ತಮಿಳುನಾಡು : ಬಿಸಿಯೂಟದಲ್ಲಿ ಹಲ್ಲಿ,115 ಮಕ್ಕಳು ಅಸ್ವಸ್ಥ
ಪೆರಂಬೂರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿನ ಮಕ್ಕಳು ಬಿಸಿಯೂಟ ಸೇವಿಸಿ ಸೋಮವಾರ ಅಸ್ಪಸ್ಥರಾಗಿದ್ದಾರೆ. ಎಲ್ಲಾ 115 ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ವಾಂತಿಯಿಂದ ಬಳಲುತ್ತಿದ್ದ ಮಕ್ಕಳನ್ನು ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿದೆ. ಒಂದು ಮಗುವಿಗೆ ಮಾತ್ರ ಚಿಕಿತ್ಸೆ ಮುಂದುವರೆಸಲಾಗಿದೆ. ವಿಷಯುಕ್ತ ಆಹಾರ ಸೇವಿಸಿದ್ದರಿಂದ ಮಕ್ಕಳಿಗೆ ವಾಂತಿಯಾಗುತ್ತಿತ್ತು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಜಿಲ್ಲಾಧಿಕಾರಿ ದರೀಜ್ ಅಹಮದ್ ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಿಸಿಯೂಟ ನಿರ್ವಹಣೆ ಮಾಡುತ್ತಿದ್ದ ಅಧಿಕಾರಿ ಮತ್ತು ಅಡಿಗೆ ಮಾಡುವವರನ್ನು ನಿರ್ಲಕ್ಷತನದ ಆರೋಪದ ಅಡಿ ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.
ಜಿಲ್ಲಾಧಿಕಾರಿ ದರೀಜ್ ಅಹಮದ್ ಹೇಳುವಂತೆ, 203 ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ತಯಾರಿಸಲಾಗಿತ್ತು. ಮಕ್ಕಳಿಗೆ ಊಟ ನೀಡುವಾಗ ಶಾಲೆಯ ಶಿಕ್ಷಕರು ಊಟದಲ್ಲಿ ಹಲ್ಲಿ ಬಿದ್ದಿರುವುದನ್ನು ಗಮನಿಸಿದರು.
ತಕ್ಷಣ ಮಕ್ಕಳಿಗೆ ಊಟ ಮಾಡದಂತೆ ಸೂಚನೆ ನೀಡಲಾಯಿತು. ಆದರೆ, ಆ ವೇಳೆಗಾಗಲೇ 115 ಮಕ್ಕಳು ಊಟ ಮಾಡಿದ್ದರು. ತಕ್ಷಣ ಅವರನ್ನು ಅರಿಯಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಿದ್ದಾರೆ.