ಮಳೆ ನೀರು ಕೊಯ್ಲು ಅಳವಡಿಕೆಗೆ ಆ.20ರ ಗಡುವು
2,400 ಚದರ ಅಡಿಗಳಿಗಿಂತ ಮೇಲ್ಪಟ್ಟು ವಿಸ್ತೀರ್ಣ ಹೊಂದಿರುವ ನಿವೇಶನಗಳಲ್ಲಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ವ್ಯವಸ್ಥೆ ಆಳವಡಿಸಿಕೊಳ್ಳದ 5000 ಮನೆಗಳಿಗೆ ಜಲಮಂಡಳಿ ನೋಟಿಸ್ ನೀಡಿದೆ.
ಆ.20 ಅಂತಿಮ ಗಡುವಿನೊಳಗೆ ಮನೆಯ ಮಾಲೀಕರು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದಿದ್ದರೆ ನೀರು ಮತ್ತು ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸುವುದಾಗಿ ಅಂತಿಮ ಗಡುವು ನೀಡಿದೆ.
ಜಲಮಂಡಳಿ ಮುಖ್ಯ ಇಂಜಿನಿಯರ್ ವೆಂಕಟರಾಜು ಅವರು ಈ ಕುರಿತು ಹೇಳಿಕೆ ನೀಡಿದ್ದು, ಸಾರ್ವಜನಿಕರಿಗೆ ನಾವು ಪದ್ಧತಿ ಅಳವಡಿಸಿಕೊಳ್ಳಲು ಅಗತ್ಯ ಕಾಲಾವಕಾಶ ನೀಡಿದೆವು. ಆದರೆ, ಮಳೆ ಕೊಯ್ಲು ಪದ್ಧತಿ ನಗರದಲ್ಲಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಆದ್ದರಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
2009ರಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಬೆಂಗಳೂರಿನಲ್ಲಿ ಕಡ್ಡಾಯಗೊಳಿಸಿದಾಗ, 55,000 ಮನೆಗಳನ್ನು ಗುರುತಿಸಲಾಗಿತ್ತು. ಸದ್ಯ 13,000 ಮನೆಗಳು ಹೆಚ್ಚಾಗಿ ಸೇರ್ಪಡೆಗೊಂಡಿದ್ದು, ಅವುಗಳಿಗೂ ವ್ಯವಸ್ಥೆ ಆಳವಡಿಸುವುದು ಕಡ್ಡಾಯವಾಗಿದೆ. (ಮಳೆ ಕೊಯ್ಲು ಇಲ್ಲದ ಮನೆಗಳಿಗೆ ಬಂತು ನೋಟಿಸ್)
ಆದರೆ, ನಗರದಲ್ಲಿ ಇನ್ನೂ 5000 ಮನೆಗಳಿಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಆಳವಡಿಸಿಲ್ಲ. ಆದ್ದರಿಂದ ಅಂತಹ ಮನೆಗಳಿಗೆ ನೋಟಿಸ್ ಜಾರಿಗೊಳಿಸಿ ಜಲಮಂಡಳಿ ಕಾಲಾವಕಾಶ ನೀಡಿದೆ. ಆ.20ರೊಳಗೆ ಅಳವಡಿಸಿಕೊಳ್ಳದಿದ್ದರೆ ನೀರು ಸರಬರಾಜು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)