ಅಂತರ್ಜಾತಿ ವಿವಾಹ ಪರಿಕಲ್ಪನೆ ಯೋಚಿಸಲೂ ಭಯ
ಇಂದೆಡೆ ಅಂತರ್ಜಾತಿಯ ವಿವಾಹ ಬಂಧನಕ್ಕೊಳಗಾದವರಿಗೆ ಜೋಡಿಗೆ ನಗದು ಬಹುಮಾನಗಳನ್ನು ವಿತರಿಸುವ ಮೂಲಕ ಜಾತಿಯ ಚೌಕಟ್ಟು ಮೀರಿ ಮದುವೆಯಾಗುವವರನ್ನು ನಾನಾ ರಾಜ್ಯ ಸರಕಾರಗಳು ಪ್ರೋತ್ಸಾಹಿಸುತ್ತಿದ್ದರೆ ಈಶ್ವರಪ್ಪ ಅವರ ಈ ಹೇಳಿಕೆ ವಿವಾದಕ್ಕೆ ನೀರೆರೆದಿದೆ.
ಜಾತಿ ಬಂಧನದಲ್ಲಿ ಸಿಲುಕುತ್ತಿರುವ ಈಗಿನ ಸಮಾಜದಲ್ಲಿ ಬಸವಣ್ಣನವರ ಅಂತರ್ ಜಾತಿ ವಿವಾಹದ ಪರಿಕಲ್ಪನೆ ಬಗ್ಗೆ ಯೋಚಿಸಲೂ ಭಯವಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಭಾನುವಾರ ವಿಜಯನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗದ ಗುರು ಶಾಂತಬೀರ ಸೇವಾ ಸಮಿತಿ ಶಾಖೆ ಚಾಲನೆ ಹಾಗೂ ರಾಜ್ಯ ಮಟ್ಟದ ವೀರಶೈವ ವಧು-ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿದ್ದನ್ನು ಈಗಿನ ಸಮಾಜ ಪೂರ್ಣವಾಗಿ ಒಪ್ಪಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತರ್ಜಾತಿಯ ವಿವಾಹ ಬಂಧನಕ್ಕೆ ಸಹಮತ ಸಿಗುವುದು ಸುಲಭವಲ್ಲ ಎಂದು ಈಶ್ವರಪ್ಪ ನುಡಿದರು.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ ಬಸವಣ್ಣನವರು ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ಪದ್ಧತಿ ಶಿಕ್ಕರಿಸಿ ಹೊಸ ವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಿದಾಗ ಎದುರಾದ ಸಮಸ್ಯೆಗಳನ್ನು ಈ ಸಮಾಜ ಕಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಲಿಂಗಾಯತ ಸಮಾಜದಲ್ಲಿಯೇ ಅನೇಕ ಉಪ ಪಂಗಡಗಳಾಗಿ ವಿವಾಹ ಸಂಬಂಧಗಳು ಕಷ್ಟವಾಗುತ್ತಿವೆ. ವಧು-ವರರ ಸಮಾವೇಶಗಳನ್ನು ಏರ್ಪಡಿಸುವ ಮೂಲಕ ವೀರಶೈವ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಗಳು ಹೆಚ್ಚಾಗಬೇಕು ಎಂದು ಅವರು ಕರೆನೀಡಿದರು.