ಯುವ ಮುಸ್ಲಿಂ ಉಗ್ರರಿಗೆ ಕೇಂದ್ರದಿಂದ ಕಾನೂನು ನೆರವು?
ಗೃಹ ಸಚಿವಾಲಯದ ಮೂಲಗಳ ಪ್ರಕಾರ ಬಂಧಿತ ಯುವಕರು ಬಹುಪಾಲು ಮುಸ್ಲಿಂ ಸಮುದಾಯದವರಾಗಿದ್ದು, ಅಮಾಯಕರೂ ಆಗಿರುವ ಸಾಧ್ಯತೆಗಳಿರುವುದರಿಂದ ಸಚಿವಾಲಯ ಈ ನಿರ್ಧಾರಕ್ಕೆ ಮುಂದಾಗಿದೆ.
ರಾಷ್ಟ್ರೀಯ ತನಿಖಾ ದಳ (National Investigation Agency) ಉಗ್ರ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥಕ್ಕೆ 39 ವಿಶೇಷ ನ್ಯಾಯಾಲಯ ಇತ್ತೀಚೆಗಷ್ಟೇ ಸ್ಥಾಪಿಸಿತ್ತು.
ವಿಶೇಷ ನ್ಯಾಯಾಲಯ ಸ್ಥಾಪಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಬಂಧಿತ ಯುವಕರಿಗೆ ಆಶಾದಾಯಕವಾದ ಕಾನೂನು ಹೆಜ್ಜೆ ಇಡಲು ಮುಂದಾಗಿದೆ.
ಜೈಲುವಾಸ ಅನುಭವಿಸುತ್ತಿರುವ ಕೆಲವು ಮುಸ್ಲಿಂ ಯುವಕರು ಅಮಾಯಕರು ಮತ್ತು ನಿರ್ದೋಷಿಗಳಾಗಿರುವ ಸಾಧ್ಯತೆಗಳಿವೆ. ಹಾಗಾಗಿ ಅವರಿಗೆ ನ್ಯಾಯ ಒದಗಿಸಲು ಕಾನೂನು ರೀತಿಯಲ್ಲಿ ಸಹಾಯ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿರುವ ರೆಹಮಾನ್ ಖಾನ್, ಬಂಧಿತರಲ್ಲಿ ಹಲವಾರು ಯುವ ಮುಸ್ಲಿಂರು ಅಮಾಯಕರು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಬಳಿ ತಮ್ಮ ಅಳಲು ವ್ಯಕ್ತ ಪಡಿಸಿದ್ದರು.
ಅಮಾಯಕ ಮುಸ್ಲಿಂರಿಗೆ ಶಿಕ್ಷೆಯಾಗಬಾರದು ಅವರಿಗೆ ಕಾನೂನು ನೆರವು ನೀಡುವ ಬಗ್ಗೆ ಚಿಂತನೆ ಮಾಡಲು ರೆಹಮಾನ್ ಖಾನ್ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಈಗ ಕಾನೂನು ನೆರವು ನೀಡುವ ಬಗ್ಗೆ ಚಿಂತನೆಗೆ ಮುಂದಾಗಿದ್ದಾರೆ.