ನಾನು ಡಿಸಿಎಂ ಆಗಲು ಸಿದ್ಧ ಅಂದ್ರು ಪರಮೇಶ್ವರ್!
ಬೆಂಗಳೂರಿನ ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದ ಪರಮೇಶ್ವರ್, ಕಷ್ಟಕಾಲದಲ್ಲಿ ನಾನು ಪಕ್ಷದ ಜವಾಬ್ದಾರಿ ವಹಿಸಿಕೊಂಡೆ.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ನನ್ನ ಕನಸು ಈಡೇರಿದೆ. ಆದರೆ, ಜನರು ನೀವು ತ್ಯಾಗಮಯಿಯೇ ಎಂದು ನನ್ನನ್ನು ಕೇಳುತ್ತಿದ್ದಾರೆ. ನನಗೆ ಸರ್ಕಾರದಲ್ಲಿ ಭಾಗಿಯಾಗಬೇಕೆಂಬ ಹಂಬಲವಿದೆ ಎಂದು ಪರಮೇಶ್ವರ್ ಹೇಳಿದರು.
ಹೈಮಾಂಡ್ ನಾಯಕರು ಡಿಸಿಎಂ ಹುದ್ದೆ ಸೃಷ್ಟಿಸಿ ಅವಕಾಶ ನೀಡಿದರೆ, ನಾನು ಉಪ ಮುಖ್ಯಮಂತ್ರಿಯಾಗಲು ಸಿದ್ಧ. ಸಂರ್ಭನಾನುಸಾರ ವಿವಿಧ ರಾಜ್ಯಗಳಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ. ಕರ್ನಾಟಕದಲ್ಲಿ ಸೃಷ್ಟಿಸಿದರೆ ನಾನು ಡಿಸಿಎಂ ಆಗುತ್ತೇನೆ ಎಂದು ಘೋಷಿಸಿದರು.
ಎಲ್ಲರಿಗೂ ಸ್ವಾಗತ : ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ನಂಬಿ ಪಕ್ಷಕ್ಕೆ ಬರುವ ಎಲ್ಲರನ್ನೂ ನಾವು ಸ್ವಾಗತಿಸುತ್ತೇವೆ. ಆದರೆ, ಮೂರು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಅಧಿಕಾರ ಸಿಗುವುದಿಲ್ಲ. ಅಧಿಕಾರದ ಆಸೆ ಇಲ್ಲದೆ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದರು. ಅಧಿಕಾರ ದೊರೆಯಲಿಲ್ಲ ಎಂದು ಸಮಾಜವಾದಿ ಪಕ್ಷ ಸೇರಿದ್ದಾರೆ. ರಾಜಕೀಯಕ್ಕೆ ಬಂದ ಮೇಲೆ ಕಾಯುವ ತಾಳ್ಮೆ ಇರಬೇಕು ಎಂದು ಕಿವಿಮಾತು ಹೇಳಿದರು.
ಗೌಡರ ಅನುಕಂಪ : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನಗೆ ಅಧಿಕಾರ ಸಿಗಲಿಲ್ಲ ಎಂದು ಅನುಕಂಪ ಉಂಟಾಗಿದೆ.
ಆದರೆ, ವಿಧಾನಸಭೆ ಚುನಾವಣೆಯಲ್ಲಿ ಉಭಯ ನಾಯಕರು ಕೊರಟಗೆರೆ ಕ್ಷೇತ್ರದಲ್ಲಿ ನನಗೆ ಮತ ಹಾಕಬೇಡಿ ಎಂದು ಜನರಿಗೆ ಮನವಿ ಮಾಡಿದ್ದರು. ಜೆಡಿಎಸ್ ಪಕ್ಷದ ನಾಯಕರು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾರೆ ಅವರನ್ನು ನಂಬಿ ಯಾವುದೇ ಚುನಾವಣೆಯಲ್ಲಿಯೂ ಮತದಾನ ಮಾಡಬೇಡಿ ಎಂದು ಪರಮೇಶ್ವರ್ ಜನರಿಗೆ ಕರೆ ನೀಡಿದರು.