಡುವ ಬಗ್ಗೆ ಚಿಂತನೆ ನಡೆದಿದೆಯಂತೆ
ವಿವಿಧೆಡೆಯಿಂದ ಶುಭ ಹಾರೈಕೆ
ದೇಶದ ವಿವಿಧ ಮೂಲೆಗಳಿಂದ ಬಂದಿದ್ದ ಸುಮಾರು 5000ಕ್ಕೂ ಅಧಿಕ ಮಹಿಳೆಯರು ಮೋದಿ ಅವರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿದೇಶಿಯರು
ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಹಲವಾರು ವಿದೇಶಿಯರು ಪಾಲ್ಗೊಂಡು ಮೋದಿ ಅವರಿಗೆ ರಾಖಿ ಕಟ್ಟಿ, ಭಾರತೀಯ ಸಂಸ್ಕೃತಿ, ಹಬ್ಬಗಳ ಆಚರಣೆ ಬಗ್ಗೆ ತಿಳಿದುಕೊಂಡರು.
ಮೋದಿ ಹೇಳಿಕೆ
ನೀವು ಕಟ್ಟಿರುವ ಈ ಕವಚ(ರಾಖಿ) ನನಗೆ ಶ್ರೀರಕ್ಷೆಯಾಗಲಿದೆ ಎಲ್ಲಾ ಕಷ್ಟಗಳನ್ನು ದಾಟಿ ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮಾಡಲಿದೆ ಎಂದು ಮೋದಿ ಹೇಳಿದರು.