ವಿವಾಹಿತ ಪ್ರೇಯಸಿಯ ಹಂತಕನಿಗೆ ಜೀವಾವಧಿ ಶಿಕ್ಷೆ
ಪುತ್ತೂರು, ಆಗಸ್ಟ್ 16: ಸುಮಾರು ಎರಡೂವರೆ ವರ್ಷಗಳ ಹಿಂದೆ ತನ್ನ ಗರ್ಭಿಣಿ ಪ್ರೇಮಿಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ಜಿಲ್ಲಾ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಳ್ಯ ತಾಲೂಕಿನ ಉಬರಡ್ಕ ಮಿಟ್ಟೂರು ಗ್ರಾಮದ ಕರುಣಾಕರ ಪತಲಿ ತನ್ನ ಪ್ರೇಯಸಿ, 3 ತಿಂಗಳ ಗರ್ಭವತಿ ಅರುಣಾಶ್ರೀ ಅವರನ್ನು ಮರದ ಬಡಿಗೆಯಿಂದ ಹೊಡೆದು ಸಾಯಿಸಿದ್ದ.
ಪ್ರಕರಣಕ್ಕೆ ಏಕೈಕ ಸಾಕ್ಷಿಯಾಗಿದ್ದ ನೆರೆಮನೆಯಾಕೆ ಜಯಂತಿ ಅವರು ಸಹ ಪ್ರಕರಣದಿಂದ ಹಿಂದೆ ಸರಿದು ಪ್ರತಿಕೂಲ ಸಾಕ್ಷ್ಯ ನುಡಿದ ಬಳಿಕ, ಸರಕಾರಿ ವಕೀಲರು ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿ, ಅರೋಪಿ ಕಾನೂನು ಕುಣಿಕೆಯಿಂದ ಪಾರಾಗದಂತೆ ವಾದ ಮಂಡಿಸಿದ್ದರು.
ಸೊಣನಗೇರಿ ನಿವಾಸಿ ಹೊಸಗಡೆ ಗಣಪ್ಪಯ್ಯ ಗೌಡ ಅವರ ಪುತ್ರಿ ಅರುಣಾಶ್ರೀ ಮೊದಲು ಅರುಣ್ ಕುಮಾರ್ ಅವರನ್ನು ಮದುವೆಯಾಗಿದ್ದರು. ಆ ದಂಪತಿಗೆ ಒಂದು ಹೆಣ್ಣು ಮಗುವೂ ಇತ್ತು. ಆದರೆ ಅರುಣಾಶ್ರೀಗೆ ಮದುವೆಯೇತರ ಸಂಬಂಧವೂ ಇತ್ತು. ಅದು ಅರುಣ್ ಗೆ ತಿಳಿದು ಅವರು ಹೆಂಡತಿಯನ್ನು ಬಿಟ್ಟಿದ್ದರು. ಆದರೆ ಮಗುವನ್ನು ತಮ್ಮ ಬಳಿಯೇ ಜೋಪಾನ ಮಾಡಿದರು.
live-in relationship: ಇದಾದನಂತರ ಅರುಣಾಶ್ರೀ ಉಬರಡ್ಕ ಬಳಿ ಕರುಣಾಕರನ ಜತೆ ವಾಸವಾಗತೊಡಗಿದ್ದಳು. ಆದರೆ ಅವರು ಸತಿಪತಿಗಳಾಗಲಿಲ್ಲ. ಅವರಿಗೆ 4 ವರ್ಷದ ಒಂದು ಹೆಣ್ಣು ಮಗುವಿತ್ತು. ಈ ಮಧ್ಯೆ, 7 ವರ್ಷಗಳ ಕಾಲದ ಅರುಣಾಶ್ರೀ ಮತ್ತು ಕರುಣಾಕರ ಕೂಡುವಿಕೆ ನಂತರ, ಅವರ ಕುಟಂಬವರ್ಗ ಅವರಿಗೆ ಮದುವೆ ಮಾಡಿಸಿ, ಅವರ ಹೆಸರಿಗೆ ಒಂದಷ್ಟು ಜಮೀನನ್ನು ವರ್ಗಾಯಿಸಲು ಆಲೋಚಿಸಿತ್ತು.
ಆದರೆ ಕರುಣಾಕರ, ಅರುಣಾಶ್ರೀ ಜತೆ ವಿವಾಹವಾಗಲು ಒಲ್ಲೆಯೆಂದ. ಅರುಣಾಶ್ರೀ ಮತ್ತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದು ಕರುಣಾಕರನ ಅನುಮಾನವಾಗಿತ್ತು. ಕೊನೆಗೆ 36 ವರ್ಷದ ಅರುಣಾಶ್ರೀಯನ್ನು 39 ವರ್ಷದ ಕರುಣಾಕರ ಕುಡಿದು ಬಂದು, ಹೊಡೆದು ಸಾಯಿಸಿದ್ದ.